ಬೆಂಗಳೂರು: ಡಬಲ್ ಮರ್ಡರ್ ಕೇಸ್, ಮಹಿಳೆಯ ಪ್ರಿಯಕರ ಅರೆಸ್ಟ್!

ಬೆಂಗಳೂರಿನಲ್ಲಿ ನಡೆದಿದ್ದ ಮಹಿಳೆ ಹಾಗೂ  ಆತನ ಮಗನ ಜೋಡಿ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಮಹಿಳೆಯ ಲವರ್ ನನ್ನು ಬಂಧಿಸಿದ್ದಾರೆ.
ಹತ್ಯೆಗೀಡಾದ ನವನೀತಾ ಹಾಗೂ ಆಕೆಯ ಮಗ
ಹತ್ಯೆಗೀಡಾದ ನವನೀತಾ ಹಾಗೂ ಆಕೆಯ ಮಗ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದಿದ್ದ ಮಹಿಳೆ ಹಾಗೂ  ಆತನ ಮಗನ ಜೋಡಿ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಮಹಿಳೆಯ ಲವರ್ ನನ್ನು ಬಂಧಿಸಿದ್ದಾರೆ. ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ 33 ವರ್ಷದ ನವನೀತಾ ಹಾಗೂ ಆಕೆಯ 11 ವರ್ಷದ ಮಗ ಸೃಜನ್ ರವೀಂದ್ರನಗರದ ಅವರ ನಿವಾಸದಲ್ಲಿ ಬುಧವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದರು.  ಆರೋಪಿಯನ್ನು 38 ವರ್ಷದ ಶೇಖರ್ ಅಲಿಯಾಸ್ ಶೇಖರಪ್ಪ ಎಂದು ಗುರುತಿಸಲಾಗಿದ್ದು, ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲಿಗೆ  ನವನೀತಾಳ ಪತಿಯ ಪಾತ್ರದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ತದನಂತರ ಶೇಖರ್‌ಗೆ ನವನೀತಾ ಪರಿಚಯವಾಗಿದ್ದು, ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಲೋಕೇಶ್ ಎಂಬ ಹೆಸರಿನ ಮತ್ತೊಬ್ಬ ವ್ಯಕ್ತಿಯೊಂದಿಗೆ ನವನೀತಾ ಸ್ನೇಹ ಬೆಳೆಸಿದ್ದರಿಂದ ಆಕೆಯೊಂದಿಗೆ ಆತ ಜಗಳವಾಡುತ್ತಿದ್ದ ಎನ್ನಲಾಗಿದೆ.

 ಮಂಗಳವಾರ ರಾತ್ರಿ ಆಕೆಯ ನಿವಾಸಕ್ಕೆ ಬಂದ ಶೇಖರ್, ಮತ್ತೊಮ್ಮೆ ವಿಷಯ ಪ್ರಸ್ತಾಪಿಸಿ ಆಕೆಯ ಕತ್ತು ಸೀಳಿದ್ದಾನೆ. ಬಳಿಕ ಆಕೆಯ ಮಗ ಸೃಜನ್ ನನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಆರೋಪಿ ಎಲ್ ಪಿಜಿ ಗ್ಯಾಸ್ ಸ್ಟೌ ಆನ್ ಮಾಡಿ ಅಡುಗೆ ಕೋಣೆಗೆ ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ನವನೀತಾ ಆಂಧ್ರಪ್ರದೇಶದ ಅನಂತಪುರ ಮೂಲದವರಾಗಿದ್ದು, ಕಳೆದ ಮೂರು ವರ್ಷಗಳಿಂದ ರವೀಂದ್ರನಗರದಲ್ಲಿ ವಾಸಿಸುತ್ತಿದ್ದಳು. ಆಕೆಯ ಪತಿ ಚಂದ್ರು ಕುಡುಕನಾಗಿದ್ದರಿಂದ ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಅವರಿಗೆ ಇಬ್ಬರು ಗಂಡುಮಕ್ಕಳಿದ್ದು, ಇನ್ನೊಬ್ಬ ಮಗ ಆಂಧ್ರಪ್ರದೇಶದ ವಸತಿ ಶಾಲೆಯಲ್ಲಿ ಓದುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com