ಚಾಮರಾಜನಗರ: ತಮ್ಮ ಗ್ರಾಮದಿಂದ ಬಹಿಷ್ಕಾರದ ನಂತರ ಚಾಮರಾಜನಗರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 17 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮೃತರನ್ನು ಶಿವರಾಜು (45) ಎಂದು ಗುರುತಿಸಲಾಗಿದ್ದು, ಶುಕ್ರವಾರ ಗುಂಡ್ಲುಪೇಟೆ ಪಟ್ಟಣದ ಯಡವನಹಳ್ಳಿಯಲ್ಲಿ ಘಟನೆ ನಡೆದಿದೆ.
ಸಂತ್ರಸ್ತರ ಕುಟುಂಬ, ಸ್ನೇಹಿತರು ಹಾಗೂ ಗ್ರಾಮಸ್ಥರು ಬೇಗೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ, ಬಹಿಷ್ಕಾರಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪೊಲೀಸರು 17 ಜನರ ಮೇಲೆ ಪ್ರಕರಣ ದಾಖಲಿಸಿ, ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
ಶಿವಣ್ಣ ನಾಯ್ಕ ಎಂಬ ವ್ಯಕ್ತಿ ಚಪ್ಪಲಿಯಿಂದ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಗ್ರಾಮದ ಹಿರಿಯರು ಶಿವಣ್ಣ ನಾಯ್ಕಗೆ ಬಹಿಷ್ಕಾರ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಶಿವರಾಜು ಶಿವಣ್ಣ ನಾಯ್ಕ್ ಬಗ್ಗೆ ಸಹಾನುಭೂತಿ ಹೊಂದಿದ್ದರು. ಇದರಿಂದ ಕುಪಿತಗೊಂಡ ಹಿರಿಯರು, ಶಿವಣ್ಣ ನಾಯ್ಕ್ ಜೊತೆ ಶಿವರಾಜು ಕೂಡ ಕೈಜೋಡಿಸಿದ್ದಾರೆ ಎಂದು ಆರೋಪಿಸಿ ಅವರಿಗೂ ಬಹಿಷ್ಕಾರ ಹಾಕಿದ್ದಾರೆ ಮತ್ತು ಮತ್ತು 6,000 ರೂಪಾಯಿ ದಂಡವನ್ನೂ ವಿಧಿಸಿದ್ದಾರೆ.
ಈ ಅವಮಾನ ತಾಳಲಾರದೆ ಶಿವರಾಜು ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement