ಬೆಂಗಳೂರು: ರ‍್ಯಾಪಿಡೋ ಬೈಕ್ ಸವಾರರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಜೀವನೋಪಾಯಕ್ಕೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಿದ್ದ ವ್ಯಕ್ತಿಯೊಬ್ಬರ ಮೇಲೆ ಮೂವರು ದುಷ್ಕರ್ಮಗಳು ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಜೀವನೋಪಾಯಕ್ಕೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಿದ್ದ ವ್ಯಕ್ತಿಯೊಬ್ಬರ ಮೇಲೆ ಮೂವರು ದುಷ್ಕರ್ಮಗಳು ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಕೊತ್ತನೂರಿನ ನಿವಾಸಿ ಎನ್ ಚಂದನ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಹಗಲಿನಲ್ಲಿ ಫೋಟೋಕಾಪಿ ಅಂಗಡಿ ನಡೆಸುತ್ತಿದ್ದ ಚಂದನ್ ಅವರು, ಹೆಚ್ಚುವರಿ ಹಣ ಗಳಿಸಲು ರಾತ್ರಿ ವೇಳೆ ರ‍್ಯಾಪಿಡೋ ಬೈಕ್ ಸೇವೆ ಆರಂಭಿಸಿದ್ದರು.

ಇದಕ್ಕಾಗಿ ರ‍್ಯಾಪಿಡೋ ಆ್ಯಪ್ ಮೂಲಕ ನೋಂದಾವಣಿ ಮಾಡಿಕೊಂಡಿದ್ದರು. ಬೈಕ್ ಟ್ಯಾಕ್ಸಿ ಸೇವೆ ಆರಂಭ ಮಾಡಿದ ಮೊದಲ ದಿನವೇ ಮೂವರು ದುಷ್ಕರ್ಮಿಗಳು ಚಂದನ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನಿಮಿಂದಲೇ ನಮ್ಮ ಆಟೋ ಸೇವೆ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿರುವ ದುಷ್ಕರ್ಮಿಗಳು, ಹಲ್ಲೆ ನಡೆಸಿದ್ದಾರೆ. ಬಳಿಕ ಹೆಲ್ಮೆಟ್ ಹಾಗೂ ಮೊಬೈಲ್ ಫೋನ್ ಕಸಿದು ಪರಾರಿಯಾಗಿದ್ದಾರೆ.

ಕೋಗಿಲು ಮುಖ್ಯರಸ್ತೆಯ ಬೆಲಹಳ್ಳಿ ಕ್ರಾಸ್‌ನಲ್ಲಿ ಬುಧವಾರ ಬೆಳಗಿನ ಜಾವ 1.40 ರಿಂದ 1.55 ರ ನಡುವೆ ಮೂವರು ನನ್ನ ಮೇಲೆ ಹಲ್ಲೆ ನಡೆಸಿದ್ದರು. ಕಹಿ ಘಟನೆ ಬಳಿಕ ಇದೀಗ ನನ್ನ ಮೊಬೈಲ್ ನಿಂದ್ ಆ್ಯಪ್ ನ್ನು ತೆಗೆದು ಹಾಕಿದ್ದೇನೆ. ಇನ್ನು ಮುಂದೆ ಎಂದಿಗೂ ಟ್ಯಾಕ್ಸಿ ಬೈಕ್ ಸೇವೆ ಆರಂಭಿಸುವುದಿಲ್ಲ ಎಂದು ಚಂದನ್ ಅವರು ಹೇಳಿದ್ದಾರೆ.

ಮೊದಲ ದಿನವೇ ಇಂತಹ ಕಹಿ ಅನುಭವವಾಗುತ್ತದೆ ಎಂದುಕೊಂಡಿರಲಿಲ್ಲ. ಮಧ್ಯರಾತ್ರಿ 1.30ರ ಸುಮಾರಿಗೆ ಡ್ರಾಪ್'ಗಾಗಿ ಗ್ರಾಹಕರಿಂದ ಕರೆ ಬಂದಿದ್ದು, ಸ್ಥಳಕ್ಕೆ ಹೋದಾಗ ಮೂವರು ವ್ಯಕ್ತಿಗಳಿದ್ದರು. ಈ ವೇಳೆ ಮೂವರ ಬಳಿ ರ್ಯಾಪಿಡೋದಿಂದ ಬಂದಿರುವುದಾಗಿ ಹೇಳಿದೆ. ಈ ವೇಳೆ ಮೂವರು ನನ್ನ ಮೇಲೆ ಹಲ್ಲೆ ನಡೆಸಲು ಆರಂಭಿಸಿದ್ದರು. ಗ್ರಾಹಕರಿಗಾಗಿ ಹೆಚ್ಚುವರಿ ಹೆಲ್ಮೆಟ್ ತೆಗೆದುಕೊಂಡು ಹೋಗಿದ್ದೆ. ಆ ಹೆಲ್ಮೆಟ್ ಕಸಿದುಕೊಂಡು ಅದರಿಂದ ಹಲ್ಲೆ ನಡೆಸಿದರು. ಟ್ಯಾಕ್ಸಿ ಬೈಕ್‌ಗಳಿಂದಾಗಿ ಆಟೋ ಚಾಲಕರು ನಷ್ಟ ಅನುಭವಿಸುತ್ತಿದ್ದಾರೆ ಎಂದರು. ನನ್ನ ಮೊಬೈಲ್ ಹಾಗೂ ಹೆಲ್ಮೆಟ್ ಕಸಿದುಕೊಂಡು ಪರಾರಿಯಾದರು. ಘಟನೆ ವೇಳೆ ಆರೋಪಿಗಳ ವಾಹನದ ನೋಂದಣಿ ಸಂಖ್ಯೆ ದಾಖಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ವಾಹನವು ಕಂದು ಬಣ್ಣದ್ದಾಗಿತ್ತು ಎಂದು ಚಂದನ್ ಹೇಳಿದ್ದಾರೆ.

ಘಟನೆ ಬಳಿಕ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಚಂದನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಡುವೆ ಘಟನಾ ಸ್ಥಳದಲ್ಲಿರುವ ಬಹುತೇಕ ಸಿಸಿಟಿವಿಗಳು ಕೆಟ್ಟಿದ್ದು, ದುಷ್ಕರ್ಮಿಗಳ ಪತ್ತೆ ಕಷ್ಟಕರವಾಗಿದೆ ಎಂದು ಹೇಳಲಾಗುತ್ತಿದೆ.

ಘಟನೆ ಸಂಬಂಧ ದುಷ್ಕರ್ಮಿಗಳ ವಿರುದ್ಧ ದರೋಡೆ ಹಾಗೂ ಹಲ್ಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com