ಬೆಂಗಳೂರು: ಮರ್ಸಿಡಿಸ್ ಬೆಂಜ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬ ಹಾಗೂ ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ ಜೆಪಿ ನಗರದ 8ನೇ ಹಂತದಲ್ಲಿ ನಡೆದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ರಾಜೇಂದ್ರ(46) ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಮರ್ಸಿಡಿಸ್ ಬೆಂಜ್ ಕಾರು ಗೊಯೇಲ್ ಎಜುಕೇಷನ್ ಟ್ರಸ್ಟ್ ಗೆ ಸೇರಿದ್ದು, ಮುಂದೆ ಚಲಿಸುತ್ತಿದ್ದ ಬೈಕ್ ಗೆ ಹಿಂಬಂದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಾಜೇಂದ್ರ ಅವರು ಕಾರಿನ ಮೇಲೆ ಬಂದು ಬಿದ್ದಿದ್ದಾರೆ.
ಅಪಘಾತ ಬಳಿಕ ಕಾರಿನ ಚಾಲಕ ಬೈಕ್ ಸವಾರನನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ರಾಜೇಂದ್ರ ಅವರು ಸಾವನ್ನಪ್ಪಿದ್ದಾರೆ.
ಚಿಕ್ಕಲಸಂದ್ರ ನಿವಾಸಿಯಾಗಿರುವ ಮೃತ ರಾಜೇಂದ್ರ ಅವರು ಗೊಟ್ಟಿಗೆರೆಯಲ್ಲಿ ಫ್ಯಾಬ್ರಿಕೇಷನ್ ಶಾಪ್ ಹೊಂದಿದ್ದು, ಕೋಣನಕುಂಟೆ ಕ್ರಾಸ್ ನಿಂದ ಗೊಟ್ಟಿಗೆರೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement