ಸುಧಾರಿತ ಮೂಲಸೌಕರ್ಯ ವ್ಯವಸ್ಥೆಗೆ ಆದ್ಯತೆ; ಶಿವರಾಮ ಕಾರಂತ ಬಡಾವಣೆಯಲ್ಲಿ 200 ಮೀ. ಅಗಲದ ಮಾದರಿ ರಸ್ತೆ ನಿರ್ಮಾಣ

ಬಡಾವಣೆಯಲ್ಲಿ ಮೂಲಸೌಕರ್ಯ ವ್ಯವಸ್ಥೆಯನ್ನು ಕಲ್ಪಿಸಲು ಹೆಚ್ಚು ಸುಧಾರಿತ ವಿಧಾನವನ್ನು ಅನುಷ್ಠಾನಗೊಳಿಸಲು ಮುಂದಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಡಾ. ಶಿವರಾಮ ಕಾರಂತ ಬಡಾವಣೆಯ ರಾಮಗೊಂಡನಹಳ್ಳಿ ಗ್ರಾಮದಲ್ಲಿ 200 ಮೀ. ಅಗಲದ ರಸ್ತೆ ನಿರ್ಮಾಣ ಮಾಡಲಿದೆ.
ಶಿವರಾಮ ಕಾರಂತ ಬಡಾವಣೆಯ ರಾಮಗೊಂಡನಹಳ್ಳಿ ಗ್ರಾಮದಲ್ಲಿ 200 ಮೀಟರ್ ಮಾದರಿ ರಸ್ತೆ ನಿರ್ಮಾಣ
ಶಿವರಾಮ ಕಾರಂತ ಬಡಾವಣೆಯ ರಾಮಗೊಂಡನಹಳ್ಳಿ ಗ್ರಾಮದಲ್ಲಿ 200 ಮೀಟರ್ ಮಾದರಿ ರಸ್ತೆ ನಿರ್ಮಾಣ
Updated on

ಬೆಂಗಳೂರು: ಬಡಾವಣೆಯಲ್ಲಿ ಮೂಲಸೌಕರ್ಯ ವ್ಯವಸ್ಥೆಯನ್ನು ಕಲ್ಪಿಸಲು ಹೆಚ್ಚು ಸುಧಾರಿತ ವಿಧಾನವನ್ನು ಅನುಷ್ಠಾನಗೊಳಿಸಲು ಮುಂದಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಡಾ. ಶಿವರಾಮ ಕಾರಂತ ಬಡಾವಣೆಯ ರಾಮಗೊಂಡನಹಳ್ಳಿ ಗ್ರಾಮದಲ್ಲಿ 200 ಮೀ. ಅಗಲದ ರಸ್ತೆ ನಿರ್ಮಾಣ ಮಾಡಲಿದೆ. 3,546 ಎಕರೆ ಪ್ರದೇಶದಲ್ಲಿ 34,000 ನಿವೇಶನಗಳಿರುವ ಈ ಬಡಾವಣೆಯ ಮೂಲಕ ಹಾದುಹೋಗುವ ಎಲ್ಲಾ ರಸ್ತೆಗಳನ್ನು ಮಾದರಿಯಾಗಿ ರೂಪಿಸಲಾಗುವುದು ಎಂದು ಬಿಡಿಎ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಟಿಎನ್ಐಇ ಜೊತೆ ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು, 'ಬೀದಿದೀಪಗಳನ್ನು ಅಳವಡಿಸುವುದು, ರಸ್ತೆಗಳನ್ನು ನಿರ್ಮಿಸುವುದು, ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗಳನ್ನು ಸ್ಥಾಪಿಸುವುದು ಮತ್ತು ಆಪ್ಟಿಕ್ ಫೈಬರ್ ಕೇಬಲ್‌ಗಳನ್ನು ಹಾಕುವುದು ಸೇರಿದಂತೆ ಹಲವಾರು ಮೂಲಸೌಕರ್ಯ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿವೆ. ಹಂತ-I ರಲ್ಲಿ ಈಗ ನಿಜವಾದ ಸಂಪರ್ಕವನ್ನು ನೀಡಲಾಗುವುದಿಲ್ಲ. ಆದರೆ, ಭವಿಷ್ಯದಲ್ಲಿ ಇಲ್ಲಿ ನಿರ್ಮಿಸಲಾಗುವ ಎಲ್ಲಾ ರಸ್ತೆಗಳಿಗೆ ಇದು ನೀಲನಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ.

'ಉನ್ನತ ಅಧಿಕಾರಿಗಳು ದಿನದ ಹಿಂದೆ ಇಲ್ಲಿಗೆ ಭೇಟಿ ನೀಡಿ ರಸ್ತೆ ನಿರ್ಮಿಸಬೇಕಾದ ಸ್ಥಳವನ್ನು ನಿಖರವಾಗಿ ಗುರುತಿಸಿದ್ದಾರೆ. ಒಂದು ಏಜೆನ್ಸಿಯವರು ರಸ್ತೆ ನಿರ್ಮಿಸಿ, ನಂತರ ಯಾವುದೋ ಕಾರಣಕ್ಕೆ ಇನ್ನೊಂದು ಏಜೆನ್ಸಿಯವರು ಅದನ್ನು ಅಗೆಯಬೇಕಾದ ಪರಿಸ್ಥಿತಿಯನ್ನು ತಪ್ಪಿಸಲಾಗುವುದು. ಹೀಗಾಗಿ, ಅವರು ಈಗ ರಸ್ತೆ ನಿರ್ಮಾಣಕ್ಕೆ ನಿರ್ದಿಷ್ಟ ಸ್ಥಳವನ್ನು ಗುರುತಿಸಿದ್ದಾರೆ ಮತ್ತು ಮುಂದಿನ ಹತ್ತು ದಿನಗಳಲ್ಲಿ ಆ ಸ್ಥಳದಲ್ಲಿ ಮಾದರಿ ರಸ್ತೆ ನಿರ್ಮಾಣವಾಗಲಿದೆ' ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದರು. 

ಇದು ಶಾಶ್ವತ ರಸ್ತೆಯಾಗಿಸಲು ಉದ್ದೇಶಿಸಲಾಗಿದ್ದು, ಅದರ ಸ್ಥಳವನ್ನು ಅಂತಿಮಗೊಳಿಸಲಾಗಿದೆ. ಆದ್ದರಿಂದ ಈ ಪ್ರದೇಶದಲ್ಲಿ ಉಳಿದ ರಸ್ತೆ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸಿದರೂ ಸಹ ಭವಿಷ್ಯದಲ್ಲಿ ಈ ರಸ್ತೆಯು ಹಾಗೆಯೇ ಉಳಿಯುತ್ತದೆ.

ಡಾ. ಕೆ ಶಿವರಾಮ ಕಾರಂತ ಬಡಾವಣೆಯ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿಯು ಡಿಸೆಂಬರ್ ಮೊದಲ ವಾರದಲ್ಲಿ ನಿವೇಶನವನ್ನು ಹಂಚಿಕೆ ಮಾಡಲಾಗುವುದು ಎಂದು ಕಳೆದ ವಾರ ಪ್ರಕಟಿಸಿತ್ತು. ಬಡಾವಣೆಯ ಹಂತ-1 2024ರ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳುವ ಗಡುವನ್ನು ಹೊಂದಿದ್ದು, ಹಂತ-2 2026ರ ಸೆಪ್ಟೆಂಬರ್‌ನೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. 

'ಅಂತರ್ಜಲ ಮಟ್ಟದ ಜಲಾಶಯಗಳು, ಒಳಚರಂಡಿ ಸಂಸ್ಕರಣಾ ಘಟಕಗಳು ಮತ್ತು ಸಬ್‌ಸ್ಟೇಷನ್‌ಗಳ ನಿರ್ಮಾಣವನ್ನು ಯೋಜನೆಯ 2 ನೇ ಹಂತದಲ್ಲಿ ಮಾತ್ರ ಕೈಗೊಳ್ಳಲಾಗುವುದು' ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಬಡಾವಣೆಯಲ್ಲಿ ಒಟ್ಟು 12,000 ನಿವೇಶನಗಳು ಸಾರ್ವಜನಿಕರಿಗೆ ಹಂಚಿಕೆಯಾಗುವ ಸಾಧ್ಯತೆ ಇದ್ದು, ಹೆಚ್ಚಿನ ನಿವೇಶನಗಳನ್ನು (15,000ಕ್ಕೂ ಹೆಚ್ಚು) ಭೂಮಾಲೀಕರಿಗೆ ಹಂಚಿಕೆ ಮಾಡಲಾಗುವುದು. ಸದ್ಯ ಇಲ್ಲಿ 29,000 ನಿವೇಶನಗಳನ್ನು ಗುರುತಿಸಲಾಗಿದೆ. ಈ ಮಧ್ಯೆ, 150 ಎಕರೆ ಭೂಮಿಯನ್ನು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಿಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com