ಬೆಂಗಳೂರು: ಲೈಂಗಿಕ ಕಾರ್ಯಕರ್ತೆ ಮೇಲೆ ಹಲ್ಲೆ, ಪ್ರಕರಣ ದಾಖಲು

ತಮ್ಮೊಂದಿಗೆ ಬಾರದ ಲೈಂಗಿಕ ಕಾರ್ಯಕರ್ತೆಯ ಮೇಲೆ ಮೂವರು ಆರೋಪಿಗಳು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆಯೊಂದು ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತಮ್ಮೊಂದಿಗೆ ಬಾರದ ಲೈಂಗಿಕ ಕಾರ್ಯಕರ್ತೆಯ ಮೇಲೆ ಮೂವರು ಆರೋಪಿಗಳು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆಯೊಂದು ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿದೆ.

ಟಿ ದಾಸರಹಳ್ಳಿಯ ನಿವಾಸಿಯಾಗಿರುವ ಲೈಂಗಿಕ ಕಾರ್ಯಕರ್ತೆ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಮೆಜೆಸ್ಟಿಕ್ ಬಳಿ ಇರುವ ಎಟಿಎಂ ಕಿಯೋಸ್ಕ್ ಬಳಿ ಗ್ರಾಹಕರಿಗಾಗಿ ಕಾದು ನಿಂತಿದ್ದಳು. ಈ ವೇಳೆ ಮೂವರು ಯುವಕರು ಮಹಿಳೆ ಬಳಿ ಬಂದಿದ್ದಾರೆ. ಆದರೆ, ಮೂವರು 20 ವರ್ಷದೊಳಗಿನ ಯುವಕರಾಗಿದ್ದರಿಂದ ಮಹಿಳೆ ನಿರಾಕರಿಸಿದ್ದಾರೆ.

ಬಳಿಕ ಟೀ ಕುಡಿಯಲು ತೆರಳಿದ ಮಹಿಳೆ ಮತ್ತೊಬ್ಬ ಲೈಂಗಿಕ ಕಾರ್ಯಕರ್ತೆ ಜೊತೆಗೆ ಸ್ಥಳಕ್ಕೆ ಬಂದಿದ್ದಾರೆ. ಜೊತೆಗೆ ಬಂದಿದ್ದ ಮತ್ತೊಬ್ಬ ಮಹಿಳೆಯನ್ನೂ ಯುವಕರು ಸಂಪರ್ಕಿಸಿದ್ದು, ಅವರೂ ಕೂಡ ನಿರಾಕರಿಸಿದ್ದಾರೆ. ಇದರಿಂದ ಕೆಂಡಾಮಂಡಲಗೊಂಡ ಯುವಕರು ಮಾತಿನ ಚಕಮಕಿಗೆ ಇಳಿದಿದ್ದಾರೆ. ಸ್ಥಳದಿಂದ ಹೋಗುವಂತೆ ಮಹಿಳೆ ತಿಳಿಸಿದ್ದು, ಈ ವೇಳೆ ಯುವಕರು ಮರದ ಹಲಗೆಯಿಂದ ತಲೆ ಮೇಲೆ ಬಡಿದು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕೂಡಲೇ ಮಹಿಳೆಯನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಗೆ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಬಸ್ ನಿಲ್ದಾಣದಲ್ಲಿ ಇಂತಹ ಗಲಾಟೆಗಳು ನಡೆಯುತ್ತಲೇ ಇರುತ್ತೇವೆ. ಕೆಲವೊಮ್ಮೆ ಲೈಂಗಿಕ ಕಾರ್ಯಕರ್ತೆಯರೇ ಜಗಳಕ್ಕಿಳಿಯುತ್ತಾರೆ. ಗ್ರಾಹಕರೊಂದಿಗೆ ಮಾತಿನ ಚಕಮಕಿ ನಡೆಸುತ್ತಾರೆ. ಪೊಲೀಸರು ಬಸ್ ನಿಲ್ದಾಣಕ್ಕೆ ಬಂದ ಕೂಡಲೇ ಪ್ಲಾಟ್'ಫಾರ್ಮ್ ಗಳಿಗೆ ಹೋಗಿ ಬಿಡುತ್ತಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದೇವೆಂದು ಪೊಲೀಸರು ಹೇಳಿದ್ದಾರೆ.

ಈ ಹಿಂದೆ ಓಬವ್ವ ಪಡೆ ಲೈಂಗಿಕ ಕಾರ್ಯಕರ್ತೆಯರ ಮೇಲೆ ಕಣ್ಗಾವಲಿಡುತ್ತಿತ್ತು. ಬಸ್ ನಿಲ್ದಾಣದಲ್ಲಿ ಅವರನ್ನು ನಿಯಂತ್ರಿಸುವುದು ಕಷ್ಟಕರವಾಗಿರುತ್ತದೆ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com