ಅಬ್ಬೆ ಜಲಪಾತದಲ್ಲಿ ಸಾವಿಗೀಡಾಗಿದ್ದ ಮಹಿಳೆ ಬೆಂಗಳೂರಿನಲ್ಲಿ ಪತ್ತೆ!!
ಮಡಿಕೇರಿ: ಮಡಿಕೇರಿಯ ಅಬ್ಬೆ ಫಾಲ್ಸ್ನಲ್ಲಿ ಬಿದ್ದು ಸಾವಿಗೀಡಾಗಿದ್ದ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಪತ್ತೆಯಾಗಿರುವ ವಿಚಿತ್ರ ಘಟನೆ ವರದಿಯಾಗಿದೆ.
ಹೌದು.. ತನ್ನದೇ ನಕಲಿ ಸಾವನ್ನು ಸೃಷ್ಟಿಸಿ ಡೆತ್ ನೋಟು ಬರೆದಿಟ್ಟು ನಾಪತ್ತೆಯಾಗಿದ್ದ ಮಹಿಳೆ ದಿಢೀರ್ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ ಸುಮಾರು ನಾಲ್ಕು ದಿನಗಳ ಹಿಂದೆ ಪಿರಿಯಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ತನ್ನ ಪತ್ನಿ ಸರಸ್ವತಿ (33 ವರ್ಷ) ಮನೆಯಿಂದ ಕಾಣೆಯಾಗಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು. ಏತನ್ಮಧ್ಯೆ, ಶನಿವಾರದಂದು ಜನಪ್ರಿಯ ಪ್ರವಾಸಿ ತಾಣವಾದ ಅಬ್ಬೆ ಫಾಲ್ಸ್ನಲ್ಲಿ ಕಾಣೆಯಾದ ಮಹಿಳೆಯ ಹೆಸರಿನಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು.
ಡೆತ್ ನೋಟ್ನಲ್ಲಿ ಮಹಿಳೆ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ತಿಳಿಸಿದ್ದು, ತನ್ನನ್ನು ಹುಡುಕದಂತೆ ತನ್ನ ಕುಟುಂಬವನ್ನು ಕೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದಾರೆ. ಪಿರಿಯಾಪಟ್ಟಣ ಪೊಲೀಸರನ್ನು ಸಂಪರ್ಕಿಸಿದಾಗಲೂ ಮಹಿಳೆ ಪಿರಿಯಾಪಟ್ಟಣ ನಿವಾಸಿ ಎಂದು ಪತ್ತೆ ಹಚ್ಚಿದ್ದಾರೆ.
ಪಾರುಗಾಣಿಕಾ ತಂಡ (ರಕ್ಷಣಾ ತಂಡ)ಗಳನ್ನು ಮತ್ತು ಮುಳುಗು ತಜ್ಞರು ಅಬ್ಬೆ ಜಲಪಾತದಾದ್ಯಂತ ಕಾಣೆಯಾದ ಮಹಿಳೆಯ ದೇಹವನ್ನು ಹುಡುಕಲು ಕಾರ್ಯಾಚರಣೆಯನ್ನು ಕೈಗೊಂಡರು. ಜಲಪಾತ ಪ್ರದೇಶದಾದ್ಯಂತ ಎನ್ಡಿಆರ್ಎಫ್, ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸರು ಮೂರು ದಿನಗಳ ಕಾಲ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಆದರೆ ಅಲ್ಲಿ ಯಾವುದೇ ರೀತಿಯ ಮೃತದೇಹದ ಸುಳಿವು ದೊರೆಯಲಿಲ್ಲ. ಡೆತ್ ನೋಟ್ ಮತ್ತು ಮಹಿಳೆಯ ಕೆಲವು ಸಾಮಾನುಗಳನ್ನು ಅಬ್ಬೆ ಫಾಲ್ಸ್ನಲ್ಲಿ ಬಿಟ್ಟು ಹೋಗಲಾಗಿದೆ. ಆದರೆ, ಮಡಿಕೇರಿಯಲ್ಲಿ ಯಾವುದೇ ಸುಳಿವುಗಳನ್ನು ಪತ್ತೆಹಚ್ಚಲು ಪೊಲೀಸರು ವಿಫಲರಾಗಿದ್ದಾರೆ.
ಆದರೆ, ನಾಪತ್ತೆಯಾಗಿದ್ದ ಮಹಿಳೆ ಇದೀಗ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಮಹಿಳೆ ತನ್ನ ಸಹೋದರ ಅರುಣ್ಗೆ ಅಪರಿಚಿತ ನಂಬರ್ನಿಂದ ಕರೆ ಮಾಡಿ ಬೆಂಗಳೂರಿನಲ್ಲಿ ಇರುವುದಾಗಿ ತಿಳಿಸಿದ್ದಾಳೆ ಎಂದು ಮೂಲಗಳು ಖಚಿತಪಡಿಸಿವೆ. ಪಿರಿಯಾಪಟ್ಟಣ ವ್ಯಾಪ್ತಿಯ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದ್ದು, ಸಂಬಂಧಪಟ್ಟ ಪೊಲೀಸರು ಇದೀಗ ಮಹಿಳೆಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ, ಸಂಬಂಧಪಟ್ಟ ಪೊಲೀಸರು ಆಕೆಯನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಡಿಕೇರಿ ಡಿವೈಎಸ್ಪಿ ಜಗದೀಶ್ ಖಚಿತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ