ಶೇ.92ರಷ್ಟು ಶಾಸಕರು ಅಧಿವೇಶನದಲ್ಲಿ ಹಾಜರಿದ್ದರು: ಸ್ಪೀಕರ್ ಯುಟಿ ಖಾದರ್

ಶುಕ್ರವಾರ ಮುಕ್ತಾಯಗೊಂಡ 15 ದಿನಗಳ ವಿಧಾನಮಂಡಲ ಅಧಿವೇಶನದ ಕಲಾಪ 78 ಗಂಟೆ 25 ನಿಮಿಷಗಳ ಕಾಲ ನಡೆದಿದ್ದು, ಅಧಿವೇಶನದಲ್ಲಿ ಸರಾಸರಿ ಶೇ 92 ರಷ್ಟು ಶಾಸಕರ ಹಾಜರಾತಿಯನ್ನು ಇತ್ತು. ಇದು ಉತ್ತಮ ಆರಂಭವಾಗಿದೆ ಎಂದು ಸ್ಪೀಕರ್ ಯುಟಿ ಖಾದರ್ ಅವರು ಹೇಳಿದರು.
ಸ್ಪೀಕರ್ ಯುಟಿ ಖಾದರ್
ಸ್ಪೀಕರ್ ಯುಟಿ ಖಾದರ್

ಬೆಂಗಳೂರು: ಶುಕ್ರವಾರ ಮುಕ್ತಾಯಗೊಂಡ 15 ದಿನಗಳ ವಿಧಾನಮಂಡಲ ಅಧಿವೇಶನದ ಕಲಾಪ 78 ಗಂಟೆ 25 ನಿಮಿಷಗಳ ಕಾಲ ನಡೆದಿದ್ದು, ಅಧಿವೇಶನದಲ್ಲಿ ಸರಾಸರಿ ಶೇ 92 ರಷ್ಟು ಶಾಸಕರ ಹಾಜರಾತಿಯನ್ನು ಇತ್ತು. ಇದು ಉತ್ತಮ ಆರಂಭವಾಗಿದೆ ಎಂದು ಸ್ಪೀಕರ್ ಯುಟಿ ಖಾದರ್ ಅವರು ಹೇಳಿದರು.

ಶುಕ್ರವಾರ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು, ಜು.3 ರಿಂದ 23 ರವರೆಗೆ 15 ದಿನಗಳ ಕಾಲ 78.25 ಗಂಟೆ ಕಲಾಪ ನಡೆದಿದೆ. ಮೊದಲ ದಿನ ರಾಜ್ಯಪಾಲರು ಜಂಟಿ ಸದನ ಉದ್ದೇಶಿಸಿ ಮಾಡಿದ ಭಾಷಣದ ಮೇಲೆ 34 ಸದಸ್ಯರು 12.39 ಗಂಟೆ ಚರ್ಚೆ ನಡೆಸಿದ್ದಾರೆಂದು ಮಾಹಿತಿ ನೀಡಿದರು.

ಜು.7 ರಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ ಮೇಲೆ 62 ಸದಸ್ಯರು 12.52 ಗಂಟೆ ಚರ್ಚಿಸಿದ್ದು, ಗುರುವಾರ ಸಿಎಂ ಉತ್ತರ ನೀಡಿದ ನಂತರ ಬಜೆಟ್‌ಗೆ ಅನುಮೋದನೆ ನೀಡಲಾಗಿದೆ. ಸರಾಸರಿ ಶೇ.92 ಸದಸ್ಯರ ಹಾಜರಾತಿ ಇತ್ತು. ವಿಧೇಯಕಗಳ ಬಗ್ಗೆ ಹೊಸ ಶಾಸಕರು ಸೇರಿ ಎಲ್ಲ ಶಾಸಕರಿಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಅಧಿಕಾರಿಗಳನ್ನು ನಿಯುಕ್ತಿಗೊಳಿಸುವ ಮೂಲಕ ಹೊಸ ಪರಿಪಾಠಕ್ಕೆ ನಾಂದಿ ಹಾಡಲಾಗಿದೆ ಎಂದು ಸಂತಸ ಹಂಚಿಕೊಂಡರು.

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ವರದಿ ಸೇರಿ ಸಿಎಜಿ ವರದಿ, 29 ಅಧಿಸೂಚನೆ, 2 ಅಧ್ಯಾದೇಶ, 70 ವಾರ್ಷಿಕ ವರದಿ, 99 ಲೆಕ್ಕ ಪರಿಶೋಧನಾ ವರದಿ, 4 ಅನುಪಾಲನ ವರದಿ, 01 ಲೆಕ್ಕ ತಪಾಸಣಾ ವರದಿಗಳು ಮಂಡನೆಯಾಗಿವೆ. ಧನವಿನಿಯೋಗ ವಿಧೇಯಕಸಹಿತ 14 ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

 ನಾಡಿನ ವಿವಿಧೆಡೆಗಳಿಂದ ಅಧಿವೇಶನ ವೀಕ್ಷಿಸಲು ಬರುವ ವಿದ್ಯಾರ್ಥಿಗಳನ್ನು ವಿಧಾನಸೌಧದ ಹೊರಗೆ ಬಿಸಿಲಲ್ಲಿ ನಿಲ್ಲಿಸುವ ಬದಲು ಒಳಗೇ ಕೂರಿಸುವ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅಧಿವೇಶನ ವೀಕ್ಷಿಸಲು ಬರುವವರು ಡಿಡಿಪಿಐ ಮೂಲಕ ಇ-ಮೇಲ್‌ ಮಾಡಿದರೆ ದಿನಾಂಕ ಮತ್ತು ಸಮಯವನ್ನು ಕಾಯ್ದಿರಿಸಲಾಗುತ್ತದೆ. ವಿಧಾನಸೌಧದ ಒಳಾಂಗಣದಲ್ಲಿ ಮ್ಯಾಟ್‌ ಹಾಕಿ ಅವರನ್ನು ಕೂರಿಸಲಾಗುತ್ತದೆ. ಕಲಾಪ ನಡೆಯುವ ವಿಧಾನ ಸಭಾಂಗಣದೊಳಕ್ಕೆ ನಿಗದಿತ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳನ್ನು ಬಿಡಲಾಗುತ್ತದೆ ಎಂದು ಸ್ಪೀಕರ್‌ ಖಾದರ್‌ ಹೇಳಿದರು.ನಿಯಮ 60 ರ ಡಿ ನೀಡಿದ್ದ 6 ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಿ, 4 ಸೂಚನೆಗಳ ಮೇಲೆ ಚರ್ಚೆಯೂ ನಡೆದಿದೆ.

ಸ್ವೀಕರಿಸಿದ್ದ 1149 ಪ್ರಶ್ನೆಗಳಲ್ಲಿ 120 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಿದ್ದು, 1013 ಪ್ರಶ್ನೆಗಳಲ್ಲಿ 966 ಪ್ರಶ್ನೆಗಳಿಗೆ ಲಿಖೀತ ಉತ್ತರ ನೀಡಲಾಗಿದೆ. ನಿಯಮ 351 ರ ಅನ್ವಯ 249 ಸೂಚನೆಗಳಲ್ಲಿ 153 ಸೂಚನೆಗಳಿಗೆ ಉತ್ತರ ಕೊಟ್ಟಿದ್ದು, ಗಮನ 202 ಗಮನ ಸೆಳೆಯುವ ಸೂಚನೆ ಪೈಕಿ 181 ಸೂಚನಾ ಪತ್ರಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಶಾಸಕರ ಅಮಾನತು ವಿಚಾರ ಕುರಿತು ಮಾತನಾಡಿದ ಅವರು, ವಿಧಾನಸಭೆಯಲ್ಲಿ ತಾನು ಉಪಸಭಾಧ್ಯಕ್ಷರನ್ನು ಪೀಠದಲ್ಲಿ ಕೂರಿಸಿ ಮಹತ್ವದ ಸಭೆಯೊಂದಕ್ಕೆ ತೆರಳಿದ್ದೆ. ಈ ವೇಳೆ ಸದನದಲ್ಲಿ 10 ಮಂದಿ ಬಿಜೆಪಿ ಶಾಸಕರು ಪ್ರತಿಭಟನೆ ಮಾಡುವಾಗ ಉಪಸಭಾಧ್ಯಕ್ಷರ ಮುಖಕ್ಕೆ ಕಾಗದ ಪತ್ರಗಳನ್ನು ಹರಿದು ಎಸೆದಿದ್ದಾರೆ. ಇದನ್ನು ಸಹಿಸಲು ಅಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜು.19ರಂದು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸರಕಾರದ ನಿಲುವನ್ನು ವಿರೋಧಿಸಿ ಸದನದ ಬಾವಿಯಲ್ಲಿ ಧರಣಿ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಕೆಲವು ಸದಸ್ಯರು ಸಭಾಧ್ಯಕ್ಷರ ಪೀಠಕ್ಕೆ ಅಗೌರವವಾಗಿ, ಅಶಿಸ್ತಿನಿಂದ ನಮ್ಮ ರಾಜ್ಯಕ್ಕೆ ಹಾಗೂ ಜನತೆಯ ಭಾವನೆಗಳಿಗೆ ಕಪ್ಪು ಚುಕ್ಕೆ ಬರುವಂತೆ ವರ್ತಿಸಿರುವುದರಿಂದ ಅತ್ಯಂತ ನೋವಿನಿಂದ ಆ ಸದಸ್ಯರ ಹೆಸರಿಸಿ ಸದನಕ್ಕೆ ಬಾರದಂತೆ ಅಮಾನತುಗೊಳಿಸಲಾಯಿತು.

ಸಭಾಧ್ಯಕ್ಷನಾಗಿ, ಈ ಪೀಠದ ಗೌರವವನ್ನು ಉಳಿಸುವಂತಹ ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವದ ಸಂಸದೀಯ ವ್ಯವಸ್ಥೆಯಲ್ಲಿ ಸದನವು ಅತ್ಯಂತ ಗೌರವ ಮತ್ತು ಪವಿತ್ರವಾದದು ಎಂದು ಭಾವಿಸಿ, ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ ಎಂದು ಅವರು ಹೇಳಿದರು.

ನಾನು ಈಗ ಸದನದ ಸಭಾಧ್ಯಕ್ಷ. ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ಪಕ್ಷಕ್ಕೆ ಸೇರಿದವನಲ್ಲ. ನನಗೆ ಯಾವುದೇ ಪಕ್ಷ ಇಲ್ಲ. ರಾಜ್ಯದ, ಜನರ ಸಮಸ್ಯೆಗಳನ್ನು ಚರ್ಚೆ ನಡೆಸಲು ಅಧಿವೇಶನ ಕರೆಯುವುದು. ಚುನಾಯಿತ ಪ್ರತಿನಿಧಿಗಳು ಸದನದ ಅಮೂಲ್ಯ ಸಮಯವನ್ನು ಹಾಳು ಮಾಡಬಾರದು ಎಂದು ತಿಳಿಸಿದರು.

ಇದೇ ವೇಳೆ ದೇಶದ ವಿವಿಧ ರಾಜ್ಯಗಳ ನಾಯಕರು ಬೆಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ ಸಭೆ ನಡೆಸುತ್ತಿದ್ದಾಗ ಸ್ಪೀಕರ್ ಅಲ್ಲಿಗೆ ಭೇಟಿ ನೀಡಿದ್ದು ಏಕೆ? ಎಂದು ಪ್ರಶ್ನಿಸಿರುವ ವಿಪಕ್ಷಗಳಿಗೆ ತಿರುಗೇಟು ನೀಡಿದ ಅವರು, ಮುಖ್ಯಮಂತ್ರಿಯು ಗಣ್ಯರನ್ನು ರಾಜ್ಯ ಅತಿಥಿಗಳಾಗಿ ಗೌರವಿಸಿ ಔತಣಕೂಟ ಏರ್ಪಡಿಸಿದ್ದರು. ನನಗೂ ವೈಯಕ್ತಿಕವಾಗಿ ಆಹ್ವಾನ ನೀಡಿದ್ದರಿಂದ ನಾನು ಹೋಗಿದ್ದೆ. ಅಲ್ಲಿ ಯಾವುದೊ ಸಭೆಯಲ್ಲಿ ಭಾಗವಹಿಸಲು ಹೋಗಿರಲಿಲ್ಲ ಎಂದರು.

ಸದನದ ಕಾರ್ಯ ಕಲಾಪಗಳನ್ನು ಸಮಯಕ್ಕೆ ಸರಿಯಾಗಿ ನಡೆಸಲು ಸಹಕಾರಿಯಾಗುವಂತೆ, ನಿಗದಿತ ಸಮಯದಲ್ಲಿ ಹಾಜರಾದ ಸದಸ್ಯರ ಹೆಸರುಗಳನ್ನು ಪ್ರತಿ ದಿನ ಪ್ರಕಟಿಸಲಾಗುತ್ತಿತ್ತು. ಸರಾಸರಿ ಸದಸ್ಯರ ಹಾಜರಾತಿ ಶೇ.92ರಷ್ಟಿತ್ತು. ವರ್ಷಕ್ಕೆ ಕನಿಷ್ಠ 60 ದಿನ ಸದನ ನಡೆಯಬೇಕು ಎಂಬುದು ನಮ್ಮ ಅಪೇಕ್ಷೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com