ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಪೊಲೀಸರಿಗಾಗಿ ಬಿಎಂಆರ್'ಸಿಎಲ್'ನಿಂದ ಸಮುದಾಯ ಭವನ ನಿರ್ಮಾಣ

ಕೆಆರ್ ಪುರಂ-ಸೆಂಟ್ರಲ್ ಸಿಲ್ಕ್ ಬೋರ್ಡ್ ಲೈನ್‌ನ ಸಂಬಂಧಿತ ಕಾಮಗಾರಿಗಳಿಗಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಕಟ್ಟಡವನ್ನು ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಪೊಲೀಸರಿಗಾಗಿ ಹೊಸ ಸಮುದಾಯ ಭವನವೊಂದನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ನಿರ್ಮಾಣ ಮಾಡುತ್ತಿದೆ.
ಬಿಎಂಆರ್‌ಸಿಎಲ್‌ ವತಿಯಿಂದ ಪೊಲೀಸರಿಗಾಗಿ ಹೊಸ ಸಮುದಾಯ ಭವನ ನಿರ್ಮಾಣವಾಗುತ್ತಿರುವುದು.
ಬಿಎಂಆರ್‌ಸಿಎಲ್‌ ವತಿಯಿಂದ ಪೊಲೀಸರಿಗಾಗಿ ಹೊಸ ಸಮುದಾಯ ಭವನ ನಿರ್ಮಾಣವಾಗುತ್ತಿರುವುದು.

ಬೆಂಗಳೂರು: ಕೆಆರ್ ಪುರಂ-ಸೆಂಟ್ರಲ್ ಸಿಲ್ಕ್ ಬೋರ್ಡ್ ಲೈನ್‌ನ ಸಂಬಂಧಿತ ಕಾಮಗಾರಿಗಳಿಗಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಕಟ್ಟಡವನ್ನು ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಪೊಲೀಸರಿಗಾಗಿ ಹೊಸ ಸಮುದಾಯ ಭವನವೊಂದನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ನಿರ್ಮಾಣ ಮಾಡುತ್ತಿದೆ.

ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಮೆಟ್ರೋ ಹಿರಿಯ ಅಧಿಕಾರಿಯೊಬ್ಬರು, ಸಮುದಾಯ ಭವನದ ಶೇಕಡಾ 80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾರ್ಯಗಳೂ ಪ್ರಗತಿಯಲ್ಲಿವೆ. ಸಾಂಕ್ರಾಮಿಕ ರೋಗ ಮತ್ತು ಭಾರೀ ಮಳೆಯಿಂದಾಗಿ ಕಾಮಗಾರಿ ಕಾರ್ಯಗಳು 1.5 ವರ್ಷಗಳಷ್ಟು ವಿಳಂಬವಾಗಿತ್ತು ಎಂದು ಹೇಳಿದ್ದಾರೆ.

ಮುಂದಿನ ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿಗಳಿವೆ. ರೂ.20 ಕೋಟಿ ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಭವನ ಬಸ್ ನಿಲ್ದಾಣದ ಪಕ್ಕದ ಜಂಕ್ಷನ್‌ನಲ್ಲಿದೆ. ಕೆಎಸ್‌ಆರ್‌ಪಿ ಕಟ್ಟಡವನ್ನು ವಶಕ್ಕೆ ಪಡೆದುಕೊಂಡಾಗ ಅಲ್ಲಿನ ಕಾಮಗಾರಿ ಕಾರ್ಯಗಳು ಶೇ.25ರಷ್ಟು ಪೂರ್ಣಗೊಂಡಿತ್ತು. ಭೂಮಿ ವಶಕ್ಕೆ ಪಡೆಯುತ್ತಿದ್ದೇವೆಂಬ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ಕಾಮಗಾರಿ ಕಾರ್ಯಗಳನ್ನು ಅವರು ನಿಲ್ಲಿಸಿದ್ದರು. ವಶಕ್ಕೆ ಪಡೆದ ಬಳಿಕ ಬಿಎಂಆರ್'ಸಿಎಲ್ ಅನಿವಾರ್ಯವಾಗಿ ನಿರ್ಮಾಣಗೊಂಡಿದ್ದ ಕಟ್ಟಡವನ್ನು ನೆಲಸಮ ಮಾಡಲೇಬೇಕಾಗಿತ್ತು. ಪ್ರಸ್ತುತ ನಿರ್ಮಾಣವಾಗಿರುವ ಹೊಸ ಕಟ್ಟಡ ಮೇಲ್ಸೇತುವೆಗೆ ಹತ್ತಿರದಲ್ಲಿದೆ ಎಂದು ತಿಳಿಸಿದ್ದಾರೆ.

ಕಟ್ಟಡವನ್ನು ಬಿಎಂಆರ್‌ಸಿಎಲ್ ನಿರ್ಮಿಸುತ್ತಿದೆ. ಆದರೆ, ಇದರ ವೆಚ್ಚವನ್ನು ಬಿಬಿಎಂಪಿ ಅಥವಾ ಬಿಡಿಎ ನೀಡಲಿದೆ ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಸಮುದಾಯ ಭವನಕ್ಕೆ ನವೆಂಬರ್ 27, 2020 ರಂದು ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕಟ್ಟಡವು ಜೂನ್ 2022 ರ ವೇಳೆಗೆ ಉದ್ಘಾಟನೆಗೊಳ್ಳಬೇಕಿತ್ತು. ಆದರೆ ಸಾಂಕ್ರಾಮಿಕ ರೋದ ಮತ್ತು ಭಾರೀ ಮಳೆಯಿಂದಾಗಿ ಕಾಮಗಾರಿ ವಿಳಂಬವಾಗಿತ್ತು. ಇದೀಗ ಸೆಪ್ಟೆಂಬರ್ ಅಂತ್ಯದ ವೇಳೆಗೆ ಅಥವಾ ಅಕ್ಟೋಬರ್ ಆರಂಭದಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ವೆಂಕಟರಾಮನ್ ಅಸೋಸಿಯೇಟ್ಸ್ ಕಟ್ಟಡವನ್ನು ವಿನ್ಯಾಸಗೊಳಿಸಿದೆ. ನೆಲ ಮಹಡಿಯಲ್ಲಿ ಸಾಕಷ್ಟು ಪಾರ್ಕಿಂಗ್ ಸ್ಥಳವಿದೆ. ಕಟ್ಟಡವನ್ನು ಮದುವೆ ಮಂಟಪವಾಗಿ ಅಥವಾ ಸಮ್ಮೇಳನಗಳು ಅಥವಾ ಸಭೆಗಳನ್ನು ನಡೆಸಲು ಬಳಸಬಹುದು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com