ಬೆಂಗಳೂರು: ಅಪ್ರಾಪ್ತ ಗ್ರಾಹಕರೇ ಅಧಿಕವಾಗಿದ್ದ ಪಬ್ ಗಳ ಮೇಲೆ ಸಿಸಿಬಿ ದಾಳಿ

ಸಿಲಿಕಾನ್ ಸಿಟಿಯ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ಹುಕ್ಕಾ ಬಾರ್​ಗಳ ಮೇಲೆ ತಡರಾತ್ರಿ ಸಿಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಸಿಲಿಕಾನ್ ಸಿಟಿಯ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ಹುಕ್ಕಾ ಬಾರ್​ಗಳ ಮೇಲೆ ತಡರಾತ್ರಿ ಸಿಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಕೋರಮಂಗಲ, ಇಂದಿರಾನಗರ, ಹೆಚ್ಎಸ್ಆರ್ ಲೇಔಟ್, ಬಾಣಸವಾಡಿ, ಹೆಣ್ಣೂರು ಸೇರಿದಂತೆ ನಗರದ ಹಲವು ಕಡೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಸುಮಾರು ಕಡೆಗಳಲ್ಲಿ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ಅಬಕಾರಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. 

ಅಪ್ರಾಪ್ತ ವಯಸ್ಸಿನವರಿಗೆ ಧೂಮಪಾನಕ್ಕೆ ಅವಕಾಶ, ಮದ್ಯ ಸರಬರಾಜು ಮಾಡುತ್ತಿರುವುದು ಕಂಡು ಬಂದಿದೆ. ಇದೇ ಸಂದರ್ಭದಲ್ಲಿ ಪಬ್ ಒಂದರಲ್ಲಿ ಪತ್ತೆಯಾದ ಅಪ್ರಾಪ್ತರು ನಾವು ಶಾಸಕರ ಕಡೆಯವರು, ಕಿರುತೆರೆ ಕಲಾವಿದರು ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಪ್ರಸಂಗವೂ ನಡೆದಿದೆ.

ನಾಲ್ಕು ಕಡೆಗಳಲ್ಲಿ ಪಬ್ ಮಾಲೀಕರ ವಿರುದ್ಧ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ಅಬಕಾರಿ ನಿಯಮಗಳ ಉಲ್ಲಂಘನೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ತಿಳಿಸಿದ್ದಾರೆ.

ನಗರದ ಕೆಲವೆಡೆ ಕಾಲೇಜು ವಿದ್ಯಾರ್ಥಿಗಳು ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ಹುಕ್ಕಾ ಬಾರ್​ಗಳತ್ತ ಹೋಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಎಂದು ಕೆಲ ಕಾಲೇಜು ಮುಖ್ಯಸ್ಥರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರಿಗೆ ದೂರು ನೀಡಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರ ಸೂಚನೆಯ ಮೇರೆಗೆ ಸಿಸಿಬಿ ಪೊಲೀಸರು ತಡರಾತ್ರಿ ದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com