ಚಂದ್ರಯಾನ-3 ಬಗ್ಗೆ ಕನ್ನಡ ಉಪನ್ಯಾಸಕ ಅಪಹಾಸ್ಯ; ಸ್ಪಷ್ಟನೆ ಕೋರಿ ಮಧು ಬಂಗಾರಪ್ಪಗೆ ಬಿಜೆಪಿ ಶಾಸಕ ಪತ್ರ
ಬೆಂಗಳೂರು: ಬಿಜೆಪಿ ನಾಯಕ ಎಸ್ ಸುರೇಶ್ ಕುಮಾರ್ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದು, ಇಸ್ರೋದ ಚಂದ್ರಯಾನ-3 ಮಿಷನ್ ಅನ್ನು ಅಪಹಾಸ್ಯ ಮಾಡಿದ ಆರೋಪದ ಮೇಲೆ ಕನ್ನಡ ಉಪನ್ಯಾಸಕರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಜುಲೈ 17 ರಂದು ಬರೆದ ಪತ್ರದಲ್ಲಿ, ಮಲ್ಲೇಶ್ವರಂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಹುಲಿಕುಂಟೆ ಮೂರ್ತಿ ಅವರು ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ರ ವಿರುದ್ಧ ಪೋಸ್ಟ್ ಮಾಡುವ ಮೂಲಕ 'ಕೆಟ್ಟ' ವರ್ತನೆ ತೋರಿದ್ದಾರೆ ಎಂದು ಬಿಜೆಪಿ ಶಾಸಕರು ದೂರಿದ್ದಾರೆ.
'ಚಂದ್ರಯಾನ-3 ವಿಫಲವಾಗಲಿದೆ...' ಎಂದು ಆರೋಪಿಸಿ ಕನ್ನಡದಲ್ಲಿ ಟ್ವಿಟ್ ಮಾಡಿರುವ ಮೂರ್ತಿ, 'ತಿರುಪತಿ ನಾಮ' ಎಂಬ ಪದವನ್ನು ಬಳಸಿ, ಚಂದ್ರಯಾನ ಈ ಬಾರಿಯೂ ವಿಫಲವಾಗಲಿದೆ ಎಂದಿದ್ದಾರೆ.
ಚಂದ್ರಯಾನ-3 ಉಡಾವಣೆಗೂ ಮುನ್ನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳ ತಂಡವೊಂದು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನು ಗಮನಿಸಿದ ಬಿಜೆಪಿ ಶಾಸಕರು ತಮ್ಮ ಪತ್ರದಲ್ಲಿ, ಅಂತಹ ವ್ಯಕ್ತಿ ವಿದ್ಯಾರ್ಥಿಗಳನ್ನು ಹೇಗೆ ಪ್ರೇರೇಪಿಸಬಹುದು. ಇಡೀ ದೇಶವೇ ಚಂದ್ರಯಾನ-3ರ ಯಶಸ್ಸಿಗೆ ಹಾರೈಸಿ ಪ್ರಾರ್ಥಿಸುತ್ತಿರುವಾಗ, ಹುಲಿಕುಂಟೆ ಮೂರ್ತಿ ಅವರು ಈ ಬಾರಿಯೂ ಚಂದ್ರಯಾನ ವಿಫಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅಸಡ್ಡೆಯ ವರ್ತನೆ ತೋರಿದ್ದಾರೆ' ಎಂದಿದ್ದಾರೆ.
'ಅವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಈ ರೀತಿಯಾಗಿ ತೋರಿಸಿದ್ದಾರೆ. ಅಂತಹ ವ್ಯಕ್ತಿ ನಮ್ಮ ವಿದ್ಯಾರ್ಥಿಗಳನ್ನು ಹೇಗೆ ಪ್ರೇರೇಪಿಸಬಹುದು? ಈ ಬಗ್ಗೆ ಅವರನ್ನು ಪ್ರಶ್ನಿಸಲು ಮತ್ತು ಈ ರೀತಿಯ ಬೇಜವಾಬ್ದಾರಿ ವರ್ತನೆಯನ್ನು ಪುನರಾವರ್ತಿಸದಂತೆ ಎಚ್ಚರಿಸಲು ನಾನು ವಿನಂತಿಸುತ್ತೇನೆ' ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಜುಲೈ 14 ರಂದು, ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಿಗದಿತ ಸಮಯದಲ್ಲಿ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಯಿತು.
ಬಾಹ್ಯಾಕಾಶ ನೌಕೆಗೆ ಭೂಮಿಯಿಂದ ಚಂದ್ರನವರೆಗೆ ಪ್ರಯಾಣವು ಸುಮಾರು ಒಂದು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ ಮತ್ತು ಆಗಸ್ಟ್ 23 ರಂದು ಚಂದ್ರನ ಮೇಲೆ ಲ್ಯಾಂಡಿಂಗ್ ಅನ್ನು ನಿರೀಕ್ಷಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ