
ಬೆಂಗಳೂರು: ಯಲಹಂಕ ಬಳಿಯ ಚೊಕ್ಕನಹಳ್ಳಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಭಾರತೀಯ ನೌಕಾಪಡೆಯ 74 ವರ್ಷದ ನಿವೃತ್ತ ಎಂಜಿನಿಯರ್ ಮೇಲೆ ಹಲ್ಲೆ ನಡೆದಿದೆ. ಸ್ಥಳೀಯ ನಿವಾಸಿಯೊಬ್ಬರು ಮರದ ಹಲಗೆಯಿಂದ ಹೊಡೆದಿದ್ದು, ಗಾಯಗೊಂಡಿರುವ ವೃದ್ಧನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೊಕ್ಕನಹಳ್ಳಿಯ ಎನ್ಆರ್ ಲೇಔಟ್ ನಿವಾಸಿ ಕೆ. ಅಮರನಾಥ ಚವ್ಹಾಣ್ ಹಲ್ಲೆಗೊಳಗಾದ ವ್ಯಕ್ತಿ. ಚೊಕ್ಕನಹಳ್ಳಿಯ ಎಸ್ ಮತ್ತು ಎನ್ ಲೇಔಟ್ ನಲ್ಲಿ ಭಾನುವಾರ ಬೆಳಗ್ಗೆ 7:15 ರಿಂದ 7:30 ರ ನಡುವೆ ಅವರ ಮೇಲೆ ಹಲ್ಲೆ ನಡೆದಿದೆ. ಕಳೆದ ಮೂರು ವರ್ಷಗಳಿಂದ ಈ ಪ್ರದೇಶದ ನಿವಾಸಿಯಾಗಿರುವ ಅವರು ಪ್ರತಿದಿನ ಬೆಳಗ್ಗೆ 7 ರಿಂದ 7:45 ರವರೆಗೆ ವಾಕ್ ಹೋಗುತ್ತಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ವಾಕ್ ಹೋಗುವಾಗ ಅವರು ಬೀದಿನಾಯಿಗಳಿಗೆ ಬಿಸ್ಕೆಟ್ ಹಾಕುತ್ತಿದ್ದರು. ಭಾನುವಾರ ಅದೇ ರೀತಿಯಲ್ಲಿ ನಾಯಿಗಳಿಗೆ ಬಿಸ್ಕೆಟ್ ಹಾಕುತ್ತಿದ್ದಾಗ ಮನೆಯ ಹೊರಗಡೆ ನಿಂತಿದ್ದ ಚಂದ್ರಪ್ಪ ಎಂಬುವರು ಅಮರನಾಥ್ ಅವರನ್ನು ಕರೆದಿದ್ದು, ಮರದ ಹಲಗೆಯಿಂದ ಹಲ್ಲೆ ನಡೆಸಿದ್ದಾರೆ.ಬೀದಿನಾಯಿಗಳಿಗೆ ಮತ್ತೊಮ್ಮೆ ಆಹಾರ ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಗಾಯಾಳುವಿಗೆ ಬಾಗಲೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಆರೋಪಿಯನ್ನು ಬಂಧಿಸಲಾಗಿದೆಯೇ ಎಂಬುದರ ಬಗ್ಗೆ ಪೊಲೀಸರಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಅಮರನಾಥ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಆರೋಪಿಯನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್ಗಳ ಜೊತೆಗೆ ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸಿದ ಪ್ರಕರಣವನ್ನು ದಾಖಲಿಸಲಾಗಿದೆ.
Advertisement