ರಾಜ್ಯದ ಮೇಲೆ ಬರದ ಛಾಯೆ: ಸರ್ಕಾರದಿಂದ ಸರಣಿ ಸಭೆ, 130 ತಾಲೂಕುಗಳು ಬರಪೀಡಿತವೆಂದು ಘೋಷಣೆ ಸಾಧ್ಯತೆ

ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ಕರ್ನಾಟಕದಲ್ಲಿ ಮಳೆ ಕೊರತೆ ಎದುರಾಗಿದ್ದು, ಬರ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಸರಣಿ ಸಭೆಗಳ ನಡೆಸಲು ಮುಂದಾಗಿದೆ. ಇದರಂತೆ ಇಂದು (ಸೋಮವಾರ) ನಡೆಯುವ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ 130 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡುವ ಸಾಧ್ಯತೆಗಳಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ಕರ್ನಾಟಕದಲ್ಲಿ ಮಳೆ ಕೊರತೆ ಎದುರಾಗಿದ್ದು, ಬರ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಸರಣಿ ಸಭೆಗಳ ನಡೆಸಲು ಮುಂದಾಗಿದೆ. ಇದರಂತೆ ಇಂದು (ಸೋಮವಾರ) ನಡೆಯುವ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ 130 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡುವ ಸಾಧ್ಯತೆಗಳಿವೆ.

ಮುಂಗಾರು ಈ ವರ್ಷ ತೀವ್ರವಾಗಿ ದುರ್ಬಲಗೊಂಡಿದೆ. ಮಳೆಯನ್ನೇ ನೆಚ್ಚಿಕೊಂಡು ಉಳುಮೆ ಮಾಡಿದ್ದವರ ಪೈಕಿ ಹಲವರು ಈಗಾಗಲೇ ಬೆಳೆ ಒಣಗಿದ್ದಕ್ಕೆ, ರೋಗ ಉಂಟಾಗಿದ್ದಕ್ಕೆ ಟ್ರ್ಯಾಕ್ಟರ್ ಹೊಡೆಸಿದ್ದಾರೆ. ಬೀಜ, ಗೊಬ್ಬರಕ್ಕೆಲ್ಲ ಖರ್ಚು ಮಾಡಿದ ಹಣ ವ್ಯರ್ಥವಾಗಿದೆ. ರೈತರು ಪರಿಹಾರದ ಹಣಕ್ಕಾಗಿ ಸರ್ಕಾರತದತ್ತ ನೋಡುತ್ತಿದ್ದಾರೆ.

ಮಳೆ ನಂಬಿದ ರೈತರಿಗೆ ಮೋಸವಾಗಿದ್ದು, ರಾಜ್ಯ ಸರ್ಕಾರ ತಾಲೂಕುಗಳಲ್ಲಿ ಸರ್ವೆ ನಡೆಸಿದೆ. ಈ ಸಮೀಕ್ಷೆಯ ವರದಿ ಆಧಱಿಸಿ ಇಂದು ಸಚಿವ ಸಂಪುಟ ಉಪ ಸಮಿತಿಯ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

ಜೂನ್ ನಲ್ಲಿ ಬರಬೇಕಿದ್ದ ಮಳೆ ಜುಲೈನಲ್ಲಿ ಸಕ್ರಿಯವಾಗಿತ್ತು. ಎರಡು ವಾರದ ನಂತರ ಮರೆಯಾಗಿ ಮತ್ತೆ ಆಗಸ್ಟ್ ನಲ್ಲಿ ಆಗೋಮ್ಮೆ ಈಗೊಮ್ಮೆ ಬಂದು ಮರೆಯಾಗಿದ್ದು, ಬಿಟ್ಟರೆ ನಿರೀಕ್ಷೆಯಷ್ಟು ಮಳೆ ಆಗಿಲ್ಲ. ಇದರಿಂದ ಜಮೀನಿನಲ್ಲಿ ಮೊಣಕಾಲುದ್ದ ಪೈರಿಗೆ ನೀರಿಲ್ಲದೇ ನಾಶವಾಗಿದೆ. ಅನೇಕ ಕಡೆಗಳಲ್ಲಿ ರೈತರು ಒಣಗಿದ ಪೈರನ್ನು ನಾಶ ಪಡಿಸಿದ್ದಾರೆ. ಇನ್ನೂ ಕೆಲವರು ಧನಕರುಗಳು ಮೇಯಲಿ ಎಂದು ಬಿಟ್ಟು ಬಿಟ್ಟಿದ್ದಾರೆ. ಅವರೆಲ್ಲರಿಗೆ ಈಗ ಸರ್ಕಾರ ಆಸರೆಯಾಗಬೇಕಿದೆ. ಸೂಕ್ತ ಪರಿಹಾರ ಒದಗಿಸಬೇಕಿದೆ.

ಈ ಹಿಂದಿನ ಮೂರು ವರ್ಷ ಮುಂಗಾರು ಹಂಗಾಮಿನಲ್ಲಿ ರೈತರು ಪ್ರಹಾಹ, ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದರು. ವಾಡಿಕೆ ಕೆಲವೊಮ್ಮೆ ವಾಡಿಕೆಗಿಂತ ಅಧಿಕ ಮಳೆ ದಾಖಲಾಗಿತ್ತು. ಎಲ್ಲೆಡೆ ಅಂತರ್ಜಲ ಹೆಚ್ಚಾಗಿತ್ತು. ಕೆರೆ ಕಟ್ಟೆಗಳು ತುಂಬಿದ್ದವು. ಕಾವೇರಿ ನೀರು ಸಹ ಭರ್ತಿಯಾಗಿತ್ತು. ಆದರ, ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾಕ್ಕೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ.

ಈ ನಡುವೆ ಬರ ಪರಿಸ್ಥಿತಿ ಎದುರಿಸಲು, ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ಸರಣಿ ಸಭೆಗಳನ್ನು ನಡೆಸುತ್ತಿದೆ.

ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾಗವಹಿಸಲಿದ್ದು, ಪಿಡ್ಬ್ಲ್ಯೂಡಿ, ನಗರಾಭಿವೃದ್ಧಿ, ಜಲಸಂಪನ್ಮೂಲ, ಸಣ್ಣ ನೀರಾವರಿ, ಸಮಾಜ ಕಲ್ಯಾಣ, ಆರ್'ಡಿಪಿಆರ್. ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಬರಗಾಲದ ಪರಿಸ್ಥಿತಿ ಕುರಿತು ಹೆಚ್ಚಿನ ಚರ್ಚೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.

ಇದಾದ ಬಳಿಕ ಸೆಪ್ಟೆಂಬರ್ 12 ಮತ್ತು 13ರಂದು ಎಲ್ಲಾ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳು ಮತ್ತು ಜಿಲ್ಲೆಗಳ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ನಡೆಸಲಿದೆ.

ಸಭೆಯಲ್ಲಿ ಸರ್ಕಾರವು ಆಯಾ ಜಿಲ್ಲೆಗಳಲ್ಲಿರುವ ಬರ ಪರಿಸ್ಥಿತಿ, ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸರ್ಕಾರ ಪ್ರತಿಕ್ರಿಯೆ ಪಡೆಯುವ ನಿರೀಕ್ಷೆಯಿದೆ. ಬಜೆಟ್ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರಲಾಗಿದೆಯೇ ಎಂಬುದನ್ನೂ ಇದೇ ವೇಳೆ ಪರಿಶೀಲನೆ ನಡೆಸಲಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com