ಬೆಂಗಳೂರಿನ ‘ಸಿಂಗಪುರ ಕನಸು’ ಈಗ ನನಸಾಗಿದೆ: ಮಾಜಿ ಸಿಎಂ ಎಸ್ಎಂ.ಕೃಷ್ಣ

ಈ ಹಿಂದೆ ಬೆಂಗಳೂರು ಸಿಂಗಾಪುರವನ್ನು ಹಿಂದಿಕ್ಕಲಿದೆ ಎಂದು ಹೇಳುತ್ತಿದ್ದೆ. ಆದರೆ, ಇದನ್ನು ಯಾರೂ ನಂಬುತ್ತಿರಲಿಲ್ಲ. ಆದರೀಗ ಆ ಕನಸು ನನಸಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಹೇಳಿದ್ದಾರೆ.
ಎಸ್ಎಂ.ಕೃಷ್ಣ
ಎಸ್ಎಂ.ಕೃಷ್ಣ

ಬೆಂಗಳೂರು: ಈ ಹಿಂದೆ ಬೆಂಗಳೂರು ಸಿಂಗಾಪುರವನ್ನು ಹಿಂದಿಕ್ಕಲಿದೆ ಎಂದು ಹೇಳುತ್ತಿದ್ದೆ. ಆದರೆ, ಇದನ್ನು ಯಾರೂ ನಂಬುತ್ತಿರಲಿಲ್ಲ. ಆದರೀಗ ಆ ಕನಸು ನನಸಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಹೇಳಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಬೆಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ (ಬಿಎಂಎ) 66 ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಸ್.ಎಂ.ಕೃಷ್ಣ ಅವರು ಮಾತನಾಡಿದರು.

ಈ ಹಿಂದೆ ಬೆಂಗಳೂರು ಸಿಂಗಾಪುರವನ್ನು ಹಿಂದಿಕ್ಕಲಿದೆ ಎಂದು ಹೇಳುತ್ತಿದ್ದೆ. ಆದರೆ, ಇದನ್ನು ಯಾರೂ ನಂಬುತ್ತಿರಲಿಲ್ಲ. ಆದರೀಗ ಆ ಕನಸು ನನಸಾಗಿದೆ.ನಗರವು ಸಿಂಗಾಪುರದ ಆರ್ಥಿಕ ಸಾಮರ್ಥ್ಯಗಳನ್ನು ಭಾರಿ ಅಂತರದಿಂದ ಹಿಂದಿಕ್ಕಿದೆ ಎಂದು ಹೇಳಿದರು.

ಕರ್ನಾಟಕಕ್ಕೆ ಶೇ.45ರಷ್ಟು ಆದಾಯವು ಬೆಂಗಳೂರಿನಿಂದಲೇ ಬರುತ್ತದೆ ಎಂದು ಹೇಳಿದ್ದೆ. ಕೆಲವು ಸಮಯಗಳ ಕಾಲ ಬೆಂಗಳೂರನ್ನು ಬದಿಗೆ ಒತ್ತಲಾಗಿತ್ತು. ಆಗ ಅಭಿವೃದ್ಧಿ ಕೆಲಸಗಳಾಗಿರಲಿಲ್ಲ. ಆದರೆ, ಹೊಸ ಸರ್ಕಾರ ರಚನೆಯಾಗಿದ್ದು, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಬೆಂಗಳೂರು ಅಭಿವೃದ್ಧಿ ಸಚಿವರಾಗಿ, ಸಿಲಿಕಾನ್ ಸಿಟಿಯನ್ನು ಅಭಿವೃದ್ಧಿ ಮಾಡುತ್ತಿದ್ದಾರೆ ಎಂದರು. ಇದೇ ವೇಳೆ ಅಧಿಕಾರಾವಧಿಯ ಮೂಲಸೌಕರ್ಯ ನೀತಿಗಳು ಹಾಗೂ ಅನುಭವಗಳನ್ನೂ ಸ್ಮರಿಸಿದರು.

ಇನ್ನು ಕೆಲವೇ ವರ್ಷಗಳಲ್ಲಿ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಈ ನಿಟ್ಟಿನಲ್ಲಿ ಹಲವಾರು ಸರ್ಕಾರಘಳು ಎಲ್ಲಾ ಕ್ಷೇತ್ರಗಳಲ್ಲಿ ಕೊಡುಗೆ ನೀಡುವ ಮೂಲಕ ಅದನ್ನು ಸಾಧಿಸಿವೆ ಎಂದರು.

ಇದೇ ವೇಳೆ ಎಸ್ಎಂ ಕೃಷ್ಣ ಅವರಿಗೆ ಬೆಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ (ಬಿಎಂಎ) ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಕೌನ್ಸಿಲ್ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ಅಧ್ಯಕ್ಷ ಕೆ ಉಲ್ಲಾಸ್ ಕಾಮತ್ ಅವರು ಮಾತನಾಡಿ,  ಕೈಗಾರಿಕೆ, ಸರ್ಕಾರ ಮತ್ತು ಶೈಕ್ಷಣಿಕ ಸಹಯೋಗವನ್ನು ಹೊಂದಿರುವ ದೇಶದ ಏಕೈಕ ರಾಜ್ಯ ಕರ್ನಾಟಕವಾಗಿದೆ. "ಎಲ್ಲವೂ ಒಟ್ಟಾಗಿ ಕೆಲಸ ಮಾಡುತ್ತಿವೆ" ಎಂದು ಹೇಳಿದರು.

ಪ್ರಸ್ತುತ, ದೇಶದ ಜಿಡಿಪಿಗೆ ಕೊಡುಗೆ ನೀಡುತ್ತಿರುವ ಮಹಾರಾಷ್ಟ್ರ ಮತ್ತು ತಮಿಳುನಾಡು ನಂತರದ ಸ್ಥಾನವನ್ನು ಕರ್ನಾಟಕ ಪಡೆದುಕೊಂಡಿದೆ. ರಾಜ್ಯವು ಶೇ.8.4% ರಷ್ಟು ಕೊಡುಗೆಯನ್ನು ನೀಡುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ತಮಿಳುನಾಡು ರಾಜ್ಯವನ್ನು ಕರ್ನಾಟಕ ಹಿಂದಿಕ್ಕಲಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com