ಮನ್ ಕಿ ಬಾತ್: ಚಾಮರಾಜನಗರ ವ್ಯಕ್ತಿಯ ಲಾಲಿ ಹಾಡಿಗೆ ಮನಸೋತ ಪ್ರಧಾನಿ ಮೋದಿ

ಚಾಮರಾಜನಗರ ಜಿಲ್ಲೆಯ ಬಿಎಂ ಮಂಜುನಾಥ್ ಅವರ ಲಾಲಿ ಹಾಡಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನಸೋತಿದ್ದು, 98ನೇ​ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಘೋಷಿಸಿದ್ದಾರೆ.
ಚಾಮರಾಜನಗರದ ವ್ಯಕ್ತಿಯ ಕೊಂಡಾಡಿದ ಪ್ರಧಾನಿ ಮೋದಿ.
ಚಾಮರಾಜನಗರದ ವ್ಯಕ್ತಿಯ ಕೊಂಡಾಡಿದ ಪ್ರಧಾನಿ ಮೋದಿ.

ಮೈಸೂರು: ಚಾಮರಾಜನಗರ ಜಿಲ್ಲೆಯ ಬಿಎಂ ಮಂಜುನಾಥ್ ಅವರ ಲಾಲಿ ಹಾಡಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನಸೋತಿದ್ದು, 98ನೇ​ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಘೋಷಿಸಿದ್ದಾರೆ.

ಏಕತಾ ದಿವಸದ ಅಂಗವಾಗಿ ಭಕ್ತಿಗೀತೆ, ಲಾಲಿಹಾಡು  ಮತ್ತು ರಂಗೋಲಿ ಸ್ಪರ್ಧೆಯನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಆಯೋಜನೆ ಮಾಡಿತ್ತು. ಲಾಲಿಹಾಡು ಸ್ಪರ್ಧೆಯಲ್ಲಿ ಕನ್ನಡಿಗ ಮಂಜುನಾಥ್ ಅವರು ಮೊದಲ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ರಾಷ್ಟ್ರಮಟ್ಟದಲ್ಲಿ ನಡೆಸಿದ ಪೆನ್ ಎ ಲೋರಿ ಸ್ಪರ್ಧೆ ಬಗ್ಗೆ ಪ್ರಧಾನಿ ಮೋದಿಯವರು ಮನ್ ಕಿ ಬಾತ್ ನಲ್ಲಿ ಪ್ರಸ್ತಾಪ ಮಾಡಿದ್ದು, “ಜೋಗುಳ ಗೀತೆ ಸ್ಪರ್ಧೆಯಲ್ಲಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಿ.ಎಂ. ಮಂಜುನಾಥ ಪ್ರಥಮ ಬಹುಮಾನ ಪಡೆದಿದ್ದಾರೆಂದು ಘೋಷಿಸಿದರು.

ಕನ್ನಡದಲ್ಲಿ ಅವರು ಬರೆದ ಮಲಗು ಕಂದ ಕವಿತೆಗೆ ಬಹುಮಾನ ದೊರಕಿದೆ. ಈ ಜೋಗುಳ ಗೀತೆಗೆ ಅವರ ತಾಯಿ, ಅಜ್ಜಿ ಹಾಡುತ್ತಿದ್ದ ಜೋಗುಳಗಳೇ ಸ್ಫೂರ್ತಿಯಾಗಿವೆ. ಇದನ್ನು ಕೇಳಿದರೆ ನಿಮಗೂ ಆನಂದವಾಗುತ್ತದೆ ಎಂದು ಹೇಳಿದರು.

2022ರ ಫೆಬ್ರವರಿಯಲ್ಲಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ರಾಷ್ಟ್ರಮಟ್ಟದ ರಂಗೋಲಿ ಸ್ಪರ್ಧೆ, ದೇಶಭಕ್ತಿ ಗೀತೆ ಹಾಗೂ ಜೋಗುಳ ಗೀತ ರಚನೆ ಸ್ಪರ್ಧೆಗಳನ್ನು ಆನ್ ಲೈನ್ ಮೂಲಕ ಆಹ್ವಾನ ನೀಡಲಾಗಿತ್ತು. ಈ ಸ್ಪರ್ಧೆಗೆ ಗೀತೆ ರಚನೆ ಮಾಡಿ ಬಿ.ಎಂ.ಮಂಜುನಾಥ್ ಕಳುಹಿಸಿಕೊಟ್ಟಿದ್ದರು. ಈ ಸ್ಪರ್ಧೆ ಮೂರು ಹಂತದಲ್ಲಿ ನಡೆದಿದ್ದು. ಮೊದಲಿಗೆ ಜಿಲ್ಲಾ ಮಟ್ಟದಲ್ಲಿ ನಡೆದಿತ್ತು. ಇದರಲ್ಲಿ ಮಂಜುನಾಥ್ ಎರಡನೇ ಸ್ಥಾನ ಪಡೆದಿದ್ದರು. ಬಳಿಕ ರಾಜ್ಯ ಮಟ್ಟದಲ್ಲಿ ಮೊದಲು ಹಾಗೂ ರಾಷ್ಟ್ರಮಟ್ಟದಲ್ಲಿ ಮೊದಲಿಗರಾಗಿ ಆಯ್ಕೆಯಾದರು. ಇದರಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರಿಗೆ 6 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ.

ಮಂಜುನಾಥ್ ಅವರು ವೃತ್ತಿಯಲ್ಲಿ ಎಲ್.ಐ.ಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಬಾಳಗುಣಸೆ ಗ್ರಾಮದವರು. ಸದ್ಯ ಕೊಳ್ಳೇಗಾಲದಲ್ಲಿ ವಾಸಮಾಡುತ್ತಿದ್ದಾರೆ.

ನನ್ನ ತಾಯಿ ಹಾಗೂ ಅಡ್ಡಿ ಲಾಲಿ ಹಾಡು ಹಾಡುತ್ತಿದ್ದರು. ಇದರಿಂದ ಸ್ಫೂರ್ತಿ ಪಡೆದುಕೊಂಡು ಬರೆಯಲು ಆರಂಭಿಸಿದ್ದೆ. ನನ್ನ ಗೀಡೆ ಪ್ರಧಾನಮಂತ್ರಿಗಳ ಗಮನ ಸೆಳೆಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನನ್ನ ಸಂತೋಷಕ್ಕೆ ಇದೀಗ ಮಿತಿಯೇ ಇಲ್ಲದಂತಾಗಿದೆ. ಇದು ನನ್ನ ಜೀವಮಾನದ ಸ್ಮರಣೆಯಾಗಿದೆ. ನನ್ನ ಜೀವನದಲ್ಲಿ ಇಂತಹ ಮನ್ನಣೆಯನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಮಂಜುನಾಥ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಬಿಜೆಪಿ ಮುಖಂಡರೊಂದಿಗೆ ಭಾನುವಾರ ಮಂಜುನಾಥ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದರು.

ಪ್ರಧಾನಿಯವರ ಮನ್ನಣೆ ಎಲೆಡೆ ಹರಡುತ್ತಿದ್ದು, ಇದೀಗ ಮುಂಜುನಾಥ್ ಅವರ ಸ್ನೇಹಿತರು, ಸಂಬಂಧಿಕರು ಮತ್ತು ಹಿತೈಷಿಗಳು ಅವರ ಮನೆಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಗಡಿನಾಡು ಮತ್ತು ಕನ್ನಡ ಸಾಹಿತ್ಯಕ್ಕೆ ಗೌರವ ತಂದುಕೊಟ್ಟಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಮಂಜುನಾಥ್ ಅವರು ‘ಚಿತ್ತ ಚಿತ್ತಾರದ ಹೂವೆ’ ಕವನ ಸಂಕಲನ ಮತ್ತು ‘ಶಾಪ’ ಎಂಬ ನಾಟಕವನ್ನು ಬರೆದಿದ್ದು, ಇನ್ನೆರಡು ಕೃತಿಗಳು ಬಿಡುಗಡೆಗೆ ಸಿದ್ಧತೆಯ ಹಂತದಲ್ಲಿವೆ ಎಂದು ತಿಳಿದುಬಂದಿದೆ.

"ನಾನು 8 ನೇ ತರಗತಿಯಲ್ಲಿ ಮಕ್ಕಳ ನಿಯತಕಾಲಿಕವನ್ನು ಬರೆದಿದ್ದೆ. ಆದರೆ, ಅದನ್ನು ಪ್ರಕಟಿಸಲು ಸಾಧ್ಯವಾಗಿರಲಿಲ್ಲ. ಮೂವತ್ತು ವರ್ಷಗಳ ಬಳಿಕ ನನ್ನ ಕಲೆಯನ್ನು ಗುರ್ತಿಸಿ, ಗೌರವಿಸಿದ್ದಾರೆ. ಇದೀಗ ನನ್ನ ಈ ಕಲೆಯನ್ನು ಮುಂದುವರೆಸಲು ಮೋದಿಯವರು ಪ್ರೇರೇಪಣೆ ನೀಡಿದ್ದಾರೆಂದು ಮಂಜುನಾಥ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com