ಬೆಂಗಳೂರು: ಇನ್ಷೆಂಟಿವ್ ಆಸೆ ಬೀಳುತ್ತಿರುವ ಬಿಎಂಟಿಸಿ ಬಸ್ ನಿರ್ವಾಹಕರು, ಪ್ರಯಾಣಿಕರಿಗೆ ಹೆಚ್ಚುವರಿ ದರದ ಟಿಕೆಟ್ ಗಳನ್ನು ನೀಡುತ್ತಿರುವುದು ಬೆಳಕಿಗೆ ಬರುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯ ಸರ್ಕಾರವು ಶಕ್ತಿ ಯೋಜನೆ ಜಾರಿ ಮಾಡಿದ್ದು, ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಸರ್ಕಾರಿ ಬಸ್ಗಳಲ್ಲಿ ನಿರ್ವಾಹಕರು ಮಹಿಳೆಯರಿಗೆ ಫ್ರೀ ಟಿಕೆಟ್ ನೀಡುತ್ತಿದ್ದು, ಈ ಟಿಕೆಟ್ನ ಹಣವನ್ನು ಸರ್ಕಾರ ನಿಗಮಗಳಿಗೆ ನೀಡುತ್ತದೆ. ಅಲ್ಲದೆ, ಯೋಜನೆಯಡಿ ಬಸ್ ನಿರ್ವಾಹಕರಿಗೆ ಶೇ.3ರಷ್ಟು ಪ್ರೋತ್ಸಾಹ ಧನವನ್ನೂ ನೀಡಲಾಗುತ್ತಿದೆ.
ಹೀಗಾಗಿ ಹೆಚ್ಚಿನ ಪ್ರೋತ್ಸಾಹ ಧನ ಪಡೆಯಲು ನಿರ್ವಾಹಕರು ಮಹಿಳೆಯರು ಇಳಿಯಲು ನಿಲ್ದಾಣಗಳಿಗಿಂತ ಮುಂದಿನ ಸ್ಥಳಗಳಿಗೆ ಶೂನ್ಯ ಟಿಕೆಟ್ ಗಳನ್ನು ನೀಡುತ್ತಿರುವುದು ಬೆಳಕಿಗೆ ಬಂದಿದೆ.
ಮೆಜೆಸ್ಟಿಕ್ ನಿಂದ ಶಿವಾಜಿನಗರಕ್ಕೆ ಹೋಗುವ ಮಹಿಳಾ ಪ್ರಯಾಣಿಕರಿಗೆ ಶಿವಾಜಿನಗರದ ಮುಂದೆ ಇರುವ ನಿಲ್ದಾಣಕ್ಕೆ ಟಿಕೆಟ್ ನೀಡಲಾಗುತ್ತಿದೆ. ಇದರಿಂದ ಟಿಕೆಟ್ ದರ ಹೆಚ್ಚಾಗಲಿದ್ದು, ಪ್ರೋತ್ಸಾಹ ಧನಕೂಡ ಹೆಚ್ಚಲಿದೆ.
ನಾನು ಪ್ರತಿದಿನ ಸಿಪಿಆರ್ಐ ಮುಖ್ಯ ಗೇಟ್ನಿಂದ ಬಾಳೇಕುಂದ್ರಿ ವೃತ್ತಕ್ಕೆ ಬಸ್ ಹತ್ತುತ್ತೇನೆ. ಆದರೆ, ಶಿವಾಜಿನಗರಕ್ಕೆ ನನಗೆ ಟಿಕೆಟ್ ನೀಡುತ್ತಿದ್ದಾರೆ. ಬಾಳೇಕುಂದ್ರಿ ವೃತ್ತಕ್ಕೆ ಟಿಕೆಟ್ ದರ 15 ರೂ ಆಗಲಿದೆ. ಇದೇ ಟಿಕೆಟ್ ಶಿವಾಜಿನಗರಕ್ಕೆ 20 ರೂ ಆಗಲಿದೆ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.
ನಾನು ಮೆಜೆಸ್ಟಿಕ್ನಿಂದ ಸಿರ್ಸಿ ಸರ್ಕಲ್ಗೆ ಪ್ರಯಾಣಿಸುತ್ತೇನೆ. ಆದರೆ, ನನ್ನ ನಿಲ್ದಾಣಕ್ಕಿಂತ ಮೂರು ನಿಲ್ದಾಣಗಳ ಮುಂದಿರುವ ನಾಯಂಡಹಳ್ಳಿಗೆ ನನಗೆ ಟಿಕೆಟ್ ನೀಡಿದ್ದರು ಎಂದು ಮತ್ತೊಬ್ಬ ಪ್ರಯಾಣಿಕರಾದ ಶಾಂತಿ ಎಂಬುವವರು ತಿಳಿಸಿದ್ದಾರೆ.
ಶಕ್ತಿ ಯೋಜನೆ ಜಾರಿಯಾದ ಬಳಿಕ ಉಚಿತ ಟಿಕೆಟ್ ನೀಡಲಾಗುತ್ತಿದ್ದು, ಟಿಕೆಟ್'ಗೆ ಮಹಿಳಾ ಪ್ರಯಾಣಿಕರು ಹಣವನ್ನು ನೀಡದ ಕಾರಣ, ನಿರ್ವಾಹಕರು ನೀಡುವ ಟಿಕೆಟ್ ಗಳ ಕುರಿತು ಹಲವರು ಪ್ರಶ್ನಿಸುತ್ತಿಲ್ಲ ಎಂದು ಹೇಳಿದ್ದಾರೆ.
ಹೆಚ್ಚಿನ ಪ್ರೋತ್ಸಾಹ ಧನ ಪಡೆಯಲು ಈ ರೀತಿ ಮಡಲಾಗುತ್ತಿದೆ. ಇನ್ನೂ ಕೆಲವರು ಡಿಪೋ ಮ್ಯಾನೇಜರ್ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ತಮ್ಮ ಮಾರ್ಗಗಳಲ್ಲಿ ನಿಯಮಿತ ಶುಲ್ಕ ಸಂಗ್ರಹ ಕಡಿಮೆಯಾದಾಗ ಈ ರೀತಿ ಮಾಡುತ್ತಾರೆ. ಮಾರ್ಗದಲ್ಲಿ ಪ್ರತಿನಿತ್ಯ ರೂ,5000ಗಳನ್ನು ಸಂಗ್ರಹಿಸಬೇಕು. ಒಂದು ವೇಳೆ ರೂ.3,500 ಸಂಗ್ರಹವಾದರೆ, ಕೊರತೆ ಸರಿದೂಗಿಸಲು ದೂರದ ಸ್ಥಳಗಳಿಗೆ ಟಿಕೆಟ್ ಗಳನ್ನು ನೀಡುತ್ತಿದ್ದಾರೆಂದು ಬಿಎಂಟಿಸಿ ಬಸ್ ಕಂಡಕ್ಟರ್ ವೊಬ್ಬರು ಹೇಳಿದ್ದಾರೆ.
ಹೆಚ್ಚಿನ ಪ್ರೋತ್ಸಾಹ ಧನ ಪಡೆಯಲು ಕೆಲವು ಕಂಡಕ್ಟರ್ ಗಳು ಈ ರೀತಿ ಮಾಡುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ತಪ್ಪೆಸಗುವ ಕಂಡಕ್ಟರ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಹೇಳಿದ್ದಾರೆ.
Advertisement