ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ಬುಧವಾರ ಕೆಸಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿನ ಹಲವು ಲೋಪದೋಷಗಳ ಪತ್ತೆ ಮಾಡಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಚಿವರ ಭೇಟಿ ವೇಳೆ ಆಸ್ಪತ್ರೆಯಲ್ಲಿದ್ದ ಕಾರ್ಯನಿರ್ವಹಿಸದ ವಾರ್ಡ್ಗಳು, ನಿಷ್ಕ್ರಿಯಗೊಂಡಿರುವ ಶವಾಗಾರ, ಹವಾನಿಯಂತ್ರಣಗಳ ಕೊರತೆ ಮತ್ತು ಡಯಾಲಿಸಿಸ್ ಕೇಂದ್ರದಲ್ಲಿನ ಅವ್ಯವಸ್ಥೆ ಸೇರಿದಂತೆ ಹಲವಾರು ಲೋಪದೋಷಗಳನ್ನು ಗಮನಿಸಿದರು.
ಆಸ್ಪತ್ರೆಯಲ್ಲಿ ಪ್ರತಿದಿನ 1,300-1,500 ರೋಗಿಗಳು ಒಪಿಡಿಗೆ ಬರುತ್ತಾರೆ. ಆಸ್ಪತ್ರೆ ಶವಾಗಾರವೂ ಇಲ್ಲದೇ ಸಾಗುತ್ತಿದೆ. ಮೃತದೇಹಗಳನ್ನು ಇರಿಸಲು ಒಂದು ಕೋಣೆಯನ್ನು ಮೀಸಲಿಡಲಾಗಿದೆ. 13-15 ಗಂಟೆಗಳ ಕಾಲ ಇರಿಸಲಾಗುತ್ತೆ. ಶವಗಳ ಗುರ್ತಿಸಲಾಗದಿದ್ದರೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಕೋಲ್ಡ್ ಸ್ಟೋರೇಜ್ ಸೌಲಭ್ಯಗಳು ಮತ್ತು ಫೋರೆನ್ಸಿಕ್ ವೈದ್ಯರ ಲಭ್ಯತೆಯಿಲ್ಲದ ಕಾರಣ ಶವಾಗಾರ ನಿಷ್ಕ್ರಿಯಗೊಂಡಿದೆ. ಕಟ್ಟಡ ಸೋರುತ್ತಿರುವುದರಿಂದಾಗಿ ಐಸಿಯು ಮೂಳೆ ಚಿಕಿತ್ಸಾ ವಿಭಾಗಗಳು ಸೇರಿದಂತೆ ಹಲವು ವಾರ್ಡ್'ಗಳು ಬಳಕೆಯಾಗದೆ ಉಳಿದಿರುವುದನ್ನು ಗಮನಿಸಿದರು.
ಈ ವೇಳೆ ಇತರ ಆಸ್ಪತ್ರೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಈ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ವೈದ್ಯಕೀಯ ಅಧೀಕ್ಷಕಿ ಇಂದಿರಾ ಕಬಾಡೆ ಮತ್ತು ವೈದ್ಯಾಧಿಕಾರಿ ಡಾ.ಮೋಹನ್ ಆರ್ ಅವರಿಗೆ ಸೂಚನೆ ನೀಡಿದರು. ಇದೇ ವೇಳೆ ಶೀಘ್ರದಲ್ಲೇ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್ ಸೆಂಟರ್ ತೆರೆಯಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಆಪರೇಷನ್ ಥಿಯೇಟರ್ಗಳು ಮತ್ತು ಲೇಬರ್ ವಾರ್ಡ್ ಗಳ ಸ್ಥಿತಿ ಕೂಡ ಇದೇ ರೀತಿ ಇದೆ. ಆಸ್ಪತ್ರೆ ಸುಸಜ್ಜಿತವಾಗಿದ್ದರೂ ಕಟ್ಟಡವು ತುಂಬಾ ಹಳೆಯದಾದ ಕಾರಣ ಆಗಾಗ್ಗೆ ಸೋರಿಕೆ ಸಮಸ್ಯೆಗಳು ಎದುರಾಗುತ್ತಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು. ಇದೇ ವೇಳೆ ಸೂಕ್ತ ರೀತಿಯ ಚಿಕಿತ್ಸೆ ನೀಡಲು ಐಸಿಯು ಸೌಲಭ್ಯಗಳೊಂದಿಗೆ ತಾಯಿ ಮತ್ತು ಮಕ್ಕಳ ಆರೋಗ್ಯ ಕಟ್ಟಡವೊಂದರ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.
ಬಳಿಕ ಡಯಾಲಿಸಿಸ್ ಕೇಂದ್ರದ ವ್ಯವಸ್ಥೆಯನ್ನು ಕಂಡ ಸಚಿವರು, ಗಾಲಿ ಕುರ್ಚಿಗಳು, ಕುಡಿಯುವ ನೀರಿನ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧಿಗಳನ್ನು ಹೊರಗೆ ತೆಗೆದುಕೊಳ್ಳಲು ಬರೆದುಕೊಡುತ್ತಿರುವ ಮಾಹಿತಿ ಬಂದಿದೆ. ಯಾರೂ ಕೂಡ ಹೊರಗೆ ಔಷಧಿ ತೆಗೆದುಕೊಳ್ಳಲು ಸೂಚಿಸಬಾರದು ಎಂದು ಸ್ಪಷ್ಟಪಡಿಸಿದರು.
Advertisement