ಬಿಬಿಎಂಪಿ ಅಗ್ನಿ ಅವಘಡ ಪ್ರಕರಣ: ತನಿಖೆಗೆ ಅಸಹಕಾರ, ಮುಖ್ಯ ಎಂಜಿನಿಯರ್ ವಿರುದ್ಧ ಆಯುಕ್ತರಿಗೆ ಪತ್ರ ಬರೆಯಲು ಪೊಲೀಸರು ಮುಂದು!

ಬಿಬಿಎಂಪಿ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಿಎಸ್ ಪ್ರಹ್ಲಾದ್ ಅವರು ತನಿಖೆಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಈ ಕುರಿತು ನಗರ ಪೊಲೀಸ್ ಆಯುಕ್ತ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗ ಪತ್ರ ಬರೆಯಲು ಹಲಸೂರು ಗೇಟ್ ಪೊಲೀಸರು ಚಿಂತನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಬಿಎಂಪಿ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಿಎಸ್ ಪ್ರಹ್ಲಾದ್ ಅವರು ತನಿಖೆಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಈ ಕುರಿತು ನಗರ ಪೊಲೀಸ್ ಆಯುಕ್ತ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗ ಪತ್ರ ಬರೆಯಲು ಹಲಸೂರು ಗೇಟ್ ಪೊಲೀಸರು ಚಿಂತನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಬಿಬಿಎಂಪಿ ಕೇಂದ್ರ ಕಚೇರಿಯ ಕ್ವಾಲಿಟಿ ಅಶ್ಯೂರೆನ್ಸ್ ಲ್ಯಾಬ್‌ನಲ್ಲಿ ಆಗಸ್ಟ್ 11 ರಂದು ಸಂಭವಿಸಿದ ಅಗ್ನಿ ದುರಂತದಲ್ಲಿ ಓರ್ವ ಸಾವನ್ನಪ್ಪಿ, ಎಂಟು ಮಂದಿ ಗಾಯಗೊಂಡಿದ್ದರು. ಘಟನೆ ಸಂಬಂಧ ಹಲಸೂರು ಗೇಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆ ಸಂಬಂಧ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಪ್ರಹ್ಲಾದ್‌ಗೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಎರಡೂ ಬಾರಿಯೂ ಅವರಿಂದ ಯಾವುದೇ ಉತ್ತರ ಬಂದಿಲ್ಲ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನೆಯ ಆಂತರಿಕ ತನಿಖೆಯ ನೇತೃತ್ವವನ್ನು ಪ್ರಹ್ಲಾದ್ ಅವರಿಗೆ ನೀಡಲಾಗಿತ್ತು. ತನಿಖೆಯ ಜವಾಬ್ದಾರಿ ಹೊತ್ತಿರುವುದರಿಂದ ಅವರ ಹೇಳಿಕೆಗಾಗಿ ಕಾಯಲಾಗುತ್ತಿತ್ತು. ತನಿಖೆ ಪೂರ್ಣಗೊಂಡಿದ್ದು, ಕಳೆದ ವಾರವಷ್ಟೇ ಮುಚ್ಚಿದ ಲಕೋಟೆಯಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ವರದಿಯನ್ನು ನೀಡಿದ್ದಾರೆ. 'ಘಟನೆ ನಡೆದು 42 ದಿನಗಳಾಗಿವೆ. ಅಪಘಾತ, ಸುರಕ್ಷತಾ ಕ್ರಮಗಳು ಮತ್ತು ಇತರ ವಿಷಯಗಳ ಬಗ್ಗೆ ವಿವರಣೆ ನೀಡಲು ನಮ್ಮ ಮುಂದೆ ಹಾಜರಾಗುವಂತೆ ನಾವು ಪ್ರಹ್ಲಾದ್ ಅವರಿಗೆ ಎರಡು ಬಾರಿ ನೋಟಿಸ್ ನೀಡಿದ್ದೇವೆ, ಆದರೆ ಅವರು ಹಾಜರಾಗಿಲ್ಲ. ಅವರು ಉನ್ನತ ಹುದ್ದೆಯಲ್ಲಿರುವ ಪಾಲಿಕೆಯ ಅಧಿಕಾರಿಯಾಗಿರುವುದರಿಂದ ಮುಂದಿನ ಕ್ರಮದ ಬಗ್ಗೆ ಮಧ್ಯಪ್ರವೇಶಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರಿಗೆ ಪತ್ರ ಬರೆಯಲಾಗುತ್ತದೆ ಎಂದು ಎಂದು ಹಲಸೂರು ಗೇಟ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಹ್ಲಾದ್ ಸರ್ಕಾರಿ ನೌಕರರಾಗಿದ್ದು, ಹೀಗಾಗಿ ನಾವು ನಿಯಗಳನ್ನು ಪಾಲನೆ ಮಾಡಬೇಕಿದೆ. ಯಾವುದೇ ಕ್ರಮಗಳನ್ನು ಕೈಗೊಳ್ಳುವ ಮೊದಲು ಪೊಲೀಸ್ ಆಯುಕ್ತರ ಪ್ರತಿಕ್ರಿಯೆ ಪಡೆಯಬೇಕಿದೆ ಎಂದು ಕೇಂದ್ರ ಪೊಲೀಸ್ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೇರೆ ಯಾವುದೇ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಎರಡು ಬಾರಿ ಪೊಲೀಸ್ ನೋಟಿಸ್‌ಗೆ ಪ್ರತಿಕ್ರಿಯಿಸಲು ವಿಫಲವಾದರೆ ಆ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಬಹುದು ಅಥವಾ ಕಠಿಣ ಕ್ರಮ ಕೈಗೊಳ್ಳುವುದಾಗಿ ಮತ್ತೊಂದು ನೋಟಿಸ್ ಜಾರಿ ಮಾಡುವ ಅಧಿಕಾರವಿರುತ್ತದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ತನಿಖೆ ವೇಳೆ ಪೊಲೀಸರು ನೋಟಿಸ್ ನಲ್ಲಿ ಉಲ್ಲೇಖಿಸಿರುವಂತೆ ವ್ಯಕ್ತಿ ವಿಚಾರಣೆ ವೇಳೆ ದಾಖಲೆಗಳನ್ನು ತರಬೇಕು. ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ, ಕ್ರಮ ಕೈಕೊಳ್ಳಲಾಗುತ್ತದೆ ಎಂದು ಪೊಲೀಸ್ ಉಪ ಆಯುಕ್ತ (ಕೇಂದ್ರ ವಿಭಾಗ) ಶೇಖರ್ ಎಚ್ ತೆಕ್ಕಣ್ಣವರ್ ಹೇಳಿದ್ದಾರೆ.

ಆಗಸ್ಟ್ 11 ರಂದು ಸಂಜೆ 5 ಗಂಟೆ ಸುಮಾರಿಗೆ ಅಗ್ನಿ ದುರಂತ ಸಂಭವಿಸಿ ಒಂಬತ್ತು ಬಿಬಿಎಂಪಿ ಸಿಬ್ಬಂದಿ ಗಾಯಗೊಂಡಿದ್ದರು. ಘಟನೆ ನಡೆದ ಒಂದು ದಿನದ ನಂತರ ಹಲಸೂರು ಗೇಟ್ ಪೊಲೀಸರು ಮೂವರು ಬಿಬಿಎಂಪಿ ಸಿಬ್ಬಂದಿಯನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

ನಂತರ, ಸಿಬ್ಬಂದಿ ವಿವರಗಳು, ಸಿಸಿಟಿವಿ ದೃಶ್ಯಗಳು ಮತ್ತು ಲ್ಯಾಬ್‌ನಲ್ಲಿ ತೆಗೆದುಕೊಂಡ ಕ್ರಮಗಳು ಮತ್ತು ಇತರ ಸಮಸ್ಯೆಗಳ ಕುರಿತು ವಿವರಣೆಯನ್ನು ಕೋರಿ ಪ್ರಹ್ಲಾದ್ ಅವರ ಕಚೇರಿಗೆ ನೋಟಿಸ್ ಜಾರಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com