ಕೆಂಪೇಗೌಡ ಏರ್ಪೋರ್ಟ್ನಲ್ಲಿ ಏರ್ಲೈನ್ಸ್ ಸಿಬ್ಬಂದಿ ಎಡವಟ್ಟು: ಪ್ರಯಾಣಿಕರ ಬಿಟ್ಟು ಹಾರಿದ ಗೋ ಫಸ್ಟ್ ವಿಮಾನ, ವ್ಯಾಪಕ ಆಕ್ರೋಶ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ಲೈನ್ಸ್ ಸಿಬ್ಬಂದಿಗಳು ಎಡವಟ್ಟೊಂದನ್ನು ಮಾಡಿದ್ದು, ದೆಹಲಿಗೆ ಹೊರಟಿದ್ದ ‘ಗೋ ಫಸ್ಟ್’ ಕಂಪನಿಯ ವಿಮಾನವು ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ಟೇಕ್ ಆಫ್ ಆದ ಘಟನೆ ಸೋಮವಾರ ನಡೆದಿದೆ.
Published: 10th January 2023 12:05 PM | Last Updated: 10th January 2023 01:27 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ಲೈನ್ಸ್ ಸಿಬ್ಬಂದಿಗಳು ಎಡವಟ್ಟೊಂದನ್ನು ಮಾಡಿದ್ದು, ದೆಹಲಿಗೆ ಹೊರಟಿದ್ದ ‘ಗೋ ಫಸ್ಟ್’ ಕಂಪನಿಯ ವಿಮಾನವು ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ಟೇಕ್ ಆಫ್ ಆದ ಘಟನೆ ಸೋಮವಾರ ನಡೆದಿದೆ.
ಈ ವಿಚಾರವು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಹಲವರು ಕೆಂಪೇಗೌಡ ವಿಮಾನ ನಿಲ್ದಾಣದ ಏರ್ಲೈನ್ಸ್ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿನ್ನೆ (ಜ.9) ಬೆಳಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬೆಂಗಳೂರಿನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ G8 116 ನಂಬರ್ನ ಗೋಫಸ್ಟ್ ವಿಮಾನ ಹೊರಟಿತ್ತು. ಮೊದಲನೇ ಟ್ರಿಪ್ನಲ್ಲಿ ವಿಮಾನಕ್ಕೆ ಬಸ್ನಲ್ಲಿ ಹೋಗಿ 50 ಜನ ಪ್ರಯಾಣಿಕರು ಹತ್ತಿದ್ದರು. ಎರಡನೇ ಟ್ರಿಪ್ನಲ್ಲಿ 54 ಜನರನ್ನು ಟರ್ಮಿನಲ್ನಿಂದ ವಿಮಾನದ ಬಳಿಗೆ ಬಸ್ ಕರೆದೊಯ್ಯಬೇಕಿತ್ತು. ಆದರೆ, ಬಸ್ ಪ್ರಯಾಣಿಕರನ್ನು ಕರೆತರುವ ಮುನ್ನವೆ ವಿಮಾನ ಟೇಕಾಫ್ ಆಗಿದೆ.
ಇದನ್ನೂ ಓದಿ: ಬೀಪ್ ಸೌಂಡ್ ಬಂದ ಕಾರಣ ಜಾಕೆಟ್ ತೆಗೆಯುವಂತೆ ಹೇಳಲಾಗಿತ್ತು, ಶರ್ಟನ್ನಲ್ಲ: ಸಿಐಎಸ್ಎಫ್ ಸ್ಪಷ್ಟನೆ
ಪ್ರಯಾಣಿಕರನ್ನು ಗಮನಿಸದೆ ಏರ್ಲೈನ್ಸ್ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ನಡುವೆ ಘಟನೆ ಸಂಬಂಧ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿ, ಈ ಕುರಿತು ಗೋ ಫಸ್ಟ್ ಕಂಪನಿಯಿಂದ ವಿವರಣೆ ಕೇಳಲಾಗಿದೆ. ತಪ್ಪಾಗಿರುವುದು ದೃಢಪಟ್ಟರೆ ನಿಯಮಗಳ ಪ್ರಕಾರ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಗೋ ಫಸ್ಟ್ ಈವರೆಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪ್ರಯಾಣಿಕರಿಗೆ ಆಗಿರುವ ತೊಂದರೆಗೆ ವಿಷಾದ ವ್ಯಕ್ತಪಡಿಸಿದೆ.