ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆರಾಯ ಹೀನಾಯ ದಾಖಲೆ ಬರೆದಿದ್ದು, 6 ವರ್ಷಗಳಲ್ಲೇ ಜೂನ್ ತಿಂಗಳಲ್ಲಿ ಕಡಿಮೆ ಮಳೆಯಾಗಿದೆ.
ಈ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಕಳೆದ ಆರು ವರ್ಷಗಳಲ್ಲಿ ಜೂನ್ ತಿಂಗಳಲ್ಲಿ ಅತ್ಯಂತ ಕಡಿಮೆ ಮಳೆ ದಾಖಲಾಗಿದೆ. ಹವಾಮಾನದ ಟ್ವೀಟ್ ಪ್ರಕಾರ, IMD ವೀಕ್ಷಣಾಲಯವು ಜೂನ್ನಲ್ಲಿ ಬೆಂಗಳೂರಿನಲ್ಲಿ ಕೇವಲ 72.3 ಮಿಮೀ ಮಳೆಯಾಗಿದೆ ಎಂದು ಹೇಳಿದೆ. ಇದು ಸರಾಸರಿ 110.3 ಮಿಮೀಗಿಂತ ಕಡಿಮೆಯಾಗಿದೆ.
ಎಚ್ ಎಎಲ್ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ರಮವಾಗಿ 151.1 ಮಿ.ಮೀ ಮತ್ತು 64.9 ಮಿ.ಮೀ ಮಳೆಯಾಗಿದ್ದು, ಇದು ಬೆಂಗಳೂರಿನಲ್ಲಿ ಶೇ.34.45ರಷ್ಟು ಮಳೆ ಕೊರತೆಯನ್ನು ಸೂಚಿಸುತ್ತದೆ. ಇದಲ್ಲದೆ, ದಕ್ಷಿಣ ಆಂತರಿಕ ಕರ್ನಾಟಕವು 56% ನಷ್ಟು ಮಳೆಯ ಕೊರತೆಯನ್ನು ಹೊಂದಿದ್ದರೆ, ಉತ್ತರ ಒಳನಾಡಿನಲ್ಲಿ ಮಳೆಗಾಲದ ಮೊದಲ ತಿಂಗಳಿನಲ್ಲಿ ಶೇ.54% ರಷ್ಟು ಮಳೆ ಕೊರತೆಯಿದೆ.
ಬೆಂಗಳೂರು ಮಾತ್ರವಲ್ಲದೇ ರಾಜ್ಯಾದ್ಯಂತ ಇದೇ ಪ್ರವೃತ್ತಿ ಮುಂದುವರೆದಿದ್ದು, ಅಸಮರ್ಪಕ ಮಳೆಯಿಂದಾಗಿ, ಅನೇಕ ಜಲಾಶಯಗಳಲ್ಲಿ ನೀರಿನ ಮಟ್ಟವು ಶೀಘ್ರವಾಗಿ ಕ್ಷೀಣಿಸುತ್ತಿದೆ ಎಂದು ಹೇಳಲಾಗಿದೆ. ಪ್ರಸ್ತುತ, ರಾಜ್ಯದ ಜಲಾಶಯಗಳಲ್ಲಿ ಕೇವಲ ಶೇ.17 ರಷ್ಟು ಮಾತ್ರ ನೀರು ಉಳಿದಿದ್ದು, ಕರ್ನಾಟಕವು ವಿದ್ಯುತ್ ಉತ್ಪಾದನೆಗೆ ಹೈಡಲ್ ಜಲಾಶಯಗಳ ಮೇಲೆ ಹೆಚ್ಚು ಅವಲಂಬಿತವಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಅಧಿಕಾರಿಗಳು ನೀಡಿರುವ ಮಾಹಿತಿ ಮೇರೆಗೆ ಲಿಂಗನಮಕ್ಕಿಯಲ್ಲಿ ಪ್ರಸ್ತುತ ಕೇವಲ 7% ರಷ್ಟು, ಸೂಪಾದಲ್ಲಿ 21% ಮತ್ತು ವಾರಾಹಿಯಲ್ಲಿ 8% ರಷ್ಟು ನೀರು ಇದೆ. ಕರ್ನಾಟಕಕ್ಕೆ ಕುಡಿಯುವ ನೀರು ಪೂರೈಕೆಗೆ ನಿರ್ಣಾಯಕವಾಗಿರುವ ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇ.27ರಷ್ಟು ನೀರು ಮಾತ್ರ ಉಳಿದಿದೆ ಎಂದು ತಿಳಿದುಬಂದಿದೆ.
ಉಳಿದಂತೆ ಹಾರಂಗಿ 32%, ಹೇಮಾವತಿ, 38%, KRS, 20%, ಮತ್ತು ಕಬಿನಿ, 23%. ಉತ್ತರ ಕರ್ನಾಟಕದಲ್ಲಿ, ಕೃಷ್ಣಾ ಮತ್ತು ಅದರ ಉಪನದಿಗಳು ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿವೆ, ಆದರೆ ಸಂಗ್ರಹಣೆಯು ಕೇವಲ 17% ರಷ್ಟಿದೆ. ಭದ್ರಾ ಜಲಾಶಯವು 35%, ತುಂಗಾಭದ್ರಾ, 3%, ಘಟಪ್ರಭಾ, 8%, ಮಲಪ್ರಭಾ, 19%, ಆಲಮಟ್ಟಿ, 16%, ಮತ್ತು ನಾರಾಯಣಪುರವು ಕೃಷ್ಣಾ ನದಿಯ ಕೆಳಭಾಗದ ಜಲಾಶಯಗಳಲ್ಲಿ 43% ನಷ್ಟು ಹೆಚ್ಚಿನ ಸಂಗ್ರಹವನ್ನು ಹೊಂದಿದೆ ಎಂದು ತಿಳಿದುಬಂದಿದೆ.
Advertisement