ಬೆಂಗಳೂರು: ಮೆಟ್ರೋ ಪಿಲ್ಲರ್ ಕುಸಿತ, ಮೃತರ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 20 ಲಕ್ಷ, ಬಿಎಂಆರ್ ಸಿಎಲ್ ನಿಂದ 20 ಲಕ್ಷ ರೂ. ಪರಿಹಾರ

ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿದುಬಿದ್ದ ಪರಿಣಾಮ ಮೃತಪಟ್ಟ ತಾಯಿ ಹಾಗೂ ಎರಡು ವರ್ಷದ ಮಗುವಿನ ಕುಟುಂಬಸ್ಥರಿಗೆ ಸಿಎಂ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರೂಪಾಯಿ ಹಾಗೂ ಬಿಎಂಆರ್ ಸಿಎಲ್ ನಿಂದ  20 ಲಕ್ಷ ರೂ. ಪರಿಹಾರವನ್ನು  ಪ್ರಕಟಿಸಲಾಗಿದೆ.
ಮೆಟ್ರೋ ಪಿಲ್ಲರ್ ಕುಸಿತದ ಸ್ಥಳ ಹಾಗೂ ದುರಂತಕ್ಕೆ ಸಿಲುಕಿದ ಕುಟುಂಬ
ಮೆಟ್ರೋ ಪಿಲ್ಲರ್ ಕುಸಿತದ ಸ್ಥಳ ಹಾಗೂ ದುರಂತಕ್ಕೆ ಸಿಲುಕಿದ ಕುಟುಂಬ
Updated on

ಬೆಂಗಳೂರು: ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿದುಬಿದ್ದ ಪರಿಣಾಮ ಮೃತಪಟ್ಟ ತಾಯಿ ಹಾಗೂ ಎರಡು ವರ್ಷದ ಮಗುವಿನ ಕುಟುಂಬಸ್ಥರಿಗೆ ಸಿಎಂ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರೂಪಾಯಿ ಹಾಗೂ ಬಿಎಂಆರ್ ಸಿಎಲ್ ನಿಂದ  20 ಲಕ್ಷ ರೂ. ಪರಿಹಾರವನ್ನು ಪ್ರಕಟಿಸಲಾಗಿದೆ.

ಎಚ್‍ಬಿಆರ್ ಲೇಔಟ್ ಬಳಿ ಮೆಟ್ರೋ ಕಾಮಗಾರಿ ವೇಳೆ ಪಿಲ್ಲರ್‌ಗೆ ನಿಲ್ಲಿಸಿದಂತಹ ಕಬ್ಬಿಣದ ರಾಡ್‌ಗಳು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಹಾಗೂ ಮಗುವಿನ ಮೇಲೆ ಬಿದಿದ್ದವು. ಇದರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ತೇಜಸ್ವಿನಿ (35) ಹಾಗೂ ವಿಹಾನ್ (2 ವರ್ಷ 6 ತಿಂಗಳು) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತಂದೆ ಹಾಗೂ ಮಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ. 

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜುಂ ಪರ್ವೇಜ್, ಇದೊಂದು ದುರಾದೃಷ್ಟಕರ ಘಟನೆಯಾಗಿದ್ದು, ಮೃತರ ಕುಟುಂಬಸ್ಥರಿಗೆ 20 ಲಕ್ಷ ಪರಿಹಾರ ಒದಗಿಸಲಾಗುವುದು ಎಂದರು.

ಮೆಟ್ರೋ ನಿರ್ಮಾಣದಲ್ಲಿ ಸಾಧ್ಯವಾದಷ್ಟು ಅತ್ಯಂತ ಹೆಚ್ಚಿನ ಗುಣಮಟ್ಟವನ್ನು ಅನುಸರಿಸುತ್ತಿದ್ದೇವೆ. ಘಟನೆ ಸಂಬಂಧ ವಿಸ್ತೃತವಾಗಿ ತನಿಖೆ ನಡೆಸಲಾಗುವುದು, ಒಂದು ವೇಳೆ ತಾಂತ್ರಿಕ ದೋಷ ಅಥವಾ ಕಾರ್ಮಿಕರ ತಪ್ಪಿನಿಂದಾದ ಅವಘಡ ಎಂದು ಕಂಡುಬಂದಲ್ಲಿ ಮುಂದೆ ಇಂತಹ ಘಟನೆ ಸಂಭವಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. 

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮೃತರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಹಾಗೂ ಘಟನೆ ಸಂಬಂಧ ಸಮಗ್ರವಾಗಿ ತನಿಖೆ ನಡೆಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com