ಕಲಬುರಗಿ: ಕಲಬುರಗಿ ನಗರದಲ್ಲಿ ಗುರುವಾರ ನ್ಯಾಯಾಲಯಕ್ಕೆ ತೆರಳುತ್ತಿದ್ದ ವಕೀಲರೊಬ್ಬರನ್ನು ಹಾಡಹಗಲೇ ದುಷ್ಕರ್ಮಿಗಳಿಬ್ಬರು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಬುರಗಿ ನಗರದ ಸಾಯಿ ಮಂದಿರ್ ಬಳಿ ಈ ಭೀಕರ ಕೊಲೆ ನಡೆದಿದೆ. ಕೊಲೆಯಾದ ವಕೀಲರನ್ನು ಉದನೂರ ಗ್ರಾಮದ ನಿವಾಸಿ ಜಿಲ್ಲಾ ನ್ಯಾಯಾಲಯದ ವಕೀಲ ಈರಣ್ಣ ಗೌಡ ಪೊಲೀಸ್ ಪಾಟೀಲ್(40) ಎಂದು ಗುರುತಿಸಲಾಗಿದೆ.
ಹಂತಕರು ಮಚ್ಚಿನೊಂದಿಗೆ ವಕೀಲನನ್ನು ಬೆನ್ನಟ್ಟಿ ಬರುತ್ತಿದಾಗ ಅವರಿಂದ ತಪ್ಪಿಸಿಕೊಳ್ಳಲು ವಕೀಲ ಈರಣ್ಣ ಗೌಡ ಪೊಲೀಸ್ ಪಾಟೀಲ್ ಅವರು ಶ್ರೀ ಗಂಗಾ ವಿಹಾರ್ ಅಪಾರ್ಟ್ಮೆಂಟ್ ಒಳಗೆ ಓಡಿದ್ದಾರೆ. ಅಲ್ಲಿ ತನ್ನ ರಕ್ಷಣೆಗಾಗಿ ರಿವಾಲ್ವರ್ ತೆಗೆಯುತ್ತಿದ್ದ ವಕೀಲನ ಮೇಲೆ ಹಂತಕರು ಮಚ್ಚು ಬೀಸಿ ಹಲ್ಲೆ ಮಾಡಿದ್ದಾರೆ. ಆ ಬಳಿಕ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ.
ಮಚ್ ಹಿಡಿದು ಅಟ್ಟಾಡಿಸಿಕೊಂಡು ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪೋಲೀಸರ ಪ್ರಕಾರ, ಹಂತಕರು, ವಕೀಲರನ್ನು ಸುಮಾರು ಅರ್ಧ ಕಿಲೋಮೀಟರ್ ವರೆಗೆ ಬೆನ್ನಟ್ಟಿದ ನಂತರ ಅವನರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾರೆ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹಳೆ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸಂಬಂಧ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Advertisement