ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ 2023ಕ್ಕೆ ಚಾಲನೆ ನೀಡಲು ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ಮೋದಿ ಭಾನುವಾರ ರಾತ್ರಿ ರಾಜಭವನದಲ್ಲಿ ವಿಶೇಷ ಔತಣಕೂಟದಲ್ಲಿ ಪಾಲ್ಗೊಂಡರು.
ಏರೋ ಇಂಡಿಯಾ (Aero India) ಏರ್ ಶೋ ಉದ್ಘಾಟನೆಗೆ ಪ್ರಧಾನಿ ಮೋದಿ (PM Modi) ಬೆಂಗಳೂರಿಗೆ ಆಗಮಿಸಿದ್ದು, ಹೆಚ್ಎಎಲ್ ವಿಮಾನ (HAL Airport) ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸ್ವಾಗತಿಸಿದರು. ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ನೇರ ರಾಜಭವನಕ್ಕೆ ತೆರಳಿದರು.
ರಾಜಭವನದಲ್ಲಿ (Rajbhavan) ನಾಡಿನ ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಮೋದಿ ಸಂವಾದ ನಡೆಸಿದ್ದು, ಇದಕ್ಕೂ ಮುನ್ನ ನಡೆದ ವಿಶೇಷ ಔತಣಕೂಟದಲ್ಲಿ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಪ್ರಧಾನಿಗಳ ಜೊತೆ ಭೋಜನ ಸವಿಯುತ್ತಾ ಗಣ್ಯರು ಸಂವಾದ ನಡೆಸಿದ್ದಾರೆ.
ಔತಣಕೂಟದಲ್ಲಿ ಕನ್ನಡ ಚಿತ್ರರಂಗದ ನಟ ಯಶ್, ನಟ-ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್ಕುಮಾರ್, ಶ್ರದ್ಧಾ ಜೈನ್, ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ಕ್ರಿಕೆಟ್ ರಂಗದಿಂದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ದಂಪತಿ, ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆಗೆ ಆಹ್ವಾನ ನೀಡಲಾಗಿದೆ. ಉದ್ಯಮ ವಲಯದಿಂದ ನಿತಿನ್ ಕಾಮತ್, ತರುಣ್ ಮೆಹ್ತಾ ಅವರು ಔತಣಕೂಟದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಔತಣಕೂಟದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಪ್ರಧಾನಮಂತ್ರಿ ಮೋದಿ ಜೊತೆ ಕೆಲ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.
ನಾಳೆ ಏರೋ ಇಂಡಿಯಾ ಶೋಗೆ ಚಾಲನೆ
ಇನ್ನು, ಪ್ರಧಾನಿ ಮೋದಿ 6 ದಿನಗಳ ಹಿಂದಷ್ಟೇ ಬೆಂಗಳೂರು, ತುಮಕೂರಿಗೆ ಆಗಮಿಸಿದ್ದರು. ಇವತ್ತು ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಯಲಹಂಕ ವಾಯುನೆಲೆಗೆ ಬಂದ ಪ್ರಧಾನಿ ಮೋದಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದಾರೆ. ನಾಳೆ ಬೆಳಗ್ಗೆ 9.30 ರಿಂದ 11.30ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಏರೋ ಇಂಡಿಯಾ ಶೋಗೆ ಚಾಲನೆ ನೀಡಲಿದ್ದಾರೆ.
Advertisement