ಗಾಜಾ: ಜಗ್ಗದ ಭಾರತೀಯ ಮೂಲದ 'ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿ', ವಿಕಲಾಂಗ ಮಕ್ಕಳಿಗೆ ಮುಂದುವರೆದ ನೆರವಿನ ಹಸ್ತ!

ಯುದ್ಧಪೀಡಿತ ಗಾಜಾದಲ್ಲಿ ಪರಿಸ್ಥಿತಿ ಭೀಕರವಾಗಿದ್ದು, ಮಾನವೀಯತೆ ಕಣ್ಮರೆಯಾಗಿದೆ. ನೀರು, ಆಹಾರ, ಶೌಚಾಲಯ ವ್ಯವಸ್ಥೆಗಳಿಲ್ಲದೆ, ಮುಗ್ಧ ಮಕ್ಕಳು, ಹಿರಿಯ ನಾಗರೀಕರು, ಯುವಕರು ಸಹಾಯಕ್ಕಾಗಿ ಮೊರೆ ಇಡುತ್ತಿದ್ದಾರೆ.
ಇಸ್ರೇಲಿ ಬಾಂಬ್ ದಾಳಿಯಲ್ಲಿ ಗಾಯಗೊಂಡ ಪ್ಯಾಲೆಸ್ತೀನ್ ಮಕ್ಕಳು.
ಇಸ್ರೇಲಿ ಬಾಂಬ್ ದಾಳಿಯಲ್ಲಿ ಗಾಯಗೊಂಡ ಪ್ಯಾಲೆಸ್ತೀನ್ ಮಕ್ಕಳು.

ಬೆಂಗಳೂರು: ಯುದ್ಧಪೀಡಿತ ಗಾಜಾದಲ್ಲಿ ಪರಿಸ್ಥಿತಿ ಭೀಕರವಾಗಿದ್ದು, ಮಾನವೀಯತೆ ಕಣ್ಮರೆಯಾಗಿದೆ. ನೀರು, ಆಹಾರ, ಶೌಚಾಲಯ ವ್ಯವಸ್ಥೆಗಳಿಲ್ಲದೆ, ಮುಗ್ಧ ಮಕ್ಕಳು, ಹಿರಿಯ ನಾಗರೀಕರು, ಯುವಕರು ಸಹಾಯಕ್ಕಾಗಿ ಮೊರೆ ಇಡುತ್ತಿದ್ದಾರೆ.

ಭೀತಿಕರ ವಾತಾವರಣದ ನಡುವಲ್ಲೂ ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಇಡದೆ ಕೆಚ್ಚೆದೆಯಿಂದ ಭಾರತ ಮೂಲದ ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿ (ಸ್ವಯಂ ಸೇವಾ ಸಂಘ) ಸಂಕಷ್ಟದಲ್ಲಿರುವ ಜನರಿಗೆ ತನ್ನ ಸಹಾಯದ ಹಸ್ತವನ್ನು ಮುಂದುವರೆಸಿದೆ.

ಅಕ್ಟೋಬರ್ 7 ರಂದು ಗಾಜಾದಲ್ಲಿ ವೈಮಾನಿಕ ಬಾಂಬ್ ದಾಳಿ ಪ್ರಾರಂಭವಾಗಿತ್ತು. ದಾಳಿ ಆರಂಭವಾಗಿ 40 ದಿನಗಳು ಕಳೆದಿವೆ, ಆದರೂ ಈ ಸಂಘವು ಯುವಕರು, ವೃದ್ಧರು, ಅಂಗವಿಕಲನ್ನು ತೊರೆಯದೆ, ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ.

ಕ್ಯಾಂಪ್ ನಲ್ಲಿ ಬಹುತೇಕ ಮಂದಿ ದೈಹಿಕ ಹಾಗೂ ಮಾನಸಿಕ ಅಸ್ವಸ್ಥರಾಗಿರುವುದು, ದುರ್ಬಲರಾಗಿರುವವರೇ ಇದ್ದಾರೆ. ಇಲ್ಲಿನ ಪರಿಸ್ಥಿತಿ ಭೀಕರವಾಗಿದೆ. ಪ್ರತೀ ಬಾರಿ ದಾಳಿ ನಡೆದಾಗಲೂ ಭೂಮಿ ನಡುಗುತ್ತಿದೆ. ಈ ವೇಳೆ ಚಾರಿಟಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಸ್ಟರ್ಸ್ ಗಳು ಇವರನ್ನು ತಬ್ಬಿಕೊಂಡು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಕ್ಯಾಂಪ್ ನಲ್ಲಿ ವೈಮಾನಿಕ ದಾಳಿಯ ಭೀತಿ ಒಂದೆಡೆಯಾಗದೆ, ಮತ್ತೊಂದೆಡೆ ಆಹಾರ, ನೀರಿಗಾಗಿ ಹಾಹಾಕಾರ ಶುರುವಾಗಿದೆ. ಒಂದು ಪೌಂಡ್ ಬ್ರೆಂಡ್, ಒಂದು ಕಿತ್ತಳೆ ಹಣ್ಣಿನಿಂದ ದಿನ ದೂಡಲಾಗಿತ್ತು. ನಮಗೆ ಸಿಗುವ ಆಹಾರವನ್ನು ಮೊದಲು ಆಶ್ರಯ ಪಡೆದಿರುವವರಿಗೆ ನೀಡಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಕ್ಯಾಂಪ್ ನಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಕ್ಯಾಂಪಸ್ ನಲ್ಲಿ ಸುಮಾರು 700 ಮಂದಿ ಆಶ್ರಯ ಪಡೆದಿದ್ದಾರೆ. ಕ್ಯಾಂಪ್ ನಲ್ಲಿ ಹಲವು ದಿನಗಳಿಂದ ಆಶ್ರಯ ಪಡೆದಿದ್ದ ಮಹಿಳೆಯೊಬ್ಬರು ಮನೆಗೆ ತೆರಳಿ ಸ್ನಾನ ಮಾಡಬೇಕೆಂದು ಹೇಳಿ ಹೋಗಿದ್ದರು. ಕ್ಯಾಂಪ್ ನಿಂದ ಹೊರ ಹೋಗುತ್ತಿದ್ದಂತೆಯೇ ಅವರಿಗೆ ಗುಂಡೇಟು ಬಿದ್ದಿತ್ತು. ತೀವ್ರ ಗಾಯದಿಂದಾಗಿ ಮಹಿಳೆ ಕೊನೆಯುಸಿರೆಳೆದಿದ್ದರು ಎಂದು ತಿಳಿಸಿದ್ದಾರೆ.

ಹಮಾಸ್ ಉಗ್ರರು ಆಸ್ಪತ್ರೆಯಲ್ಲಿ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿದ್ದು, ಇಲ್ಲಿಂದಲೇ ಸಂಚು ರೂಪಿಸುತ್ತಿದೆ ಎಂದು ಹೇಳಿ ಕೆಲ ದಿನಗಳ ಹಿಂದೆ ಇಸ್ರೇಲ್ ಸೇನಾಪಡೆ ಅಲ್-ಶಿಫಾ ಆಸ್ಪತ್ರೆಯಲ್ಲಿ ಬಾಂಬ್ ದಾಳಿ ನಡೆಸಿತ್ತು.

ಈ ಆಸ್ಪತ್ರೆಯ ಬಳಿಯೇ ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿಯ ಕ್ಯಾಂಪಸ್ ಇದೆ. ಇದೀಗ ಸಂಪೂರ್ಣ ಆಸ್ಪತ್ರೆ ಹಾಗೂ ಸುರಂಗವನ್ನು ಇಸ್ರೇಲ್ ಸೇನಾಪೆ ತನ್ನ ವಶಕ್ಕೆ ಪಡೆದುಕೊಂಡಿದ್ದು, ಸುತ್ತಮುತ್ತಲಿನ ಪ್ರದೇಶಗಳಿಗೆ ಹೊರಗಿನ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಆಗಾಗ್ಗೆ ಇಲ್ಲಿ ಸೈರನ್ ಗಳು ಮೊಳಗುತ್ತಿದ್ದು, ಇದು ಆತಂಕವನ್ನು ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ.

ಕ್ಯಾಂಪಸ್ ನಲ್ಲಿ ಮೂವರು ಸಿಸ್ಟರ್ಸ್ ಗಳಿದ್ದು, 60 ಮಂದಿ ಅಂಗವಿಕಲರು, ಮಾನಸಿಕ ಅಸ್ವಸ್ಥರು, ಮಕ್ಕಳು, ವಯಸ್ಸಾದವರ ಸೇವೆ ಮಾಡುತ್ತಿದ್ದಾರೆ. ಕ್ಯಾಂಪಸ್ ನಲ್ಲಿ ನೀರು, ಆಹಾರ, ವೈದ್ಯಕೀಯ ವ್ಯವಸ್ಥೆ, ವಿದ್ಯುತ್, ಎಲ್'ಪಿಜಿ ಸಿಲಿಂಡರ್ ವ್ಯವಸ್ಥೆಗಳಿಲ್ಲ. ಕೆಲವೊಮ್ಮೆ ಧೈರ್ಯ ಮಾಡಿ ಇಲ್ಲಿಗೆ ಬಂದು ಕೆಲವರು ಆಹಾರವನ್ನು ನೀಡುತ್ತಿದ್ದಾರೆ. ಹೊರಗಿನಿಂದ ಏನೇ ಸಿಕ್ಕರೂ ಅದನ್ನು ಮೊದಲು ಆಶ್ರಯ ಪಡೆದಿರುವವರಿಗೆ ನೀಡಲಾಗುತ್ತಿದೆ. ಸೇವೆ ಮಾಡುತ್ತಿರುವವ ಸಿಸ್ಟರ್ಸ್ ಗಳು ಕೆಲವೊಮ್ಮೆ ದಿನದಲ್ಲಿ ಒಂದು ಹೊತ್ತು ಮಾತ್ರ ಆಹಾರ ಸೇವನೆ ಮಾಡಿ ದಿನದೂಡುತ್ತಿದ್ದಾರೆಂದು ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com