ಬೆಳಗಾವಿ: ಅಕ್ರಮ ನಿರ್ಮಾಣ, ಭೂ ಒತ್ತುವರಿ, ಅಕ್ರಮ ನೇಮಕಾತಿ ಕುರಿತು ನಿವಾಸಿಯೊಬ್ಬರು ಪದೇ ಪದೇ ಮಾಡಿರುವ ಆರೋಪದ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ಶನಿವಾರ ಕಂಟೋನ್ಮೆಂಟ್ ಬೋರ್ಡ್ ಕಚೇರಿ ಮೇಲೆ ದಾಳಿ ಮಾಡಿದೆ. ಕಂಟೋನ್ಮೆಂಟ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆನಂದ್ ಮತ್ತು ಮಂಡಳಿಯ ಇತರ ಸಿಬ್ಬಂದಿಯನ್ನು ವಿಚಾರಣೆ ನಡೆಸಿತು.
ದೆಹಲಿ ಮತ್ತು ಬೆಂಗಳೂರಿನ ಸಿಬಿಐ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಮಂಡಳಿಯ ಸರ್ಕಾರದ ನಾಮನಿರ್ದೇಶಿತ ಸದಸ್ಯ ಸುಧೀರ್ ತುಪೇಕರ್ ಕೂಡಾ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮಗಳ ಬಗ್ಗೆ ದೂರು ದಾಖಲಿಸಿದ್ದರು.
ಅಕ್ರಮಗಳ ಬಗ್ಗೆ ಕಂಟೋನ್ಮೆಂಟ್ ಬೋರ್ಡ್ಗಳ ಇ-ಚವಾನಿ ಪೋರ್ಟಲ್ನಲ್ಲಿ 10,000 ಕ್ಕೂ ಹೆಚ್ಚು ದೂರುಗಳನ್ನು ನೀಡಿರುವುದಾಗಿ ಹೇಳಿರುವ ಬೆಳಗಾವಿ ಕ್ಯಾಂಪ್ ಪ್ರದೇಶದ ನಿವಾಸಿ ಕ್ಲೆಟನ್ ಕೊಯ್ಲೋ, ಅಕ್ರಮ ನಿರ್ಮಾಣ, ಭೂ ಒತ್ತುವರಿ, ವಿವಿಧ ಹುದ್ದೆಗಳ ನೇಮಕಾತಿಗಳ ಬಗ್ಗೆ ಹಲವಾರು ದೂರುಗಳನ್ನು ನೀಡಿದ್ದೇನೆ. ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ನ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆದರೆ, ಪ್ರಯೋಜನವಾಗಿರಲಿಲ್ಲ ಎಂದು ಅವರು ತಿಳಿಸಿದರು.
“ಬೋರ್ಡ್ ನ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸವಿಲ್ಲದೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಈ ಕುರಿತು ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದೇನೆ. ಎಲ್ಲಾ ಅಕ್ರಮಗಳ ಬಗ್ಗೆ ಸಿಬಿಐ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Advertisement