ಬೆಂಗಳೂರು: ಮಹಿಳೆಯರಿಗೆ ಎಲ್ಲಾ ಸರ್ಕಾರಿ, ನಾನ್ ಎಸಿ ಬಸ್ಗಳಲ್ಲಿ ಉಚಿತ ಪ್ರಯಾಣ ನೀಡುವ ಭರವಸೆಯನ್ನು ಚುನಾವಣೆ ಕಾಂಗ್ರೆಸ್ ನೀಡಿತ್ತು. ಇದರಂತೆ ಅಧಿಕಾರಕ್ಕೆ ಬಂದ ಬಳಿಕ ಉಚಿತ ಬಸ್ ಪಾಸ್ ಸೇರಿದಂತೆ ಎಲ್ಲಾ 5 ಗ್ಯಾರಂಟಿಗಳ ಅನುಷ್ಠಾನಕ್ಕೆ ಮೊದಲ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆಯನ್ನೂ ನೀಡಿತ್ತು.
ಈ ಗ್ಯಾರಂಟಿಗಳ ಅನುಷ್ಠಾನ ಕುರಿತು ಇಲಾಖೆಯ ಅದಿಕಾರಿಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ನಿನ್ನೆ ಪರಿಶೀಲನಾ ಸಭೆ ನಡೆಸಿದರು.
ಸಭೆ ಬಳಿಕ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ರಾಮಲಿಂಗಾ ರೆಡ್ಡಿಯವರು, ಬಸ್ ಪಾಸ್ ನೀಡಲು ಫಲಾನುಭವಿಗಳ ಗುರುತಿಸುವುದು ಮುಖ್ಯವಾಗುತ್ತದೆ. ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣದ ಪಾಸ್ಗಳನ್ನು ನೀಡುವುದು ಸವಾಲಿನ ವಿಚಾರ. ಕರ್ನಾಟಕದಲ್ಲಿ 3.5 ಕೋಟಿ ಮಹಿಳೆಯರಿದ್ದಾರೆ. ಎಲ್ಲರೂ ಬಸ್ ಗಳಲ್ಲಿ ಸಂಚರಿಸುವುದಿಲ್ಲ. ಹೀಗಾಗಿ ಫಲಾನುಭವಿಗಳ ಗುರುತಿಸಿ ಪಾಸ್ ಗಳನ್ನು ನೀಡುತ್ತೇವೆಂದು ಹೇಳಿದ್ದಾರೆ.
ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವ ಭರವಸೆಯನ್ನು ಯಾವ ರೀತಿ ಅನುಷ್ಠಾನಕ್ಕೆ ತರುತ್ತೀರಿ?
ಕರ್ನಾಟಕದಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ, ಅಂದರೆ 3.5 ಕೋಟಿ. ಅವರೆಲ್ಲರೂ ಬಸ್ ಗಳಲ್ಲಿ ಸಂಚರಿಸುವುದಿಲ್ಲ. ಹೀಗಾಗಿ ನಾವು ಎಲ್ಲರಿಗೂ ಉಚಿತ ಪಾಸ್ಗಳನ್ನು ನೀಡಲು ಸಾಧ್ಯವಿಲ್ಲ. ಎಷ್ಟು ಹುಡುಗಿಯರು ಶಾಲಾ-ಕಾಲೇಜುಗಳಿಗೆ ಬಸ್ಗಳಲ್ಲಿ ಸಂಚರಿಸುತ್ತಾರೆ, ಎಷ್ಟು ಮಹಿಳೆಯರು ಬಸ್ಗಳಲ್ಲಿ ಸಂಚರಿಸುತ್ತಾರೆಂಬುದನ್ನು ಗುರುತಿಸಬೇಕಿದೆ. ಇದೇ ವೇಳೆ ಯೋಜನೆ ಜಾರಿಗೆ ತರಲು ನಮಗೆ ಸರ್ಕಾರ ಎಷ್ಟು ಆರ್ಥಿಕ ನೆರವು ನೀಡುತ್ತದೆ ಎಂಬುದನ್ನೂ ನೋಡಬೇಕಿದೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದ್ದು, ಇದು ಸವಾಲಾಗಿ ಪರಿಣಮಿಸಲಿದೆ. ಆದರೆ, ಅದನ್ನು ನಿಭಾಯಿಸುತ್ತೇವೆ.
ನೀವು ಇ-ಬಸ್ಗಳಿಗೆ ಹೆಚ್ಚು ಆದ್ಯತೆ ನೀಡುವಿರಾ?
ಎಲೆಕ್ಟ್ರಿಕ್ ವಾಹನಗಳು ಬಿಳಿ ಆನೆಗಳಿದ್ದಂತೆ. ಅದು ನಿಸ್ಸಂದೇಹವಾಗಿ ಉಪಯುಕ್ತವಾಗಿರುವಂತಹದ್ದು. ಆದರೆ, ನಾವು ನಮ್ಮ ಆರ್ಥಿಕ ಸ್ಥಿತಿಯನ್ನೂ ಪರಿಶೀಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪರಿಶೀಲನೆಗಳು ಮುಂದುವರೆದಿವೆ.
ಪ್ರಸ್ತುತ BMTC/KSRTC/NERTC/NWRTCಯ ಆರ್ಥಿಕ ಸ್ಥಿತಿ ಯಾವ ಮಟ್ಟದಲ್ಲಿದೆ?
ನಾಲ್ಕು ಆರ್ಟಿಸಿ ಅಧಿಕಾರಿಗಳ ಜತೆ ಮಂಗಳವಾರ ಸಭೆ ಕರೆದಿದ್ದೇನೆ. ಆ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ.
ಹಿಂದಿನ ಸರಕಾರ ಅಧಿಕಾರದಲ್ಲಿದ್ದಾಗ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಸಕಾಲಕ್ಕೆ ವೇತನ ನೀಡುತ್ತಿರಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿತ್ತು... ಈ ಬಗ್ಗೆ ಏನು ಹೇಳುತ್ತೀರಿ?
ಬಿಎಂಟಿಸಿ, ಕೆಎಸ್ಆರ್ಟಿಸಿ ಅಥವಾ ಯಾವುದೇ ಆರ್ಟಿಸಿ ಸರ್ಕಾರಿ ಸ್ವಾಮ್ಯದ ನಿಗಮವಾಗಿದೆ. ಅದನ್ನು ಲಾಭದಾಯಕ ಉದ್ಯಮವಾಗಿ ನೋಡಲಾಗುವುದಿಲ್ಲ. ಶೇ.40ರಷ್ಟು ಬಸ್ಸುಗಳನ್ನು ನಷ್ಟದಲ್ಲಿ ಓಡಿಸಲಾಗುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಾವು ಕಾರ್ಯನಿರ್ವಹಿಸಬೇಕು. ಹೀಗಾಗಿ ನಾವು ಅದನ್ನು ನಷ್ಟವೆಂದು ನೋಡಲು ಸಾಧ್ಯವಾಗುವುದಿಲ್ಲ. ಇನ್ನೂ ಶೇ.40ರಷ್ಟು ಬಸ್ಗಳು ಲಾಭವಿಲ್ಲದೆ, ನಷ್ಟವಿಲ್ಲದೇ ಉಳಿದ ಶೇ.20ರಷ್ಟು ಲಾಭದಲ್ಲಿ ಓಡುತ್ತಿವೆ. ನಷ್ಟ ದೂರಾಗಿಸಲು ನಾವು ಸಂಪೂರ್ಣ ಫ್ಲೀಟ್ ನ್ನು ನಿರ್ವಹಿಸಬೇಕಾಗಿದೆ.
ಈ ಹಿಂದೆ ನೀವು ಸಾರಿಗೆ ಸಚಿವರಾಗಿದ್ದಿರಿ. ಹಿಂದಿನ ಅನುಭವಗಳು ಸಮಸ್ಯೆಗಳ ಪರಿಹರಿಸಲು ಸಹಾಯವಾಗುತ್ತಿದೆಯೇ?
2013ರಲ್ಲಿ ನಾನು ಸಾರಿಗೆ ಸಚಿವನಾಗಿದ್ದಾಗ, ನಾಲ್ಕು ವರ್ಷಗಳ ಅವಧಿಯಲ್ಲಿ, ನಮ್ಮ ಎಲ್ಲಾ ನಾಲ್ಕು RTC ಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ 200 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದ್ದವು. ಈ ಬಾರಿಯೂ ಸಾಲಿಗೆ ನಿಗಮಗಳನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ಯಲಾಗುತ್ತದೆ.
Advertisement