ಕೇಂದ್ರ ಬಜೆಟ್ 2023: ಅತ್ಯಂತ ನಿರಾಶದಾಯಕ ಎಂದ ಸಿದ್ದರಾಮಯ್ಯ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2023-24ನೇ ಸಾಲಿನ ಕೇಂದ್ರ ಬಜೆಟ್ ಅತ್ಯಂತ ನಿರಾಶದಾಯಕವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2023-24ನೇ ಸಾಲಿನ ಕೇಂದ್ರ ಬಜೆಟ್ ಅತ್ಯಂತ ನಿರಾಶದಾಯಕವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಬಜೆಟ್ ನಲ್ಲಿ ಕೃಷಿ, ಗ್ರಾಮೀಣಾಭಿವೃದ್ಧಿ, ನೀರಾವರಿ, ಕೈಗಾರಿಕೆ, ಸಮಾಜ ಕಲ್ಯಾಣ ಇಲಾಖೆ ಯಾವುದೇ ಒತ್ತು ನೀಡಿಲ್ಲ ಎಂದರು.

 ಗ್ರಾಮೀಣಾಬಿವೃದ್ಧಿಗೆ ಕಳೆದ ಬಾರಿ  2 ಲಕ್ಷದ 43 ಸಾವಿರ ಕೋಟಿ ರೂ. ನೀಡಲಾಗಿತ್ತು. ಈ ವರ್ಷ  2 ಲಕ್ಷದ 38 ಸಾವಿರ ಕೋಟಿ ನೀಡುವ ಮೂಲಕ  5 ಸಾವಿರ ಕೋಟಿ ಕಡಿಮೆ ಮಾಡಲಾಗಿದೆ.  ಆಹಾರ ಸಬ್ಸಿಡಿಯಲ್ಲಿ  90 ಸಾವಿರ ಕೋಟಿ ಕಡಿಮೆಯಾಗಿದೆ. ಮನ್ರೇಗಾದಲ್ಲಿ 29 ಸಾವಿರ ಕೋಟಿ ರೂ. ಇಳಿಕೆ ಮಾಡುವ ಮೂಲಕ ರೈತರಿಗೆ ದ್ರೋಹ ಮಾಡಲಾಗಿದೆ ಎಂದು ಆರೋಪಿಸಿದರು.

ಕಳೆದ ಬಾರಿಯ ಬಜೆಟ್ ನಲ್ಲಿ ರಸಗೊಬ್ಬರಕ್ಕೆ 2 ಲಕ್ಷ 25 ಸಾವಿರ ಕೋಟಿ ಸಬ್ಸಿಡಿ ನೀಡಲಾಗಿತ್ತು. ಈ ಬಾರಿ 1 ಲಕ್ಷದ 75 ಸಾವಿರ ಕೋಟಿ ರೂ. ಸಬ್ಸಿಡಿ ನೀಡುವ ಮೂಲಕ  50 ಸಾವಿರ ಕೋಟಿ ಕಡಿಮೆ ಮಾಡಲಾಗಿದೆ. ಸಬ್ಸಿಡಿ ಕಡಿಮೆ ಮಾಡಿದ್ರೆ ಗೊಬ್ಬರ ಬೆಲೆ ಹೆಚ್ಚಳವಾಗುತ್ತದೆ. ಇದರಿಂದ ರೈತರಿಗೆ ಸಂಕಷ್ಟವಾಗಲಿದೆ ಎಂದು ವಿಪಕ್ಷ ನಾಯಕ ತಿಳಿಸಿದರು.

ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನೂ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದಾರೆ. ಆದರೆ, ಯೋಜನೆಗೆ ಇನ್ನೂ ನೋಟಿಫಿಕೇಷನ್ ಆಗಿಲ್ಲ, ನೋಟಿಫಿಕೇಷನ್ ಆಗಿಲ್ಲ ಅಂದ್ರೆ 1 ರೂ. ವೆಚ್ಚ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com