ಮಂಗಳೂರು: ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ನಂದಾವರದಲ್ಲಿ ಭಾರೀ ಮಳೆಗೆ ಇಂದು ಶುಕ್ರವಾರ ನಸುಕಿನ ಜಾವ ಮನೆಯ ಮೇಲೆ ಮಣ್ಣು ಕುಸಿದು ಬಿದ್ದು 45 ವರ್ಷದ ಮಹಿಳೆ ಅವಶೇಷಗಳಡಿಯಲ್ಲಿ ಸಜೀವ ಸಮಾಧಿಯಾಗಿದ್ದಾರೆ. ಮಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮೃತ ಮಹಿಳೆಯನ್ನು ಜರೀನಾ ಎಂದು ಗುರುತಿಸಲಾಗಿದ್ದು, ರಕ್ಷಿಸಲ್ಪಟ್ಟ ಆಕೆಯ ಮಗಳನ್ನು ಶಫಾ ಎಂದು ಗುರುತಿಸಲಾಗಿದೆ. ಇಂದು ನಸುಕಿನಲ್ಲಿ ಜರೀನಾ ಅವರ ಮನೆಯ ಮೇಲೆ ಮಣ್ಣು ಕುಸಿದು ಬಿದ್ದ ಘಟನೆ ನಡೆದಿದೆ.
ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ಶಫಾ ಅವರನ್ನು ಅವಶೇಷಗಳಡಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದು, ಜರೀನಾ ಜೀವಂತ ಸಮಾಧಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಬಂಟ್ವಾಳ ತಹಶೀಲ್ದಾರ್ ಎಸ್ ಬಿ ಕೂಡಲಗಿ ಭೇಟಿ ನೀಡಿ ಕುಟುಂಬಕ್ಕೆ ಸರಕಾರದಿಂದ ನೆರವು ನೀಡುವುದಾಗಿ ಭರವಸೆ ನೀಡಿದರು.
ಇದು ದಕ್ಷಿಣ ಕನ್ನಡದಲ್ಲಿ ಮಳೆ ಸಂಬಂಧಿ ನಾಲ್ಕನೇ ಸಾವು. ನಿನ್ನೆ ಮುಂಜಾನೆ ನಾರಾಯಣ ಎಂಬ ಕಾರ್ಮಿಕ ಕಾಲು ಸೇತುವೆಯನ್ನು ದಾಟುವಾಗ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಮೂಡುಬಿದಿರೆಯ ಮತ್ತೊಬ್ಬ ಯುವಕ ಕೂಡ ಕೊಚ್ಚಿಕೊಂಡು ಹೋಗಿದ್ದರು. ನಾರಾಯಣ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಉಳ್ಳಾಲದ ಪೇಂಟರ್ ಕೂಡ ಮಂಗಳವಾರ ಹೊಳೆಯಲ್ಲಿ ಕೊಚ್ಚಿ ಹೋಗಿದ್ದು, ಸುರತ್ಕಲ್ನ ಮತ್ತೋರ್ವ ಯುವಕನಿಗೆ ವಿದ್ಯುತ್ ಸ್ಪರ್ಶವಾಗಿತ್ತು.
Advertisement