ಏರೋ ಇಂಡಿಯಾ 2023: ಐತಿಹಾಸಿಕ ನೆಲದಲ್ಲಿ ಏರ್ ಶೋ ನಡೆಯುತ್ತಿರುವುದು ಸಂತಸ ತಂದಿದೆ- ರಾಜನಾಥ್ ಸಿಂಗ್

ಐತಿಹಾಸಿಕ ನೆಲದಲ್ಲಿ ಏರ್ ಶೋ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್

ಬೆಂಗಳೂರು: ಐತಿಹಾಸಿಕ ನೆಲದಲ್ಲಿ ಏರ್ ಶೋ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.

ಬೆಂಗಳೂರು ಹೊರವಲಯದಲ್ಲಿರುವ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 14ನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ಕೊಂಡಾಡಿದರು.

ಕರ್ನಾಟಕ ಆಧ್ಯಾತ್ಮಿಕತೆ, ಶೌರ್ಯ, ಪರಾಕ್ರಮವುಳ್ಳ ನಾಡು. ಈ ಐತಿಹಾಸಿಕ ನೆಲದಲ್ಲಿ ಏರ್ ಶೋ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ರಕ್ಷಣಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಎರಡು ಕಾರ್ಯಕ್ರಮ ಕರ್ನಾಟಕದಲ್ಲೇ ನಡೆದಿದೆ ಎನ್ನುವುದು ಈ ರಾಜ್ಯದ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಕರ್ನಾಟಕದ ಚಂದನ ಸುವಾಸನೆ ದೇಶದ ಗಡಿಗಳನ್ನು ದಾಟಿ ದೂರ ದಾಟುವಂತೆ ಏರೋ ಇಂಡಿಯಾದ ಪ್ರಭಾವವೂ ದೂರ ದೂರದವರೆಗೆ ಆಗಲಿದೆ ಎನ್ನುವುದು ನಮ್ಮ ಆಶಯ. ಈ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪಾತ್ರ ಮಹತ್ವವಾದ್ದಾಗಿದೆ.

ಪ್ರಧಾನಿ ಮೋದಿಯವರ ವ್ಯಾಪಕ ದೃಷ್ಟಿ ಹಾಗೂ ಸಂಕಲ್ಪದ ಕಾರಣಕ್ಕೆ ಆರ್ಥಿಕತೆಯಲ್ಲೂ ಮುನ್ನಡೆ ಸಾಧಿಸುತ್ತಿದ್ದು, ಶೀಘ್ರದಲ್ಲೇ ಮೂರನೇ ಅತಿ ದೊಡ್ಡ ಆರ್ಥಿಕತೆ ಆಗಲಿದೆ. ಈ ಕಾರ್ಯಕ್ರಮದಲ್ಲಿ ಅನೇಕ ದೇಶಗಳ ರಕ್ಷಣಾ ಸಚಿವರು, ಸಿಇಒಗಳು, ವಾಯುದಳ ಮುಖ್ಯಸ್ಥರು ಆಗಮಿಸಲಿದ್ದಾರೆ. ಇವರೆಲ್ಲರಿಗೂ ಸ್ವಾಗತ. ಈ ಕಾರ್ಯಕ್ರಮದಲ್ಲಿ 700 ಕ್ಕೂ ಹೆಚ್ಚು ಪ್ರದರ್ಶಕರು ತಮ್ಮ ಅತ್ಯುತ್ತಮ ಸಂಶೋಧನೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಇದು ವಿಶ್ವದಲ್ಲಿ ಹೆಚ್ಚಾಗುತ್ತಿರುವ ಆಸಕ್ತಿಯನ್ನೂ ತೋರಿಸುತ್ತದೆ ಎಂದರು.

ಏರೋ ಇಂಡಿಯಾವು ಏರೋಸ್ಪೇಸ್‌ನ ಪ್ರದರ್ಶನವಾಗಿದ್ದು ಅದು ಎತ್ತರ ಮತ್ತು ವೇಗ ಎಂಬ 2 ಪ್ರಮುಖ ಗುಣಲಕ್ಷಣಗಳನ್ನು ಹೊಂದಿದೆ. ಈ 2 ಗುಣಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೆಲಸ ಮತ್ತು ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತವೆ. ಭಾರತಕ್ಕಾಗಿ ಸಮಗ್ರತೆ ಮತ್ತು ಬದ್ಧತೆಯ ಎತ್ತರವಾಗಿದೆ. ನಿರ್ಧಾರ ತೆಗೆದುಕೊಳ್ಳುವ ಮತ್ತು ಫಲಿತಾಂಶಗಳನ್ನು ನೀಡುವುದು ವೇಗವಾಗಿದೆ ಎಂದು ತಿಳಿಸಿದರು.

ಜಾಗತಿಕ ಆಗಸದಲ್ಲಿ ಭಾರತವು ನಕ್ಷತ್ರವಾಗಿ ಹೊರಹೊಮ್ಮಿದೆ, ಈ ನಕ್ಷತ್ರ ಇದೀಗ ಪ್ರಕಾಶಮಾನವಾಗಿ ಹೊಳೆಯುತ್ತಿದ್ದು, ಅದಷ್ಟೇ ಅಲ್ಲದೆ, ತನ್ನ ಹೊಳಪಿನಿಂದ ಇತರರನ್ನು ಬೆಳಗಿಸುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com