Bengaluru Rains: ತಂಪೆರೆದ ಮಳೆರಾಯ, ಬೆಂಗಳೂರಿನಲ್ಲಿ ಗಾಳಿ ಸಹಿತ ಜೋರು ಮಳೆ; ಇನ್ನೂ 4 ದಿನ ಮಳೆ ಸಾಧ್ಯತೆ

ಮುಂಗಾರು-ಹಿಂಗಾರು ಕೈಕೊಟ್ಟ ಬಳಿಕ ಬೆಂಗಳೂರಿನಲ್ಲಿ ತಾಪಮಾನ ಏರಿಕೆಯಿಂದ ಜನರು ಬಳಲಿ ಹೋಗಿದ್ದು, ಸೋಮವಾರ ಸಂಜೆ ಸುರಿದ ಮಳೆ ಜನರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮಳೆ
ರಾಜಧಾನಿ ಬೆಂಗಳೂರಿನಲ್ಲಿ ಮಳೆ
Updated on

ಬೆಂಗಳೂರು: ಮುಂಗಾರು-ಹಿಂಗಾರು ಕೈಕೊಟ್ಟ ಬಳಿಕ ಬೆಂಗಳೂರಿನಲ್ಲಿ ತಾಪಮಾನ ಏರಿಕೆಯಿಂದ ಜನರು ಬಳಲಿ ಹೋಗಿದ್ದು, ಸೋಮವಾರ ಸಂಜೆ ಸುರಿದ ಮಳೆ ಜನರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ.

ಹೌದು.. ಬೆಂಗಳೂರಿನಲ್ಲಿ (Bengaluru) ಕೆಲ ದಿನಗಳಿಂದ ಕಾಣೆಯಾಗಿದ್ದ ಮಳೆರಾಯ (Bengaluru Rains) ಸೋಮವಾರ ಏಕಾಏಕಿ ಅಬ್ಬರಿಸಿದ್ದಾನೆ. ಸಂಜೆ ಸುರಿದ ಜೋರು ಮಳೆಗೆ ವಾಹನ ಸವಾರರು ಪರದಾಟ ನಡೆಸಿದ್ದು, ಮಳೆ ಮಾತ್ರವಲ್ಲದೇ ಇತ್ತ ಜೋರು ಗಾಳಿಯು ಬೀಸಿದ ಪರಿಣಾಮ ಕೆಲಕಾಲ ವಾಹನ ಸವಾರರು ಪರದಾಡುವಂತಾಗಿತ್ತು.  

ಮುಂಗಾರು ಜತೆ ಹಿಂಗಾರು ಕೂಡ ಕೈಕೊಟ್ಟ ಪರಿಣಾಮ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಕಣ್ಮರೆಯಾಗಿತ್ತು. ಆದರೆ, ಸೋಮವಾರ ಬೆಳಿಗ್ಗೆಯಿಂದ ಕೆಲವೆಡೆ ಮೋಡ ಮುಸುಕಿದ ವಾತಾವರಣ ಇತ್ತು. ಮಧಾಹ್ನ 1 ಗಂಟೆ ಬಳಿಕ ಕೆಲವೆಡೆ ತುಂತುರು ಮಳೆಯಾಗಿತ್ತು. ಆದರೆ, ಸಂಜೆ 4 ಬಳಿಕ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಮಳೆ ಸುರಿದಿದೆ. ಅರ್ಧ ಗಂಟೆಗಳ ಕಾಲ ಸುರಿದ ಗಾಳಿ ಮಳೆಗೆ ವಾಹನ ಸವಾರರು, ಕಚೇರಿಯಿಂದ ಮನೆಕಡೆ ಹೊರಟಿದ್ದ ಉದ್ಯೋಗಿಗಳು ಪರದಾಟ ನಡೆಸಿದರು. 

ಬೆಂಗಳೂರಿನಲ್ಲಿ ಮಳೆಯ ಜೊತೆಗೆ ಜೋರು ಗಾಳಿ ಕೂಡ ಜನರು ಪರದಾಡುವಂತೆ ಮಾಡಿತು.ವಾರದ ಬಳಿಕ ಬಂದ ಈ ಅನಿರೀಕ್ಷಿತ ಭಾರಿ ಮಳೆ ಸುರಿದಿದ್ದು, ಬಿಸಿಲ ಬೇಗೆಯಿಂದ ಬಳಲಿ ಹೋಗಿದ್ದ ಉದ್ಯಾನನಗರಿ ಮಂದಿಗೆ ಮಳೆ ಕೊಂಚ ತಂಪೆರೆದಿದೆ. ಬೆಂಗಳೂರು ನಗರದ ಪ್ರಮುಖ ಬಡಾವಣೆಗಳಾದ ಎಂಜಿ ರಸ್ತೆ, ಶಿವಾಜಿನಗರ, ಸಂಪಂಗಿರಾಮನಗರ, ಪುರಭವನ, ಕೋರಮಂಗಲ, ಬಿಟಿಎಂ, ಬನ್ನೇರುಘಟ್ಟ ರಸ್ತೆ, ಸರ್ಜಾಪುರ, ಕೆಆರ್‌ಪುರಂ, ಹೆಬ್ಬಾಳ, ಯಶವಂತಪುರ, ಬಸವನಗುಡಿ, ಮೈಸೂರು ರಸ್ತೆ, ಸಂಜಯ್‌ನಗರ, ಗಾಂಧಿನಗರ, ವಿಮಾನ ನಿಲ್ದಾಣ ರಸ್ತೆ, ಶಾಂತಿ ನಗರ, ಕೆಆರ್‌ ಮಾರುಕಟ್ಟೆ, ಮೆಜೆಸ್ಟಿಕ್‌, ರಾಜಾಜಿನಗರ, ಪೀಣ್ಯ, ನಾಗರಬಾವಿ, ಸಿವಿ ರಾಮನ್‌ ನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ.

ಇನ್ನೂ 4-5 ದಿನ ಮಳೆ: ಹವಾಮಾನ ವರದಿ
ರಾಜ್ಯದಲ್ಲಿ ಅಕ್ಟೋಬರ್‌ 30 ರಿಂದ 5 ದಿನಗಳ ಕಾಲ ಹಲವೆಡೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ (India Meteorological Department) ಮಾಹಿತಿ ನೀಡಿತ್ತು. ಅದರಂತೆ ಮುಂದಿನ ಮೂರರಿಂದ ನಾಲ್ಕು ದಿನಗಳ ಕಾಲ ರಾಜ್ಯದ  ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸೋಮವಾರದಿಂದ 5 ದಿನ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಪ್ರಮುಖವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ದಾವಣಗೆರೆ,ಹಾಸನ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ವಿಜಯನಗರ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಕರ್ನಾಟಕ (Karnataka)ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com