ಬೆಂಗಳೂರಿಗಿಂದು ಪ್ರಧಾನಿ ಮೋದಿ ಆಗಮನ: ನಾಳೆ ಏರೋ ಇಂಡಿಯಾ ಉದ್ಘಾಟನೆ, ಬಿಎಂಟಿಸಿಯಿಂದ ಯಲಹಂಕಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಲವು ಬಾರಿ ಭೇಟಿ ನೀಡುತ್ತಿದ್ದು, ಭಾನುವಾರ ಪುನಃ ಬೆಂಗಳೂರಿಗೆ ಮೋದಿಯವರು ಆಗಮಿಸುತ್ತಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಲವು ಬಾರಿ ಭೇಟಿ ನೀಡುತ್ತಿದ್ದು, ಭಾನುವಾರ ಪುನಃ ಬೆಂಗಳೂರಿಗೆ ಮೋದಿಯವರು ಆಗಮಿಸುತ್ತಿದ್ದಾರೆ.

ರಾಜ್ಯ ರಾಜಧಾನಿಯ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ 5 ದಿನಗಳ ಕಾಲ ನಡೆಯುವ ಏರೋ ಇಂಡಿಯಾ -2023ರ 14ನೇ ಆವೃತ್ತಿಯನ್ನು ಮೋದಿಯವರು ಸೋಮವಾರ ಉದ್ಘಾಟಿಸಲಿದ್ದಾರೆ. ಇದಕ್ಕಾಗಿ ಭಾನುವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸುವ ಮೋದಿಯವರು ರಾತ್ರಿ ರಾಜಭವನದಲ್ಲಿ ತಂಗಲಿದ್ದಾರೆ. ಸೋಮವಾರ ಬೆಳಿಗ್ಗೆ 9.30ಕ್ಕೆ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆಂದು ತಿಳಿದುಬಂದಿದೆ.

ಭಾನುವಾರ ರಾಜಸ್ಥಾನ ಪ್ರವಾಸದಲ್ಲಿರುವ ಮೋದಿಯವರು, ಅಲ್ಲಿನ ಕಾರ್ಯಕ್ರಮಗಳನ್ನು ಮುಗಿಸಿ ಜೈಪುರ ವಿಮಾನ ನಿಲ್ದಾಣದಿಂದ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ರಾತ್ರಿ 7.40ಕ್ಕೆ ಆಗಮಿಸಲಿದ್ದಾರೆ. ನಂತರ ನೇರವಾಗಿ ರಾಜಭವನಕ್ಕೆ ತೆರಳಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಸೋಮವಾರ ಬೆಳಿಗ್ಗೆ 9 ಗಂಟೆಗೆ ರಾಜಭವನದಿಂದ ಹೊರಟು ಯಲಹಂಕದ ವಾಯುಪಡೆ ನಿಲ್ದಾಣಕ್ಕೆ ತೆರಳಲಿದ್ದಾರೆ. ಕಾರ್ಯಕ್ರಮ ಮುಗಿಸಿಕೊಂಡು ಯಲಹಂಕ ವಾಯುನೆಲೆಯಿಂದ ನೇರವಾಗಿ ವಿಧಾನಸಭೆ ಚುನಾವಣೆ ನಡೆಯಲಿರುವ ತ್ರಿಪುರಕ್ಕೆ ಪ್ರಚಾರಕ್ಕೆಂದು ತೆರಳಲಿದ್ದಾರೆ.

ಈ ನಡುವೆ ಏರೋ ಇಂಡಿಯಾ ಶೋ ನಡೆಯಲಿರುವ ಯಲಹಂಕ ವಾಯುನೆಲೆಗೆ ಬಿಎಂಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ.

ಫೆ 13 ರಿಂದ 17 ರವರೆಗೆ ಏರ್ ಶೋ ನಡೆಯಲಿದ್ದು, ಏರ್ ಶೋ ವೀಕ್ಷಿಸಲು ಹೆಚ್ಚಿನ ಜನದಟ್ಟಣೆ ಆಗಮಿಸುವುದರಿಂದ 10 ಹೆಚ್ಚುವರಿ ಬಸ್ ಬಿಡಲು ಬಿಎಂಟಿಸಿ ಮುಂದಾಗಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ದಿನಾಂಕ 16 ಹಾಗೂ 17ರಂದು ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com