ವಿಟಿಯು ಕುಲಪತಿಯಾಗಿ ವಿದ್ಯಾಶಂಕರ್ ನೇಮಕ: ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಹೈಕೋರ್ಟ್!

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಎಸ್ ವಿದ್ಯಾಶಂಕರ್ ಅವರ ನೇಮಕವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಎಸ್ ವಿದ್ಯಾಶಂಕರ್ ಅವರ ನೇಮಕವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠವು ಈ ಹಿಂದೆ ತೀರ್ಪನ್ನು ಕಾಯ್ದಿರಿಸಿತ್ತು.  ವಿದ್ಯಾಶಂಕರ್ ಅವರ ನೇಮಕಾತಿಗೆ ಸಂಬಂಧಿಸಿದ ಕಾನೂನುಬದ್ಧತೆ ಅಥವಾ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಈ ತೀರ್ಪು ಅರ್ಜಿಗೆ ಮಾತ್ರ ಸಂಬಂಧಿಸಿದೆ ಮತ್ತು ಇತರ ಯಾವುದೇ ಸಂಬಂಧಿತ ಪ್ರಕರಣದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿದೆ. ನಿವೃತ್ತರಾಗಿರುವ ಮೈಸೂರು ವಿವಿ ಮಾಜಿ ಹಂಗಾಮಿ ಉಪಕುಲಪತಿ ಪ್ರೊ.ಬಿ.ಶಿವರಾಜ್ ವಿದ್ಯಾಶಂಕರ್ ನೇಮಕಾತಿ ಸಂಬಂಧ ಅರ್ಜಿ ಸಲ್ಲಿಸಿದ್ದರು.

ವಿಟಿಯು ಕುಲಪತಿಗಳ ನೇಮಕಕ್ಕಾಗಿ ರಾಜ್ಯ ಸರ್ಕಾರದ ಶೋಧನಾ ಸಮಿತಿ ರಚನೆ ಯುಜಿಸಿ ನಿಯಮಗಳು ಮತ್ತು ವಿಟಿಯು ಕಾಯ್ದೆಯ ಸೆಕ್ಷನ್ 13 ರ ಅಡಿಯಲ್ಲಿ ನಿಯಮಬಾಹಿರವಾಗಿದೆ. ಏಕೆಂದರೆ ಯುಜಿಸಿ ಅರ್ಹತೆ  ಹೊಂದಿರುವ ಪ್ರತಿನಿಧಿಯನ್ನು ಇದರಲ್ಲಿ ಸೇರಿಸಿಲ್ಲ ಎಂಬುದು ಅರ್ಜಿದಾರರ ವಾದವಾಗಿತ್ತು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಮತ್ತು ಯುಜಿಸಿಯ ಮಾನದಂಡಗಳನ್ನು ಪೂರೈಸಿರುವವರನ್ನು ವಿಟಿಯು ಕುಲಪತಿಯಾಗಿ ನೇಮಕ ಮಾಡಬೇಕು ಎಂಬುದು ಅವರ ಒತ್ತಾಯವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com