ಪ್ರಿಯಕರನೊಂದಿಗೆ ಸೇರಿ ಅತ್ತೆಯನ್ನೇ ಕೊಂದ ಸೊಸೆ; ಮೊಬೈಲ್ ಡಾಟಾದಿಂದ ಕೊಲೆ ರಹಸ್ಯ ಬಯಲು!
ಬೆಂಗಳೂರು: ಪ್ರಿಯಕರನೊಂದಿಗೆ ಸೇರಿಕೊಂಡು ಸೊಸೆಯೊಬ್ಬಳು ಅತ್ತೆಯನ್ನು ಹತ್ಯೆ ಮಾಡಿರುವ ಘಟನೆಯೊಂದು ಕೆಂಗೇರಿ ಉಪವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಕ್ಷ್ಮಮ್ಮ ಹತ್ಯೆಯಾದ ಮಹಿಳೆಯಾಗಿದ್ದಾರೆ. ಅಕ್ಟೋಬರ್ 5ರಂದು ವಿದ್ಯಾಮಾನ್ಯ ನಗರದಲ್ಲಿರುವ ಮನೆಯ ಸ್ನಾನಗೃಹದೊಳಗೆ ಮಹಿಳೆಯ ಶವವಾಗಿ ಪತ್ತೆಯಾಗಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈವೇಳೆ ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಹೃದಯಾಘಾತದಿಂದ ಮಹಿಳೆ ಸಾವನ್ನಪ್ಪಿರಬಹುದು ಎಂದು ಭಾವಿಸಿದ ಕುಟುಂಬಸ್ಥರು, ಮೃತದೇಹವನ್ನು ಕುಣಿಗಲ್ನಲ್ಲಿರುವ ಅವರ ಸ್ವಗ್ರಾಮಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಿದರು.
ಮಹಿಳೆ ತಾವಿದ್ದ ಕಟ್ಟಡದಲ್ಲಿ ಹಲವು ಮನೆಗಳನ್ನು ಬಾಡಿಗೆಗೆ ನೀಡಿದ್ದು, ಮನೆಯಲ್ಲಿದ್ದ ಬಾಡಿಗೆ ವ್ಯಕ್ತಿ ಹಾಗೂ ಮಹಿಳೆಯ ಸೊಲೆ ಹತ್ಯೆಯ ಪ್ರಮುಖ ರುವಾರಿಗಳಾಗಿದ್ದಾರೆ.
ಮದುವೆಯಾಗಿದ್ದರೂ ಮಂಜುನಾಥ್ ಅವರ ಪತ್ನಿ ತಮ್ಮ ಮನೆಯ ಮೇಲೆ ಬಾಡಿಗೆಗೆ ಇದ್ದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದಳು. ಮನೆಯ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಲಕ್ಷ್ಮಮ್ಮ ಹಾಗೂ ಆಕೆಯ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದ್ದರಿಂದ ತಾನೇ ಮನೆಯ ಹಣದ ವ್ಯವಹಾರ ನೋಡಿಕೊಳ್ಳಬೇಕು ಎಂದು ಕಾಯುತ್ತಿದ್ದಳು.
ಈ ಸಂಬಂಧ ಮಹಿಳೆಯ ತನ್ನ ಪ್ರಿಯಕರ ಜೊತೆ ಸೇರಿ ಅತ್ತೆಯನ್ನು ಹತ್ಯೆಗೈಯಲು ಸಂಚು ರೂಪಿಸಿದ್ದಳು. ಅದರಂತೆ ಅಕ್ಟೋಬರ್ 5ರಂದು ಮನೆಯಲ್ಲಿ ಗಂಡ ಇರದಿದ್ದಾಗ ಅತ್ತೆಗೆ ಮತ್ತು ಬರುವ ಮಾತ್ರೆ ನೀಡಿದ್ದ ನಂತರ ಪ್ರಿಯಕರ ಜೊತೆ ಸೇರಿ ಕತ್ತು ಹಿಸುಕಿ ಕೊಲೆಗೈದಿದ್ದಳು. ನಂತರ ಹೃದಯಾಘಾತವಾಗಿ ಸಾವನ್ನಪ್ಪಿರುವುದಾಗಿ ಬಿಂಬಿಸಿದ್ದಳು.
ಅದೇ ಕಟ್ಟಡದಲ್ಲಿ 1ನೇ ಮಹಡಿಯಲ್ಲಿ ವಾಸವಿದ್ದ ಮತ್ತೊಬ್ಬ ವ್ಯಕ್ತಿ ಅನುಮಾನಗೊಂಡು ಅಕ್ಷಯ್ ಮೊಬೈಲ್ ಪರಿಶೀಲನೆ ನಡೆಸಿದ್ದ. ಈ ವೇಳೆ ಅಕ್ಷಯ್ ಚಾಟಿಂಗ್ ವಿಚಾರ, ಹತ್ಯೆಯ ಸಂಚು ವಿಚಾರ ಬಯಲಾಗಿದೆ. ಈ ವಿಷಯವನ್ನು ಮಂಜುನಾಥ್ ಅವರಿಗೆ ತಿಳಿಸಿದ್ದಾನೆ. ಅಲ್ಲದೇ ಚಾಟಿಂಗ್ ಮಾಡಿರುವುದನ್ನು ಸಾಕ್ಷ್ಯ ಸಮೇತ ನೀಡಿದ್ದಾರೆ. ಪರಿಶೀಲನೆ ಬಳಿಕ ಸಾಕ್ಷಿ ಸಮೇತ ಬ್ಯಾಡರಹಳ್ಳಿ ಠಾಣೆಗೆ ಮಂಜುನಾಥ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.