ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಬಿಗ್ ಶಾಕ್: ಖಾಸಗಿ ಬಸ್ ಟಿಕೆಟ್ ದರದಲ್ಲಿ ದಿಢೀರ್ ಏರಿಕೆ!
ಬೆಂಗಳೂರು: ಹಬ್ಬದ ಹಿನ್ನೆಲೆ ಬೆಂಗಳೂರಿನಿಂದ ಊರಿಗೆ ತೆರಳಲು ಟಿಕೆಟ್ ಬುಕ್ ಮಾಡಲು ಹೋದವರಿಗೆ ಶಾಕ್ ಎದುರಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದ್ದು ಈ ಹಿನ್ನೆಲೆ ಖಾಸಗಿ ಬಸ್ ಮಾಲೀಕರು ಮತ್ತೆ ಹಗಲು ದರೋಡೆಗೆ ಇಳಿದಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆ ಸಾಲು ಸಾಲು ರಜೆ ಇರುವುದರಿಂದ ಬಸ್ ಟಿಕೆಟ್ನ ದರ ದುಪ್ಪಟ್ಟು ಮಾಡಿದ್ದಾರೆ. ಬೇಡಿಕೆ ಹೆಚ್ಚಿರುವ ಮಾರ್ಗಗಳಲ್ಲಿ ಬಸ್ ಟಿಕೆಟ್ ದರವನ್ನು ಶೇ.30ರಷ್ಟು ಹೆಚ್ಚಳ ಮಾಡಿದ್ದಾರೆ.
ಹೆಚ್ಚುವರಿ ಶುಲ್ಕ ವಸೂಲಿ ಮಾಡದಂತೆ ಈಗಾಗಲೇ ಖಾಸಗಿ ನಿರ್ವಾಹಕರಿಗೆ ಎಚ್ಚರಿಕೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
“ಬೆಂಗಳೂರಿನಿಂದ ನನ್ನ ಹುಟ್ಟೂರಾದ ತಮಿಳುನಾಡಿನ ನಾಮಕ್ಕಲ್ಗೆ ಹವಾನಿಯಂತ್ರಿತವಲ್ಲದ ಸ್ಲೀಪರ್ ಬಸ್ ಪ್ರಯಾಣಿಸಲು ಬಯಸಿದ್ದೆ. ಸಾಮಾನ್ಯವಾಗಿ ಟಿಕೆಟ್ ವೆಚ್ಚ 1,000 ರೂ. ಇರುತ್ತಿತ್ತು. ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡುತ್ತಿದ್ದೆ. ಆದರೆ, ಈ ಬಾರಿ ಟಿಕೆಟ್ ದರ ರೂ.2000 ಆಗಿದೆ. ಹಬ್ಬದ ದಿನವನ್ನೇ ದುರ್ಬಳಕೆ ಮಾಡಿಕೊಳ್ಳಲು ಖಾಸಗಿ ಸಾರಿಗೆ ಸಂಸ್ಥೆಗಳು ಮುಂದಾಗಿವೆ. ಸರ್ಕಾರ ಇದರ ವಿರುದ್ದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಖಾಸಗಿ ಕಂಪನಿಯ ಉದ್ಯೋಗಿ ಶ್ರೀರಾಮ್ ಎಂಬುವವರು ಹೇಳಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಖಾಸಗಿ ಟ್ರಾವೆಲ್ ಆಪರೇಟರ್ಗಳಿಗೆ ಹೆಚ್ಚಿನ ಶುಲ್ಕ ವಿಧಿಸದಂತೆ ಎಚ್ಚರಿಕೆ ನೀಡಿದ್ದಾರೆ ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಸೂಚನೆಯಂತೆ ನಾವು ಕ್ರಮ ಕೈಗೊಳ್ಳುತ್ತೇವೆ ಮತ್ತು ನಿಯಮ ಉಲ್ಲಂಘಿಸುವ ಖಾಸಗಿ ಟ್ರಾವೆಲ್ ಆಪರೇಟರ್ಗಳಿಗೆ ದಂಡವನ್ನು ವಿಧಿಸುತ್ತೇವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಬಳ್ಳಾರಿ, ಹೊರನಾಡು, ಯಾದಗಿರಿ, ಮತ್ತು ಬೀದರ್ ಸೇರಿದಂತೆ ಮುಂತಾದ ರಾಜ್ಯದೊಳಗಿನ ವಿವಿಧ ಸ್ಥಳಗಳಿಗೆ ಹಾಗೂ 2,000 ಹೆಚ್ಚುವರಿ ಬಸ್ಗಳನ್ನು ನಿಯೋಜಿಸಲಾಗುತ್ತಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಗೋವಾದಂತಹ ಅಂತರರಾಜ್ಯ ಹೆಚ್ಚುವರಿ ಬಸ್ ಗಳ ನಿಯೋಜಿಸಲಾಗಿದೆ. ಜನರು ಖಾಸಗಿ ಬಸ್ ಗಳ ಬದಲು ಸರ್ಕಾರಿ ಬಸ್ ಗಳ ಬಳಸಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ