ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ರಾಜ್ಯ ಸರ್ಕಾರ 195 ಕಿಲೋಮೀಟರ್ ಉದ್ದದ ಸುರಂಗ ರಸ್ತೆ ಯೋಜನೆಗೆ ಮುಂದಾಗಿರುವಾಗಲೇ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ತಜ್ಞರು ವರದಿ ಸಲ್ಲಿಸಿದ್ದಾರೆ. ಇದು ನಗರಕ್ಕೆ ಮಾರಕವಾಗಲಿದೆ. ಈ ಯೋಜನೆಯು ನಗರದಲ್ಲಿ ದಟ್ಟಣೆ ಕಡಿಮೆ ಮಾಡಲು ಅಥವಾ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ನೆರವಾಗುವುದಿಲ್ಲ ಎಂದಿದ್ದಾರೆ.
ಬ್ರಾಂಡ್ ಬೆಂಗಳೂರು ಪರಿಕಲ್ಪನೆಯ ಭಾಗವಾಗಿ ಸೆಪ್ಟೆಂಬರ್ 5 ರಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗಿದೆ. ಅದರ ಹೊರತಾಗಿಯೂ ಅಕ್ಟೋಬರ್ 5 ರಂದು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು "ಮಹತ್ವಾಕಾಂಕ್ಷೆಯ" ಯೋಜನೆಗೆ 45 ದಿನಗಳಲ್ಲಿ ಟೆಂಡರ್ ಆಹ್ವಾನಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಬಳ್ಳಾರಿ ರಸ್ತೆ, ಹಳೇ ಮದ್ರಾಸ್ ರಸ್ತೆ, ಎಸ್ಟೀಮ್ ಮಾಲ್ ಜಂಕ್ಷನ್-ಮೇಖ್ರಿ ವೃತ್ತ, ಮಿಲ್ಲರ್ಸ್ ರಸ್ತೆ, ಚಾಲುಕ್ಯ ವೃತ್ತ, ಟ್ರಿನಿಟಿ ವೃತ್ತ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆ-ಕೃಷ್ಣರಾವ್ ಪಾರ್ಕ್, ಮೈಸೂರು ರಸ್ತೆ-ರಸ್ತೆ-ಸಿರ್ಸಿ ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ-ಯಶವಂತಪುರ ಜಂಕ್ಷನ್, ಹೊರವರ್ತುಲ ರಸ್ತೆ, ಗೊರಗುಂಟೆಪಾಳ್ಯ, ಕೆಆರ್ ಪುರಂ ಮತ್ತು ಸಿಲ್ಕ್ ಬೋರ್ಡ್ ಸಂಪರ್ಕ ಕಲ್ಪಿಸುವ ಯೋಜನೆ ಹಂತ ಹಂತವಾಗಿ ಅನುಷ್ಠಾನಗೊಳ್ಳಲಿದೆ ಎಂದು ಶಿವಕುಮಾರ್ ಘೋಷಿಸಿದ್ದಾರೆ.
ಪ್ರಸ್ತಾವಿತ ಸುರಂಗ ಮಾರ್ಗ ಯೋಜನೆ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ IISc ಸುಸ್ಥಿರ ಸಾರಿಗೆ ಲ್ಯಾಬ್ನ ಟ್ರಾನ್ಸ್ಪೋರ್ಟೇಶನ್ ಸಿಸ್ಟಮ್ಸ್ ಇಂಜಿನಿಯರಿಂಗ್ ಸೆಲ್ ಸಂಚಾಲಕ ಪ್ರೊ ಆಶಿಶ್ ವರ್ಮಾ, ಇದು ಈ ಹಿಂದೆ ಪ್ರಸ್ತಾಪಿಸಲಾದ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಎಲಿವೇಟೆಡ್ ಕಾರಿಡಾರ್ ಯೋಜನೆಯಂತೆಯೇ ಇವೆ. ಇದರ ಬಗ್ಗೆ ಅಧ್ಯಯನ ಮಾಡಲಾಗಿದ್ದು, ಮೆಟ್ರೋ ಮಾರ್ಗವೇ ಸೂಕ್ತ ಎಂಬುದು ಕಂಡುಬಂದಿದೆ ಎಂದು ತಿಳಿಸಿದರು.
ಪ್ರಸ್ತಾವಿತ ಕಾರಿಡಾರ್ ಉದ್ದಕ್ಕೂ ಸುರಂಗ ರಸ್ತೆ ಇಲ್ಲದೆ, ಸುರಂಗ ರಸ್ತೆಯೊಂದಿಗೆ ಮತ್ತು ಸುರಂಗವಿಲ್ಲದೆ ಮೆಟ್ರೋ ನಿರ್ಮಾಣ ಕುರಿತು ಮೂರು ಮಾದರಿಯಲ್ಲಿ ಸಂಶೋಧಕರು ಅಧ್ಯಯನ ಮಾಡಿದ್ದಾರೆ. 2020 ಮತ್ತು 2030 ವರ್ಷಕ್ಕಾಗಿ ಮಾದರಿಗಳನ್ನು ವಿಶ್ಲೇಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
‘ಮೆಟ್ರೊ 40 ಪಟ್ಟು ಹೆಚ್ಚು ಪರಿಣಾಮಕಾರಿ: "3.5 ಮೀಟರ್ ಅಗಲವಿರುವ ಒಂದು ಕಿಮೀ ಸುರಂಗ ರಸ್ತೆಯಲ್ಲಿ ಪ್ರತಿ ದಿಕ್ಕಿನಲ್ಲಿ 1,200 ಪ್ರಯಾಣಿಕರು ಸಾಗುತ್ತಾರೆ ಎಂಬುದು ಕಂಡುಬಂದಿದೆ. ಅದೇ ಅಗಲದಲ್ಲಿ ಮೆಟ್ರೋ ಮಾರ್ಗ ನಿರ್ಮಾಣ ಮಾಡಿದರೆ ಒಂಬತ್ತು ಕಾರ್ ಕೋಚ್ನಲ್ಲಿ 69,000 ಪ್ರಯಾಣಿಕರು ಸಾಗಬಹುದಾಗಿದೆ. ಹೀಗಾಗಿ, ಅದೇ ನಿರ್ಮಾಣ ವೆಚ್ಚದೊಂದಿಗೆ ಮೆಟ್ರೋ 40 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ. ಮೆಟ್ರೊಗೆ ಬಳಸುವ ಸುರಂಗ ಕೊರೆಯುವ ಯಂತ್ರ (ಟಿಬಿಎಂ) ಸುರಂಗ ರಸ್ತೆ ಯೋಜನೆಗೂ ಬಳಕೆಯಾಗಲಿದೆ. ಆದ್ದರಿಂದ ಅದೇ ವೆಚ್ಚದಲ್ಲಿ ಸುರಂಗ ಮಾರ್ಗದ ಬದಲು ಹೆಚ್ಚಿನ ಜನರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಬಹುದು ಎಂದು ಪ್ರೊ ಆಶಿಶ್ ವರ್ಮಾ ಹೇಳಿದರು.
ಕಾರುಗಳು ಆಕ್ರಮಿಸಿಕೊಂಡಿರುವ ಪ್ರದೇಶವು ಬಸ್ಗಳು ಆಕ್ರಮಿಸಿಕೊಂಡಿರುವ ಜಾಗಕ್ಕಿಂತ ಎಂಟು ಪಟ್ಟು ಹೆಚ್ಚು ಮತ್ತು ದ್ವಿಚಕ್ರ ವಾಹನಗಳು ಆಕ್ರಮಿಸಿಕೊಂಡಿರುವ ಪ್ರದೇಶವು ಬಸ್ಗಳು ಆಕ್ರಮಿಸಿಕೊಂಡಿರುವ ಸ್ಥಳಕ್ಕಿಂತ ಐದು ಪಟ್ಟು ಹೆಚ್ಚು ಎಂದು ವರದಿ ತೋರಿಸಿದೆ. ವಾಹನ-ಕಿಮೀ ಪ್ರಯಾಣಿಸಿದ ವರ್ಗದ ಹೋಲಿಕೆಯಡಿ ಸುರಂಗ ರಸ್ತೆಗಳನ್ನು ನಿರ್ಮಿಸಿದರೆ 2023 ರಲ್ಲಿ ವಾಹನಗಳ ಸಂಖ್ಯೆಯಲ್ಲಿ ಶೇ. 2.7 ರಷ್ಚು ಹೆಚ್ಚಳ ಮತ್ತು ಮೆಟ್ರೋ ಬಳಸಿದರೆ ವಾಹನಗಳ ಸಂಖ್ಯೆಯಲ್ಲಿ 5.3% ಕಡಿತವಾಗಲಿದೆ ಎಂದು ವರದಿ ತೋರಿಸಿದೆ.
2031 ರಲ್ಲಿ ಸುರಂಗ ರಸ್ತೆಗಳ ಬದಲಿಗೆ ಮೆಟ್ರೋವನ್ನು ಬಳಸಿದಾಗ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಮತ್ತು ಕಣಗಳ ವಸ್ತುವಿನ (PM2.5) ಕಡಿತ ಕ್ರಮವಾಗಿ ಶೇ. 14.8 ಮತ್ತು ಶೇ. 18. 6 ರಷ್ಟು ಆಗಿರುತ್ತದೆ ಎಂದು ಹೇಳಿದೆ. ಆಕ್ಸೈಡ್ ಮಟ್ಟಗಳು ಕ್ರಮವಾಗಿ ಶೇ. 27. 2 ಮತ್ತು 11.3% ರಷ್ಟು ಕಡಿಮೆಯಾಗುತ್ತವೆ. IISc ಅಧ್ಯಯನದಂತೆ ಸುರಂಗ ರಸ್ತೆಗಳನ್ನು ನಿರ್ಮಿಸಿದರೆ 2031 ರಲ್ಲಿ ವರ್ಷಕ್ಕೆ ಅಪಘಾತಗಳಿಂದ ಸಾವನ್ನಪ್ಪುವವರ ಸಂಖ್ಯೆ 1,069 ಕ್ಕೆ ಏರುವ ನಿರೀಕ್ಷೆಯಿದೆ. ಆದರೆ ಸುರಂಗ ರಸ್ತೆಗಳಿಲ್ಲದ ಮೆಟ್ರೋ ಮತ್ತು ಅದರ ವಿಸ್ತರಣೆಗಳೊಂದಿಗೆ ಇದು 830 ಕ್ಕೆ ಕಡಿಮೆಯಾಗುತ್ತದೆ ಎಂದು ತಿಳಿಸಲಾಗಿದೆ.
Advertisement