ಶಕ್ತಿ ಯೋಜನೆ ಎಫೆಕ್ಟ್: ಅಪ್ಪ ಚಾಕಲೇಟ್ ಕೊಡಿಸದ್ದಕ್ಕೆ ಕೋಪಗೊಂಡು ಧರ್ಮಸ್ಥಳಕ್ಕೆ ಹೋದ ಪುತ್ರಿಯರು!
ಬೆಂಗಳೂರು: ತಂದೆ ಚಾಕಲೇಟ್ ಗೆ ಹಣ ಕೊಡದಿದ್ದಕ್ಕೆ ಪುತ್ರಿಯರಿಬ್ಬರು ಮನೆಬಿಟ್ಟು ಧರ್ಮಸ್ಥಳಕ್ಕೆ ಹೋಗಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಂದೆ ಚಾಕಲೇಟ್ಗೆ ಹಣ ಕೊಡದಿದ್ದಕ್ಕೆ 10 ಮತ್ತು 9 ನೇ ತರಗತಿ ಓದುತ್ತಿದ್ದ ಇಬ್ಬರು ಪುತ್ರಿಯರು ಮನೆ ಬಿಟ್ಟು ಹೋಗಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದು ಮಕ್ಕಳು ಕಾಣುತ್ತಿಲ್ಲ ಎಂದು ಪೋಷಕರು ಕಕ್ಕಾಬಿಕ್ಕಿಯಾಗಿದ್ದಾರೆ. ತಂದೆ-ತಾಯಿ ಮೇಲಿನ ಕೋಪಕ್ಕೆ ಈ ಹೆಣ್ಣು ಮಕ್ಕಳು ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ತೆರಳಿದ್ದಾರೆ.
ಪುತ್ರಿಯರಿಬ್ಬರು ನಾಪತ್ತೆಯಾಗಿರುವುದಾಗಿ ಹೆತ್ತವರು, ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೋಷಕರ ದೂರು ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದರು. ಮನೆ ಬಿಟ್ಟು ಹೋಗಿದ್ದ ಪುತ್ರಿಯರು ಎರಡು ದಿನಗಳಾದ್ರೂ ಎಲ್ಲಿಗೆ ಹೋಗಿದ್ದಾರೆಂದು ಸುಳಿವು ಸಿಕ್ಕಿರಲಿಲ್ಲ. ಕೊನೆಗೂ ಮಕ್ಕಳು ಧರ್ಮಸ್ಥಳದಲ್ಲಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಅಪ್ಪ ನಮಗೆ ಚಾಕಲೇಟ್ಗೆ ಹಣ ಕೊಡಲಿಲ್ಲ. ಕೇಳಿದ್ದಕ್ಕೆ ನಮ್ಮಿಬ್ಬರ ಮೇಲೆ ರೇಗಾಡಿದ್ದರು. ನಮಗೆ ಕೋಪ ಬಂದು ನಾವಿಬ್ರು ಮನೆಬಿಟ್ಟು ಬಸ್ ಹತ್ತಿ ಇಲ್ಲಿಗೆ ಬಂದಿದ್ದೇವೆ. ಫ್ರೀ ಟಿಕೆಟ್ ಇರೋದ್ರಿಂದ ನಾವು ಧರ್ಮಸ್ಥಳಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ. ಮಕ್ಕಳ ಮಾತು ಕೇಳಿ ಪೊಲೀಸರೂ ಸಹ ಆಘಾತಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ