ದಾವಣಗೆರೆ: 9 ವರ್ಷದ ಹಿಂದೆ ದೇಶದಲ್ಲಿ ಬಳೆಕೆಯಾಗುತ್ತಿದ್ದ ಒಟ್ಟಾರೆ ಮೊಬೈಲ್ ಗಳ ಪೈಕಿ ಶೇ.92ರಷ್ಟು ಮೊಬೈಲ್ ಗಳು ವಿದೇಶದಲ್ಲಿ ತಯಾರಾಗಿ ಇಲ್ಲಿಗೆ ಬರುತ್ತಿದ್ದವು.. ಆದರೆ ಈಗ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ದೇಶದಲ್ಲಿ ಶೇ.97ರಷ್ಟು ಮೊಬೈಲ್ ಗಳು ಭಾರತದಲ್ಲೇ ತಯಾರಾಗುತ್ತಿವೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭಾನುವಾರ ಹೇಳಿದ್ದಾರೆ.
ಕರ್ನಾಟಕದ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಬಿಜೆಪಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನು ಉದ್ದೇಶಿಸಿದ ಮಾತನಾಡಿದ ಜೆಪಿ ನಡ್ಡಾ, '9 ವರ್ಷಗಳ ಹಿಂದೆ, ದೇಶದಲ್ಲಿ ಬಳೆಕೆಯಾಗುತ್ತಿದ್ದ ಒಟ್ಟಾರೆ ಮೊಬೈಲ್ ಗಳ ಪೈಕಿ ಶೇ.92ರಷ್ಟು ಮೊಬೈಲ್ ಗಳು ವಿದೇಶದಲ್ಲಿ ತಯಾರಾಗಿ ಇಲ್ಲಿಗೆ ಬರುತ್ತಿದ್ದವು..
ಪ್ರಮುಖವಾಗಿ ಚೀನಾ ಮತ್ತು ಇತರೆ ದೇಶಗಳಲ್ಲಿ ತಯಾರಾದ ಮೊಬೈಲ್ ಗಳು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದವು. ಆದರೆ ಈಗ ಪರಿಸ್ಛಿತಿ ಬದಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಪರಿಣಾಮ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಇದು ದೇಶದಲ್ಲಿ ಬಳಕೆಯಾಗುತ್ತಿರುವ ಮೊಬೈಲ್ ಗಳ ಪೈಕಿ ಶೇ.97ರಷ್ಟು ಮೊಬೈಲ್ ಗಳು ಭಾರತದಲ್ಲೇ ತಯಾರಾಗುತ್ತಿವೆ. ಇದರಿಂದ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗದಿದೆ ಎಂದು ಹೇಳಿದರು.
ಅಂತೆಯೇ , ಈ ಹಿಂದೆ ಆಟೋಮೊಬೈಲ್ಗಳಿಗಾಗಿ ಜಪಾನ್ ಮೇಲೆ ಅವಲಂಬಿತವಾಗಿದ್ದೆವು. ಆದರೆ ಇಂದು ಭಾರತವು ಜಪಾನ್ ಅನ್ನು ಹಿಂದಿಕ್ಕಿ ಮೂರನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿದೆ. ನಮ್ಮ ಸರ್ಕಾರವು ಹಳ್ಳಿಗಳು, ಬಡವರು, ವಂಚಿತರು, ನೊಂದವರು, ಶೋಷಿತರು, ದಲಿತರು, ಮಹಿಳೆಯರು ಮತ್ತು ರೈತರನ್ನು ಮುನ್ನಡೆಸಲು ಕೆಲಸ ಮಾಡುತ್ತಿದೆ... ನಾವು ಆರ್ಥಿಕ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದರೆ, ನಾವು ಸಾಮಾಜಿಕ ದೃಷ್ಟಿಕೋನದಿಂದ ಸಾಮಾಜಿಕ ನ್ಯಾಯಕ್ಕೂ ಪ್ರಾಮುಖ್ಯತೆ ನೀಡಿದ್ದೇವೆ. ಎಸ್ಸಿ ಬಂಧುಗಳ ಮೀಸಲಾತಿಯನ್ನು ಶೇ.2ರಷ್ಟು ಹೆಚ್ಚಿಸಿದರೆ ಬುಡಕಟ್ಟು ಬಂಧುಗಳ ಮೀಸಲಾತಿಯನ್ನು ಶೇ.4ರಷ್ಟು ಹೆಚ್ಚಿಸುತ್ತೇವೆ ಎಂದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ನಡ್ಡಾ, 'ರಾಜ್ಯದ ಬಡವರು, ರೈತರು, ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ರಾಜ್ಯದ ಮಹಿಳೆಗೆ ಶಕ್ತಿ ತುಂಬಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಸಮಾಜದಲ್ಲಿ ಗಲಭೆಗಳಿಗೆ ಉತ್ತೇಜನ ನೀಡುತ್ತವೆ. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಡೆದಿರುವ ದೊಡ್ಡ ಹಗರಣಗಳ ಬಗ್ಗೆ ಉತ್ತರ ನೀಡುತ್ತಿಲ್ಲ ಏಕೆ? ಡಿ.ಕೆ.ಶಿವಕುಮಾರ್ ಜಾಮೀನಿನ ಮೇಲೆ ಹೊರಗಿದ್ದಾರೆ, ಅದಕ್ಕೆ ಉತ್ತರ ಕೊಡುವುದಿಲ್ಲ ಏಕೆ? ಧೈರ್ಯ ಹೇಗೆ ಬರುತ್ತದೆ ಎಂದು ಕಳೆದ 5 ದಿನಗಳಿಂದ ಕೇಳುತ್ತಿದ್ದೇನೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೀರಾ? ಕರ್ನಾಟಕದ ಜನರಿಗೆ ಎಲ್ಲವೂ ಚೆನ್ನಾಗಿ ಗೊತ್ತಿದೆ ಎಂದು ಜೆಪಿ ನಡ್ಡಾ ಹೇಳಿದ್ದಾರೆ.
'ಕರ್ನಾಟಕದ ಜನರಲ್ಲಿ ಅಪಾರ ಉತ್ಸಾಹ ಕಾಣುತ್ತಿದೆ. ಡಬಲ್ ಇಂಜಿನ್ ಸರ್ಕಾರ ತರಲು ಮನಸ್ಸು ಮಾಡಿದ್ದಾರೆ ಎಂದು ಜೆ.ಪಿ.ನಡ್ಡಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
Advertisement