
ಸಾಂದರ್ಭಿಕ ಚಿತ್ರ
ದಾವಣಗೆರೆ: ದಾವಣಗೆರೆಯಲ್ಲಿ ಪಾಪಿ ತಂದೆಯೊಬ್ಬ ತನ್ನ ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆಗೈದ ಅಮಾನವೀಯ ಘಟನೆ ನಡೆದಿದೆ.
ಮೃತ ಮಕ್ಕಳು ನಾಲ್ಕು ವರ್ಷದ ಅದ್ವೈತ್ ಮತ್ತು ಅನ್ವೀತ್ ಎಂದು ತಿಳಿದುಬಂದಿದೆ. ಇನ್ನು ತನ್ನ ಮಕ್ಕಳನ್ನು ತಂದೆ 35 ವರ್ಷದ ಅಮರ ಕಿತ್ತೂರು ಹತ್ಯೆ ಮಾಡಿದ್ದಾನೆ. ಅಮರ ಕಿತ್ತೂರು ಮೂಲತಃ ಗೋಕಾಕ ನಿವಾಸಿಯಾಗಿದ್ದು ದಾವಣಗೆರೆ ನಗರದ ಆಂಜನೇಯ ಮಿಲ್ ಬಡಾವಣೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದನು.
ಅಮರ ಹರಿಹರದ ಕಾರ್ಗಿಲ್ ಪ್ಯಾಕ್ಟರಿಯಲ್ಲಿ ಕೆಮಿಕಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು ತನ್ನ ಪತ್ನಿ ಜಯಲಕ್ಷ್ಮಿ ತವರು ಮನೆ ವಿಜಯಪುರಕ್ಕೆ ಹೋಗಿದ್ದಳು. ಇನ್ನು ಅಮರ ತನ್ನ ಮಕ್ಕಳನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಚಳಗೆರೆ ಟೋಲ್ ಗೇಟ್ ಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ಅಲ್ಲಿ ಇಬ್ಬರ ಬಾಯಿಗೂ ಟೇಪ್ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳ ದುರ್ಮರಣ
ನಂತರ ಮಕ್ಕಳ ಶವವನ್ನು ಕಾರಿನಲ್ಲಿ ತಂದಿದ್ದನು. ಇನ್ನು ಮಕ್ಕಳ ಸಾವಿನ ಬಗ್ಗೆ ಸಂಶಯ ಬಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ತನಿಖೆಯ ವೇಳೆ ಮಕ್ಕಳನ್ನು ತಾನೇ ಕೊಲೆ ಮಾಡಿದ್ದಾಗಿ ಅಮರ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.