ಬೆಂಗಳೂರು: ರಾಮನಗರ ಜಿಲ್ಲೆಯ ಕನಕಪುರ ಸಮೀಪದ ಸಾತನೂರಿನಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಗೋರಕ್ಷಕರ ತಂಡವೊಂದು ದನಗಳನ್ನು ಸಾಗಿಸುತ್ತಿದ್ದ ವಾಹನದ ಚಾಲಕನನ್ನು ಥಳಿಸಿ ಹತ್ಯೆಗೈದಿದೆ.
ಪರಾರಿಯಾಗಿರುವ ಬಲಪಂಥೀಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮತ್ತು ಇತರ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಂಡ್ಯ ನಿವಾಸಿ ಇದ್ರೀಸ್ ಪಾಷಾ (39) ಮೃತದೇಹ ಸಾತನೂರು ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲೇ ಪತ್ತೆಯಾಗಿತ್ತು.
ಇರ್ಫಾನ್ ಮತ್ತು ಸೈಯದ್ ಜಹೀರ್ ಅವರೊಂದಿಗೆ ಪಾಷಾ ಸುಮಾರು 15 ಜಾನುವಾರುಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದರು. ಶುಕ್ರವಾರ ರಾತ್ರಿ 11.45ರ ಸುಮಾರಿಗೆ ಸಂತೆಮಾಳ ವೃತ್ತದ ಬಳಿ ಕಾರಿನಲ್ಲಿ ಗ್ಯಾಂಗ್ ಸದಸ್ಯರು ಬಂದಾಗ, ಅಪಾಯದ ಮುನ್ಸೂಚನೆಯನ್ನು ಅರಿತ ಪಾಷಾ ಮತ್ತು ಇರ್ಫಾನ್ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಜಹೀರ್ ಸಿಕ್ಕಿಬಿದ್ದಿದ್ದು, ಆತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರು (ಮುಸ್ಲಿಮರು) ಇಲ್ಲಿ ವಾಸಿಸಬಾರದು ಮತ್ತು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಆರೋಪಿಗಳು ಹೇಳುತ್ತಿದ್ದರು ಎನ್ನಲಾಗಿದೆ. ಪುನೀತ್ ಕೆರೆಹಳ್ಳಿ ಅವರು 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಕೊಡದಿದ್ದರೆ ಮುಗಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಜಾನುವಾರುಗಳನ್ನು ಖರೀದಿಸಿ ತಮಿಳುನಾಡಿಗೆ ಕೊಂಡೊಯ್ಯಲಾಗುತ್ತಿದೆ ಎಂದು ಜಹೀರ್ ಗ್ಯಾಂಗ್ ಸದಸ್ಯರಿಗೆ ವಿವರಿಸಲು ಪ್ರಯತ್ನಿಸಿದರೂ, ಅವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದಡಿ ಕೆರೆಹಳ್ಳಿ ದೂರು ದಾಖಲಿಸಿದ್ದಾರೆ. ಕೆರೆಹಳ್ಳಿ ವಿರುದ್ಧವೂ ಪ್ರತಿ ದೂರು ದಾಖಲಾಗಿತ್ತು.
ಶನಿವಾರ ಬೆಳಗ್ಗೆ ಪಾಷಾ ಶವ ಪತ್ತೆಯಾದ ಬಳಿಕ ಆತನ ಕುಟುಂಬಸ್ಥರು ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ನಂತರ ಪೊಲೀಸರು ಕೆರೆಹಳ್ಳಿ ಸೇರಿ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು.
ಕೆರೆಹಳ್ಳಿ ಸೇರಿದಂತೆ ಆರೋಪಿಗಳನ್ನು ಬಂಧಿಸಬೇಕಿದೆ ಎಂದು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ. ಪಾಷಾ ಸಾವಿಗೆ ಕಾರಣ ತಿಳಿಯಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ ಎಂದು ಅವರು ಹೇಳಿದರು.
ದೇಹದ ಮೇಲೆ ಹಲ್ಲೆ ಮಾಡಿದ ಗುರುತುಗಳಿರುವುದರಿಂದ ಗೋರಕ್ಷಕರು ಚಿತ್ರಹಿಂಸೆ ನೀಡಿ ಸಾಯಿಸಿದ್ದಾರೆ ಎಂದು ಪಾಷಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಪುನಿತ್ ಕೆರೆಹಳ್ಳಿ ಯಾರು?
ಪುನೀತ್ ಕೆರೆಹಳ್ಳಿ ಬಲಪಂಥೀಯ ಕಾರ್ಯಕರ್ತನಾಗಿದ್ದು, ರಾಷ್ಟ್ರ ರಕ್ಷಣಾ ಪಡೆ ಎಂಬ ಸಂಘಟನೆಯನ್ನು ಆರಂಭಿಸಿದ್ದಾರೆ. ಅವರು ಈ ಹಿಂದೆ ಹಲಾಲ್ ಮಾಂಸದ ಬಹಿಷ್ಕಾರ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಹಿಂದೂಗಳು ಮುಸ್ಲಿಮರೊಂದಿಗೆ ವ್ಯಾಪಾರ ಮಾಡಬೇಡಿ ಎಂದು ಪ್ರಚಾರವನ್ನೂ ಮಾಡಿದ್ದರು.
Advertisement