Elephant Death in Karnataka: ಬಂಡೀಪುರದಲ್ಲಿ ಅರಣ್ಯ ಇಲಾಖೆಯ ಆನೆ ಕುಸಿದು ಹಠಾತ್ ಸಾವು

ಅಕ್ಕಿರಾಜ ಎಂದೇ ಖ್ಯಾತಿ ಗಳಿಸಿದ್ದ ವಿನಾಯಗನ್ ಎಂಬ ಅರಣ್ಯ ಇಲಾಖೆಯ ಆನೆಯೊಂದು ಬಂಡೀಪುರದಲ್ಲಿ ಕುಸಿದು ಬಿದ್ದು ಹಠಾತ್ ಸಾವಿಗೀಡಾಗಿದೆ.
ಅಕ್ಕಿರಾಜ ಖ್ಯಾತಿಯ ಆನೆ ವಿನಾಯಗನ್ ಸಾವು (ಸಾಂದರ್ಭಿಕ ಚಿತ್ರ)
ಅಕ್ಕಿರಾಜ ಖ್ಯಾತಿಯ ಆನೆ ವಿನಾಯಗನ್ ಸಾವು (ಸಾಂದರ್ಭಿಕ ಚಿತ್ರ)

ಬೆಂಗಳೂರು: ಅಕ್ಕಿರಾಜ ಎಂದೇ ಖ್ಯಾತಿ ಗಳಿಸಿದ್ದ ವಿನಾಯಗನ್ ಎಂಬ ಅರಣ್ಯ ಇಲಾಖೆಯ ಆನೆಯೊಂದು ಬಂಡೀಪುರದಲ್ಲಿ ಕುಸಿದು ಬಿದ್ದು ಹಠಾತ್ ಸಾವಿಗೀಡಾಗಿದೆ.

ಬಂಡೀಪುರದ ರಾಮಾಪುರ ಆನೆ ಶಿಬಿರ ಪ್ರದೇಶದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (ಬಿಟಿಆರ್‌)ದಲ್ಲಿ ಮಂಗಳವಾರ ಅಕ್ಕಿರಾಜ ಎಂದೇ ಖ್ಯಾತವಾಗಿದ್ದ 36 ವರ್ಷದ ಗಂಡಾನೆ ವಿನಾಯಗನ್‌ ಹಠಾತ್‌ ಕುಸಿದು ಬಿದ್ದು ಮೃತಪಟ್ಟಿದೆ.

ಈ ಬಗ್ಗೆ ಬಿಟಿಆರ್ ನಿರ್ದೇಶಕ ರಮೇಶ್ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದ್ದು, 'ಶಿಬಿರದಲ್ಲಿದ್ದ ವಿನಾಯಗನ್ ಆನೆ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದೆ. ಸ್ಥಳದಲ್ಲಿದ್ದ ಪಶುವೈದ್ಯರು ಮತ್ತು ಇತರ ಅರಣ್ಯ ಸಿಬ್ಬಂದಿ ಆನೆಯನ್ನು ತುರ್ತು ಚಿಕಿತ್ತೆ ನೀಡಿ ಅದನ್ನು ಎಚ್ಚರಿಸುವ ಕೆಲಸ ಮಾಡಿದರೂ ಅದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಬುಧವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಕುಮಾರ್ ಹೇಳಿದರು.

ಆನೆಯು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದ ಯೆಲಚೆಟ್ಟಿ ಗ್ರಾಮದ ಸುತ್ತಮುತ್ತಲು ದೀರ್ಘ ಸಮಯದಿಂದ ಬೀಡು ಬಿಟ್ಟು ಮನೆಗಳ ಮೇಲೆ ದಾಳಿ ಮಾಡುತ್ತಿತ್ತು. ಪುಂಡಾನೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು. ಅರಣ್ಯ ಇಲಾಖೆಯ ಮೇಲೆ ಒತ್ತಡವನ್ನೂ ಹಾಕಿದ್ದರು. ಈ ವರ್ಷದ ಜೂನ್‌ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಆನೆಯನ್ನು ಸೆರೆಹಿಡಿದು, ರಾಂಪುರ ಆನೆ ಶಿಬಿರದಲ್ಲಿ ಬಿಡಲಾಗಿತ್ತು. ಇಲ್ಲಿ ಅದಕ್ಕೆ ಕರ್ಣ ಎಂದು ಹೆಸರಿಡಲಾಗಿತ್ತು.

ಮುಂದಿನ ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಆನೆಯಾಗಲು ವಿನಾಯಕನ್ ಆನೆಗೆ ತರಬೇತಿ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಜಿಸಿದ್ದರು.

2021 ರಲ್ಲಿ ಕೊಯಮತ್ತೂರಿನಲ್ಲಿ ಆನೆಯನ್ನು ಸೆರೆಹಿಡಿಯಲಾಯಿತು ಮತ್ತು ತಮಿಳುನಾಡು ಅರಣ್ಯ ಇಲಾಖೆಯಿಂದ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಡಲಾಗಿತ್ತು. ಇದು ಬಂಡೀಪುರದ ಯೆಲ್ಚೆಟ್ಟಿ ಗ್ರಾಮದಲ್ಲಿ ಆಹಾರ ಹುಡುಕುತ್ತಾ ಮನೆಗಳ ಮೇಲೆ ದಾಳಿ ಮಾಡುತ್ತಿದ್ದರಿಂದ, ಅದನ್ನು ಮತ್ತೆ ಕರ್ನಾಟಕ ಅರಣ್ಯ ಇಲಾಖೆ ಜೂನ್ 2023 ರಲ್ಲಿ ವಶಪಡಿಸಿಕೊಂಡಿತು ಮತ್ತು ರಾಮಾಪುರ ಶಿಬಿರದಲ್ಲಿ ಈ ಆನೆಯನ್ನು ಬಂಧಿಸಿಡಲಾಗಿತ್ತು. ಬಳಿಕ ಅದಕ್ಕೆ ತರಬೇತಿ ನೀಡಲಾಗುತ್ತಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com