ಬೆಂಗಳೂರು: ಕಾಲೇಜಿನಲ್ಲೇ ಯುವತಿಗೆ ಚಾಕು ಇರಿದು ಕೊಂದು, ತಾನೂ ಇರಿದುಕೊಂಡ 'ಭಗ್ನ ಪ್ರೇಮಿ'

ಪ್ರೀತಿ ವಿಚಾರಕ್ಕೆ 'ಭಗ್ನ ಪ್ರೇಮಿ'ಯೋರ್ವ ಕಾಲೇಜಿನಲ್ಲೇ ಯುವತಿಗೆ ಚಾಕು ಇರಿದು ಕೊಂದು ಹಾಕಿರುವ ಘಟನೆ ಮಂಗಳವಾರ ಬೆಂಗಳೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪ್ರೀತಿ ವಿಚಾರಕ್ಕೆ 'ಭಗ್ನ ಪ್ರೇಮಿ'ಯೋರ್ವ ಕಾಲೇಜಿನಲ್ಲೇ ಯುವತಿಗೆ ಚಾಕು ಇರಿದು ಕೊಂದು ಹಾಕಿರುವ ಘಟನೆ ಮಂಗಳವಾರ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ರಾಜಾನುಕುಂಟೆಯಲ್ಲಿರುವ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಇಂದು ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ಚಾಕುವಿನೊಂದಿಗೆ ಕಾಲೇಜು ಪ್ರವೇಶಿಸಿದ ಕೋಲಾರ ಮೂಲದ ಯುವಕ ಕಾಲೇಜು ಅವರಣದಲ್ಲೇ ಯುವತಿಗೆ ಇರಿದಿದ್ದಾನೆ. ಬಳಿಕ ತಾನೂ ಕೂಡ ಚಾಕು ಇರಿದುಕೊಂಡಿದ್ದು, ಕೂಡಲೇ ಇತರೆ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದು, ಈ ವೇಳೆ ಮಾರ್ಗ ಮಧ್ಯೆ ಯುವತಿ ಸಾವನ್ನಪ್ಪಿದ್ದಾರೆ.

ಮೃತ ಯುವತಿಯನ್ನು ಪ್ರೆಸಿಡೆನ್ಸಿ ಕಾಲೇಜಿನ ಬಿಟೆಕ್ ವಿದ್ಯಾರ್ಥಿನಿ ಲಯಸ್ಮಿತಾ ಎಂದು ಗುರುತಿಸಲಾಗಿದ್ದು, ಚಾಕು ಇರಿದ ಭಗ್ನ ಪ್ರೇಮಿಯನ್ನು ನೃಪತುಂಗ ವಿವಿ ವಿದ್ಯಾರ್ಥಿ ಪವನ್ ಕಲ್ಯಾಣ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕಾಚಿಪುರ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.

ಚಾಕು ಇರಿದುಕೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಸ್ತುತ ಕಾಲೇಜಿಗೆ ಸಂತ್ರಸ್ಥ ಯುವತಿಯ ಪೋಷಕರು ದೌಡಾಯಿಸಿದ್ದು ಕಾಲೇಜಿನಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. 

ಮೂಲಗಳ ಪ್ರಕಾರ ಪ್ರೀತಿ ಪ್ರೇಮದ ವಿಚಾರಕ್ಕೆ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಯುವತಿಗೆ ಇರಿದ ಯುವಕ ಕಾಲೇಜಿನ ವಿದ್ಯಾರ್ಥಿಯಲ್ಲ.. ಬದಲಿಗೆ ಹೊರಗಿನವನಾಗಿದ್ದು ನಿತ್ಯ ಆಕೆಯನ್ನು ಹಿಂಬಾಲಿಸಿ ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಇಂದು ಏಕಾಏಕಿ ಚಾಕುವಿನೊಂದಿಗೆ ಕಾಲೇಜು ಪ್ರವೇಶಿಸಿದ ಯುವಕ ನೋಡ ನೋಡುತ್ತಲೇ ಯುವತಿಗೆ ಇರಿದಿದ್ದಾನೆ. ಸ್ಥಳಕ್ಕೆ ರಾಜಾನುಕುಂಟೆ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾವನ್ನಪ್ಪಿದ ಯುವತಿ ಕೂಡ ಕೋಲಾರದ ಭಾಗದ ನಿವಾಸಿ ಎಂದು ಹೇಳಲಾಗುತ್ತಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com