ಬೆಂಗಳೂರು: ಬಿಜೆಪಿ ಪ್ರಣಾಳಿಕೆಯನ್ನು ಎಸಿ ರೂಮ್ ನಲ್ಲಿ ಕುಳಿತು ಸಿದ್ಧಪಡಿಸಿಲ್ಲ, ರಾಜ್ಯದ ಮೂಲೆ ಮೂಲೆಗೆ ಭೇಟಿ ಅಭಿಪ್ರಾಯ ಸಂಗ್ರಹಿಸಿದ ಅಪಾರ ಸಂಖ್ಯೆಯ ಕಾರ್ಯಕರ್ತರ ಶ್ರಮ ಇದರಲ್ಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ.ನಡ್ಡಾ ಅವರು ಹೇಳಿದ್ದಾರೆ.
ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಮಾತನಾಡಿರುವ ಅವರು, ಪ್ರಣಾಳಿಕೆಯನ್ನು ಎಸಿ ರೂಮಿನಲ್ಲಿ ಕುಳಿತು ಸಿದ್ಧಪಡಿಸಿಲ್ಲ. ಇದಕ್ಕಾಗಿ ಸಾಕಷ್ಟು ಕಸರತ್ತು ನಡೆಸಲಾಗಿದೆ. ರಾಜ್ಯ ಮೂಲೆ ಮೂಲೆಗೆ ನಮ್ಮ ಕಾರ್ಯಕರ್ತರು ಭೇಟಿ ನೀಡಿದ್ದು, ಜನರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಕಾರ್ಯಕರ್ತರ ಅಪಾರ ಶ್ರಮ ಮತ್ತು ಪರಿಶ್ರಮ ಇದರಲ್ಲಿದೆ ಎಂದು ಹೇಳಿದ್ದಾರೆ.
ಮುಂದಿನ ಪೀಳಿಗೆಗೆ ಬೆಂಗಳೂರನ್ನು 'ರಾಜ್ಯ ರಾಜಧಾನಿ ಪ್ರದೇಶ' ಎಂದು ಗೊತ್ತುಪಡಿಸುವ ಮೂಲಕ ಅಭಿವೃದ್ಧಿಪಡಿಸುತ್ತೇವೆ. ಸಮಗ್ರ, ತಂತ್ರಜ್ಞಾನದೊಂದಿಗೆ ನಗರದಲ್ಲಿ ಅಭಿವೃದ್ಧಿ ಕಾರ್ಯಗಳ ಕೈಗೆತ್ತಿಕೊಳ್ಳಲಾಗುತ್ತದೆ. ಈಸ್ ಆಫ್ ಲೈಫ್, ಸುಸಂಘಟಿತ ಸಾರಿಗೆ ಮತ್ತು ಬೆಂಗಳೂರನ್ನು ಡಿಜಿಟಲ್ನ ಜಾಗತಿಕ ಹಬ್ ಮಾಡಲು ವ್ಯವಸ್ಥೆಗಳನ್ನು ಸಕ್ರಿಯಗೊಳಿಸುತ್ತೇವೆಂದು ತಿಳಿಸಿದ್ದಾರೆ.
ನಮ್ಮ ಪ್ರಣಾಳಿಕೆಯು ಗ್ಯಾರಂಟಿಗಳ ಬಗ್ಗೆ ಮಾತನಾಡುವ ಕಾಂಗ್ರೆಸ್ನ ಪ್ರಣಾಳಿಕೆಗಿಂತ ಭಿನ್ನವಾಗಿದೆ, ಅವರದ್ದು ಅವಧಿ ಮೀರಿದ ವಾರಂಟಿಗಳಾಗಿದ್ದು, ನಮ್ಮ ಪ್ರಣಾಳಿಕೆಯು ಕರ್ನಾಟಕದ ಯುವಕರು, ರೈತರು, ಮಹಿಳೆಯರು, ಕಾರ್ಮಿಕರು, ಮಧ್ಯಮ ವರ್ಗ, ಎಸ್ಸಿ/ಎಸ್ಟಿ ಮತ್ತು ಸಮಾಜದ ಎಲ್ಲಾ ವರ್ಗಗಳ ಆಕಾಂಕ್ಷೆಗಳನ್ನು ಈಡೇರಿಸುವ ವಾಸ್ತವಿಕ, ಸಾಧಿಸಬಹುದಾದ ಭರವಸೆಯನ್ನು ಒಳಗೊಂಡಿದೆ. ನಮ್ಮ ಪ್ರಣಾಳಿಕೆಯು 6 ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ ಎಂದರು.
Advertisement