ಶಕ್ತಿ ಯೋಜನೆ: ಮೇಲೆಯೇ ಬಸ್ ಹತ್ತಿಸಲು ಯತ್ನ, ಚಾಲಕನ ಅನಾಗರೀಕ ವರ್ತನೆಗೆ ಮಹಿಳೆಯರ ಹಿಡಿಶಾಪ!

ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ `ಶಕ್ತಿಯೋಜನೆ’ ಜಾರಿಯಾಗಿದ್ದು, ಮಹಿಳೆಯರು ರಾಜ್ಯದ್ಯಾಂತ ಉಚಿತ ಪ್ರಯಾಣ ನಡೆಸುತ್ತಿದ್ದಾರೆ. ಪ್ರತಿದಿನ ಲಕ್ಷಾಂತರ ಮಹಿಳೆಯರು ಅಗತ್ಯ ದಾಖಲೆಗಳನ್ನ ತೋರಿಸಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತುಮಕೂರು: ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ `ಶಕ್ತಿಯೋಜನೆ’ ಜಾರಿಯಾಗಿದ್ದು, ಮಹಿಳೆಯರು ರಾಜ್ಯದ್ಯಾಂತ ಉಚಿತ ಪ್ರಯಾಣ ನಡೆಸುತ್ತಿದ್ದಾರೆ. ಪ್ರತಿದಿನ ಲಕ್ಷಾಂತರ ಮಹಿಳೆಯರು ಅಗತ್ಯ ದಾಖಲೆಗಳನ್ನ ತೋರಿಸಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದಾರೆ. ಈ ನಡುವೆ ಟಿಕೆಟ್ ಕಲೆಕ್ಷನ್ ಆಗಿಲ್ಲ ಎಂದು ಬೇಸತ್ತ ಚಾಲಕನೊಬನ್ಬ ಮಹಿಳೆಯರ ಮೇಲೆಯೇ ಬಸ್ ಹತ್ತಿಸಲು ಮುಂದಾಗಿದ್ದ ಪ್ರಸಂಗವೊಂದು ತುಮಕೂರು ಜಿಲ್ಲೆಯ ಕೊರಟಗೆರೆಯ ನಾಗೇನಹಳ್ಳಿ ಗೇಟ್ ಬಳಿ ನಡೆದಿದೆ.

ಕೆಲ ಮಹಿಳೆಯರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಿಂದ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಬಂದಿದ್ದರು. ಪುಟ ಪುಟ್ಟ ಕಂದಮ್ಮಗಳನ್ನ ಕಂಕುಳಲ್ಲಿ ಹೊತ್ತು ದೇವರ ದರ್ಶನ ಮುಗಿಸಿದ ಮಹಿಳೆಯರು ಸಂಜೆ ವೇಳೆಗೆ ಮನೆಗೆ ಹಿಂದಿರುಗಲು ಬಸ್ಸಿಗಾಗಿ ಕಾಯುತ್ತಿದ್ದರು.

ಸುಮಾರು 2 ಗಂಟೆ ಕಾದರೂ ಬಸ್ ಸಿಗದಿದ್ದ ಕಾರಣ, ಮಧುಗಿರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ಸನ್ನು ತಡೆಯಲು ಮುಂದಾಗಿದ್ದರು, ಇತ್ತ ಕಲೆಕ್ಷನ್ ಆಗಿಲ್ಲ ಎಂದು ಬೇಸತ್ತಿದ್ದ ಚಾಲಕ ಆರಂಭದಲ್ಲಿ ಬಸ್ ವೇಗವನ್ನು ಕಡಿಮೆ ಮಾಡಿದ್ದ. ಆದರೆ, ಇದ್ದಕ್ಕಿದ್ದಂತೆ ವೇಗ ಹೆಚ್ಚಿಸಿ ಮಹಿಳೆಯರ ಮೇಲೆ ಹತ್ತಿಸಿಬಿಡುವಂತೆ ಶಾಕ್ ಕೊಟ್ಟಿದ್ದ.  ಈ ವೇಳೆ ಭಯಭೀತರಾದ ಮಹಿಳೆಯರು ಚಾಲಕನಿಗೆ ಹಿಡಿಶಾಪ ಹಾಕಿದರು.

ಅಲ್ಲದೆ, ಚಾಲಕನ ವರ್ತನೆ ಬಗ್ಗೆ ಸ್ಥಳೀಯ ತಹಶಿಲ್ದಾರ್‌ಗೆ ಮಾಹಿತಿ ನೀಡಿದರು. ನಂತರ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಮಹಿಳೆಯರಿಗೆ ಬೇರೆ ಬಸ್ ಹತ್ತಿಸಿದ್ದಾರೆ, ಇದೇ ವೇಳೆ ಬಸ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com