ಬೆಂಗಳೂರು: ಬಸ್ ಕಂಡಕ್ಟರ್ ಹಾಗೂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮೇಲೆ ಹಲ್ಲೆ ನಡೆಸಿದ ಯುವಕನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಬಿಡುಗಡೆಗೆ ಒತ್ತಾಯಿಸಿ ಕುಟುಂಬಸ್ಥರು ಜಮಾಯಿಸಿದ್ದರಿಂದ ಪೀಣ್ಯ ಪೊಲೀಸ್ ಠಾಣೆಯಲ್ಲಿ ಕೆಲ ಹೊತ್ತು ಹೈ ಡ್ರಾಮಾ ನಡೆಯಿತು.
ಆರೋಪಿಯನ್ನು ಜಾಲಹಳ್ಳಿ ನಿವಾಸಿ ಮೌನೇಶ್ ಎಂದು ಗುರುತಿಸಲಾಗಿದೆ. ಬುಧವಾರ ಬೆಳಗ್ಗೆ ಜಾಲಹಳ್ಳಿ ಬಳಿ ಮೌನೇಶ್ ಬಿಎಂಟಿಸಿ ಬಸ್ ಹತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಕಂಡಕ್ಟರ್ ಅಶೋಕ್ ಟಿಕೆಟ್ ಖರೀದಿಸುವಂತೆ ಕೇಳುತ್ತಿದ್ದಂತೆ ಮೌನೇಶ್ ವಿದ್ಯಾರ್ಥಿ ಬಸ್ ಪಾಸ್ ಹೊಂದಿರುವುದಾಗಿ ಹೇಳಿದ್ದಾನೆ. ನಂತರ ಅದರ ಜೆರಾಕ್ಸ್ ಪ್ರತಿ ತೋರಿಸಿದ್ದಾನೆ. ಕಂಡಕ್ಟರ್ ಒರಿಜಿನಲ್ ಪಾಸ್ ತೋರಿಸಲು ಒತ್ತಾಯಿಸಿದಾಗ ಮೌನೇಶ್ ಕಂಡಕ್ಟರ್ ಜೊತೆ ವಾಗ್ವಾದ ನಡೆಸಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹೆಣ್ಮಕ್ಕಳು ಜೆರಾಕ್ಸ್ ತೋರ್ಸಿದ್ರೂ ಸುಮ್ಮನಿರ್ತೀಯಾ ನನ್ಮೇಲೆ ಮಾತ್ರ ರೇಗಾಡ್ತಿಯಾ ಎಂದು ಕಂಡಕ್ಟರ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾನೆ.
ಈ ವೇಳೆ ಚಾಲಕ ಪೀಣ್ಯ ಠಾಣೆಗೆ ಬಸ್ ಕೊಂಡೊಯ್ದಿದ್ದು, ಅಲ್ಲಿ ಮೌನೇಶ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪ್ರಯಾಣಿಕರು ಹಿಡಿದು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ತನ್ನ ದುರ್ವರ್ತನೆ ಬಿಡದ ಮೌನೇಶ್ ಠಾಣೆಯಲ್ಲಿದ್ದ ಸಹಾಯಕ ಸಬ್ ಇನ್ಸ್ಪೆಕ್ಟರ್ ವಿರುದ್ಧ ನಿಂದಿಸಲು ಆರಂಭಿಸಿದ. ಈ ವೇಳೆ ಪಿಎಸ್ಐ ಸಿದ್ದು ಹೂಗಾರ ಆತನನ್ನು ಪ್ರಶ್ನಿಸಲು ಮಧ್ಯಪ್ರವೇಶಿಸಿದಾಗ, ಮೌನೇಶ್ ಪಿಎಸ್ಐ ಮೇಲೆ ಹಲ್ಲೆ ನಡೆಸಿದ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಆತನ ಸಹೋದರ, ತಂದೆ ಹಾಗೂ ಇತರರು ಠಾಣೆಗೆ ಬಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಪಿಎಸ್ಐ ಮತ್ತು ಬಸ್ ಕಂಡಕ್ಟರ್ ನೀಡಿದ ದೂರಿನ ಆಧಾರದ ಮೇಲೆ, ಸಾರ್ವಜನಿಕ ನೌಕರನ ಮೇಲೆ ಹಲ್ಲೆ ನಡೆಸಿ ಕರ್ತವ್ಯ ನಿರ್ವಹಿಸದಂತೆ ತಡೆದ ಮೌನೇಶ್ ನನ್ನು ಬಂಧಿಸಲಾಗಿದೆ.
Advertisement