ಬೆಂಗಳೂರು: ತಮಿಳುನಾಡಿನ ರೌಡಿ ಶೀಟರ್ ಕೂಡ ಆಗಿರುವ ಡಿಎಂಕೆ ನಾಯಕನ ಮೇಲೆ ಬೆಂಗಳೂರಿನ ಹೋಟೆಲ್ನಲ್ಲಿ ಪ್ರತಿಸ್ಪರ್ಧಿ ಗ್ಯಾಂಗ್ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರಾಜ್ಯ ರಾಜಧಾನಿಯಲ್ಲಿ ಆತಂಕ ಉಂಟುಮಾಡಿದೆ.
ಸೆಪ್ಟೆಂಬರ್ 4ರಂದು ಈ ಘಟನೆ ನಡೆದಿದ್ದು, ಡಿಎಂಕೆ ಮುಖಂಡ ವಿಕೆ ಗುರುಸ್ವಾಮಿ ಬೆಂಗಳೂರಿನ ಕಮ್ಮನಹಳ್ಳಿಯ ಹೋಟೆಲ್ನಲ್ಲಿ ಬ್ರೋಕರ್ ಜೊತೆ ಕುಳಿತು ಮಾತನಾಡುತ್ತಿದ್ದ ವೇಳೆ ಐವರ ತಂಡವೊಂದು ಹೊಟೇಲ್ನೊಳಗೆ ನುಗ್ಗಿ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದೆ. ಈ ದೃಶ್ಯ ಸದ್ಯ ಸೆರೆಯಾಗಿದೆ.
ಗುರುಸ್ವಾಮಿ ಗ್ಯಾಂಗ್ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಹೋಟೆಲ್ನಾದ್ಯಂತ ಅಟ್ಟಿಸಿಕೊಂಡು ಅವರ ಮೇಲೆ ಹಲ್ಲೆ ನಡೆಸಲಾಗಿದೆ.
64 ವರ್ಷದ ಗುರುಸ್ವಾಮಿ ಅವರಿಗೆ 70ಕ್ಕೂ ಹೆಚ್ಚು ಬಾರಿ ಕತ್ತಿಯಿಂದ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಶ್ಚರ್ಯಕರ ರೀತಿಯಲ್ಲಿ ಗುರುಸ್ವಾಮಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬಾಣಸವಾಡಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ರಾಜ್ಯದ ರೌಡಿ ಪಾಂಡ್ಯನ ಗ್ಯಾಂಗ್ ಗುರುಸ್ವಾಮಿ ಅವರ ಮೇಲೆ ದಾಳಿ ನಡೆಸಿರುವುದು ಪತ್ತೆಯಾಗಿದೆ. ಪೊಲೀಸರು ದಾಳಿಕೋರರಾದ ಕಾರ್ತಿಕ್, ವಿನೋದ್ ಕುಮಾರ್ ಮತ್ತು ಪ್ರಸನ್ನರನ್ನು ಬಂಧಿಸಿದ್ದಾರೆ.
ಗುರುಸ್ವಾಮಿ ಮಧುರೈನ ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಇವರ ವಿರುದ್ಧ ತಮಿಳುನಾಡಿನ ಪೊಲೀಸರು ರೌಡಿ ಶೀಟರ್ ತೆರೆದಿದ್ದಾರೆ. ಎಂಟು ಕೊಲೆಗಳಲ್ಲಿ ಭಾಗಿಯಾಗಿರುವ ಆರೋಪ ಗುರುಸ್ವಾಮಿ ಅವರ ಮೇಲಿದೆ.
ಗುರುಸ್ವಾಮಿ ಕೊಲೆ, ಕೊಲೆ ಯತ್ನ ಆರೋಪ ಎದುರಿಸುತ್ತಿದ್ದು, ಕಿರುತಾಯಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾರೆ. ಈತ 30 ವರ್ಷಗಳಿಂದ ಮತ್ತೊಂದು ಗ್ಯಾಂಗ್ ಜೊತೆ ಪೈಪೋಟಿ ಹೊಂದಿದ್ದರು ಎಂದು ಪೂರ್ವ ಡಿಸಿಪಿ ಭೀಮಾ ಶಂಕರ್ ಗುಳೇದ್ ತಿಳಿಸಿದ್ದಾರೆ.
ಗುರುಸ್ವಾಮಿ ಜತೆಗಿದ್ದ ರಿಯಲ್ ಎಸ್ಟೇಟ್ ಏಜೆಂಟರಿಗೂ ಘಟನೆಯಲ್ಲಿ ಗಂಭೀರ ಗಾಯಗಳಾಗಿವೆ. ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ.
Advertisement