ಬೆಂಗಳೂರು: ಆಯಾ ಕ್ಷೇತ್ರಗಳಲ್ಲಿನ ಅವರ ಕಾರ್ಯವನ್ನು ಗುರುತಿಸಿ ಆರು ಸಂಶೋಧಕರಿಗೆ 2022ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು.
ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ಲಾಭೋದ್ದೇಶವಿಲ್ಲದ ಟ್ರಸ್ಟ್ ಆಗಿದ್ದು, ಸಂಸ್ಥೆಯು ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಮಾನವಿಕತೆ, ಜೀವ ವಿಜ್ಞಾನ, ಗಣಿತ ವಿಜ್ಞಾನ, ಭೌತಿಕ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಕ್ಷೇತ್ರಗಳಲ್ಲಿನ ಸಂಶೋಧಕರನ್ನು ಗುರ್ತಿಸಿ ವಾರ್ಷಿಕವಾಗಿ ಗೌರವಿಸುತ್ತದೆ.
ಭಾರತ ಮತ್ತು ಪ್ರಪಂಚದ ಅಭಿವೃದ್ಧಿಗೆ ವೈಜ್ಞಾನಿಕ ಸಂಶೋಧನೆಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ಇನ್ಫೋಸಿಸ್ ಈ ಪ್ರಶಸ್ತಿಯನ್ನು ನೀಡುತ್ತಿದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಮಹೇಶ್ ಕಾಕಡೆ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಸೇರಿದಂತೆ ಆರು ಮಂದಿ ನಿನ್ನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಹೇಶ್ ಕಾಕಡೆ ಅವರಿಗೆ ಬೀಜಗಣಿತ ಸಂಖ್ಯಾಸೂತ್ರಕ್ಕೆ ಸಂಬಂಧಿಸಿದ ಸಂಶೋಧನೆ ಹಾಗೂ ಸುಧೀರ್ ಅವರಿಗೆ ಸಂವಿಧಾನದ ಮೂಲ ಸ್ವರೂಪದ ತಾತ್ವಿಕತೆ ಕುರಿತ ಬರವಣಿಗೆಗಳಿಗಾಗಿ ಪ್ರಶಸ್ತಿ ನೀಡಲಾಯಿತು. ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಖರಗ್ಪುರ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಸುಮನ್ ಚಕ್ರವರ್ತಿ, ಜೀವವಿಜ್ಞಾನ ವಿಭಾಗದಲ್ಲಿ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ನ ನ್ಯೂರೋಬಯಾಲಜಿ ವಿಭಾಗದ ಪ್ರಾಧ್ಯಾಪಕಿ ವಿದಿತಾ ವೈದ್ಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭೌತವಿಜ್ಞಾನ ವಿಭಾಗದಲ್ಲಿ ಪುಣೆಯ ನ್ಯಾಷನಲ್ ಸೆಂಟರ್ ಫಾರ್ ರೇಡಿಯೊ ಆಸ್ಟ್ರಾನಮಿಯ ಪ್ರಾಧ್ಯಾಪಕ ನಿಸ್ಸಿಂ ಕಾನೇಕರ್ ಹಾಗೂ ಸಮಾಜ ವಿಜ್ಞಾನ ವಿಭಾಗದಲ್ಲಿ ಯೇಲ್ ವಿಶ್ವವಿದ್ಯಾಲಯದ ಆರ್ಥಿಕ ಬೆಳವಣಿಗೆ ಕೇಂದ್ರದ ನಿರ್ದೇಶಕಿ ರೋಹಿಣಿ ಪಾಂಡೆ ಅವರಿಗೆ ಇನ್ಫೊಸಿಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಮೆರಿಕದ ಬರ್ಕ್ಲಿಯ ಸೈಮನ್ಸ್ ಇನ್ಸ್ಟಿಟ್ಯೂಟ್ ಫಾರ್ ದಿ ಥಿಯರಿ ಆಫ್ ಕಂಪ್ಯೂಟಿಂಗ್ನ ನಿರ್ದೇಶಕಿ ಪ್ರೊ. ಶಾಫಿ ಗೋಲ್ಡ್ವಾಸರ್ ಪ್ರಶಸ್ತಿ ಪ್ರದಾನ ಮಾಡಿದರು.
Advertisement