ಅಂಗನವಾಡಿಗಳಲ್ಲಿ ಕೊಳೆತ ಮೊಟ್ಟೆ ವಿತರಣೆ: ಪೂರೈಕೆದಾರರ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದು

ಹೊಳೆನರಸೀಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಅಂಗನವಾಡಿಯಲ್ಲಿ ಮಕ್ಕಳು ಮತ್ತು ಗರ್ಭಿಣಿಯರಿಗೆ ಕೊಳೆತ ಮೊಟ್ಟೆಗಳನ್ನು ಸರಬರಾಜು ಮಾಡಿರುವುದು ಬೆಳಕಿಗೆ ಬಂದಿದೆ.
ಕೊಳೆತ ಮೊಟ್ಟೆ ಪೂರೈಕೆ ಮಾಡಿರುವುದು.
ಕೊಳೆತ ಮೊಟ್ಟೆ ಪೂರೈಕೆ ಮಾಡಿರುವುದು.

ಹಾಸನ/ಬೆಂಗಳೂರು: ಹೊಳೆನರಸೀಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಅಂಗನವಾಡಿಯಲ್ಲಿ ಮಕ್ಕಳು ಮತ್ತು ಗರ್ಭಿಣಿಯರಿಗೆ ಕೊಳೆತ ಮೊಟ್ಟೆಗಳನ್ನು ಸರಬರಾಜು ಮಾಡಿರುವುದು ಬೆಳಕಿಗೆ ಬಂದಿದೆ.

ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡುವುದಕ್ಕೂ ಮುನ್ನ ಬೇಯಿಸಲಾಗಿದ್ದು, ಬೇಯಿಸಿದ ಬಳಿಕ ಮೊಟ್ಟೆ ಕೊಳೆತಿರುವ ವಿಚಾರ ಬೆಳಕಿಗೆ ಬಂದಿದೆ. ಹೊಳೆನರಸೀಪುರ ನಡೆದಿರುವ ಎರಡನೇ ಘಟನೆ ಇದಾಗಿದೆ.

ಕೊಳೆತ ಮೊಟ್ಟೆ ನೀಡಿದ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಪೋಷಕರು ಹಿರಿಯ ಅಧಿಕಾರಿಗಳ ವಿರುದ್ಧ ತೀವ್ರವಾಗಿ ಕಿಡಿಕಾರಿದರು. ಅಲ್ಲದೆ, ಮೊಟ್ಟೆ ಪೂರೈಕೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದರು

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು, ಆಹಾರ ಗುತ್ತಿಗೆದಾರರು ಮತ್ತು ರಾಜಕಾರಣಿಗಳ ನಡುವೆ ನಂಟು ಇದ್ದು, ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಮೊಟ್ಟೆ ಮತ್ತು ಪೌಷ್ಟಿಕ ಆಹಾರದಲ್ಲಿ ಗುಣಮಟ್ಟವನ್ನು ಎಂದಿಗೂ ಕಾಯ್ದುಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರೊಬ್ಬರು ಆರೋಪಿಸಿದ್ದಾರೆ.ಲಕ್ಷ್ಮೀಪುರ ಗ್ರಾಮಸ್ಥ ಲಕ್ಷ್ಮಣ್ ಎಂಬುವವರು ಮಾತನಾಡಿ, ಕೊಳೆತ ಮೊಟ್ಟೆಗಳನ್ನು ಸೇವಿಸಿ ಮಕ್ಕಳು ಅಸ್ವಸ್ಥರಾದರೆ ಯಾರು ಹೊಣೆ? ಪೂರೈಕೆದಾರರ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಯಾರು ಕಳಪೆ ಮೊಟ್ಟೆ ಪೂರೈಕೆ ಮಾಡಿದ್ದಾರೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದು ಹೇಳಿದರು.

ಅಷ್ಟೇ ಅಲ್ಲದೆ ಅಂತಹಾ ಪೂರೈಕೆದಾರರನ್ನು ಸಪ್ಲೈ ಲಿಸ್ಟ್ ನಿಂದಲೂ ಕೈ ಬಿಡುವಂತೆ ಸೂಚನೆ ನೀಡಿದ್ದೇನೆ. ಖರೀದಿ ವಿಕೇಂದ್ರೀಕರಣ ಮಾಡಿದ ಕಾರಣದಿಂದ ಗ್ರಾಮ ಪಂಚಾಯತಿ ಮಟ್ಟದಲ್ಲೂ ಮೊಟ್ಟೆ ಖರೀದಿ ಆಗುತ್ತಿದೆ. ‌ಯಾವುದೇ ನಿಯಂತ್ರಣ ಇಲ್ಲದೆ ಖರೀದಿ ನಡೆಯುತ್ತಿದೆ ಎಂಬುದು ಗಮನಕ್ಕೆ ಬಂದಿದೆ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂಬುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖ್ಯ ಉದ್ದೇಶ. ಆದರೆ, ನಮ್ಮ ಇಲಾಖೆಯ ಉದ್ದೇಶವೇ ಎಡವುತ್ತಿರುವುದು ಗಮನಕ್ಕೆ ಬಂದಿದೆ.‌ ಮೊಟ್ಟೆ ವಿಚಾರ ಕ್ಯಾಬಿನೆಟ್ ನಲ್ಲಿ ಪ್ರಸ್ತಾಪ ಮಾಡುತ್ತೇನೆ. ಇಲಾಖೆಯ ಉದ್ದೇಶ ಈಡೇರಿಸಲು ಬದ್ಧವಾಗಿದ್ದೇವೆ ಎಂದು ತಿಳಿಸಿದರು.

ವಿಕೇಂದ್ರೀಕರಣ ಮಾದರಿಯ ಖರೀದಿಯಿಂದ ಪ್ರಾಮಾಣಿಕವಾಗಿ  ಪೂರೈಕೆ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಖರೀದಿ ವ್ಯವಸ್ಥೆ ಕೇಂದ್ರೀಕೃತ ಮಾಡಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಿ ನಿಗಾ ಇಡಲಾಗುತ್ತದೆ. ಖಾಸಗಿ ಜೊತೆಗೆ  ಸರ್ಕಾರದ ಸಂಸ್ಥೆಗಳಿಂದ ಖರೀದಿಗೆ ಚಿಂತನೆ ಮಾಡಲಾಗಿದೆ. ಎಲ್ಲಾ ಪ್ರಸ್ತಾವಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು‌.

ಗೃಹ ಲಕ್ಷ್ಮೀ ಯೋಜನೆ ಜಾರಿ ವಿಚಾರವಾಗಿ ಮಾತನಾಡಿ, ಯೋಜನೆ ಜಾರಿಗೆ  ದಿನಾಂಕ ಗೊಂದಲ ಮಾತ್ರ ಇದೆ. ಇಲಾಖೆ ಸಿದ್ದವಿದೆ, ಅಗತ್ಯ ಅನುದಾನ ಹಾಗೂ ಫಲಾನುಭವಿ ಪಟ್ಟಿಗಳು ತಯಾರಿವೆ. ಆಧಾರ್ ಲಿಂಕ್ ಇರುವ ಅಕೌಂಟ್ ಅಷ್ಟೇ ಕೊಡುವುದೋ ಅಥವಾ ಬೇರೆ ಅಕೌಂಟ್ ಇರುವ ಫಲಾನುಭವಿಗಳಗೆ ಕೊಡುವುದೋ ಎಂಬ ಗೊಂದಲ ಇದೆ ಎಂದರು‌.

ಐದು ದಿನಗಳ ಹಿಂದೆ ಹೊಳೆನರಸೀಪುರ ಪಟ್ಟಣದ ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಕೊಳೆತ ಮೊಟ್ಟೆಗಳನ್ನು ಪೂರೈಕೆ ಮಾಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

ಬಳಿಕ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಅಂಗನವಾಡಿಗಳಿಗೆ ಭೇಟಿ ನೀಡಿ ಗುಣಮಟ್ಟದ ಮೊಟ್ಟೆ ಪೂರೈಕೆ ಮಾಡುವುದಾಗಿ ಹಾಗೂ ಆಹಾರ ಗುತ್ತಿಗೆದಾರರನ್ನು ಬದಲಾಯಿಸಲಾಗುವುದು ಎಂದು ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com