‘ಕಾವೇರಿ 2.0’ ಜನಸ್ನೇಹಿ ತಂತ್ರಾಂಶಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಾಲನೆ

ಕರ್ನಾಟಕ ಮುದ್ರಾಂಕ ಇಲಾಖೆ ‘ಕಾವೇರಿ 2.0’ ಜನಸ್ನೇಹಿ ತಂತ್ರಾಂಶವನ್ನು ಜಾರಿಗೆ ತಂದಿದ್ದು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ತಂತ್ರಾಂಶಕ್ಕೆ ಚಾಲನೆ ನೀಡಿದರು.
ಕಾವೇರಿ 2.0 ತಂತ್ರಾಂಶಕ್ಕೆ ಚಾಲನೆ ನೀಡಿದ ಕೃಷ್ಣ ಬೈರೇಗೌಡ
ಕಾವೇರಿ 2.0 ತಂತ್ರಾಂಶಕ್ಕೆ ಚಾಲನೆ ನೀಡಿದ ಕೃಷ್ಣ ಬೈರೇಗೌಡ

ಬೆಂಗಳೂರು: ಕರ್ನಾಟಕ ಮುದ್ರಾಂಕ ಇಲಾಖೆ ‘ಕಾವೇರಿ 2.0’ ಜನಸ್ನೇಹಿ ತಂತ್ರಾಂಶವನ್ನು ಜಾರಿಗೆ ತಂದಿದ್ದು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ತಂತ್ರಾಂಶಕ್ಕೆ ಚಾಲನೆ ನೀಡಿದರು.

ಗುರುವಾರ ಗಾಂಧಿ ನಗರದಲ್ಲಿನ ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ ಕಾವೇರಿ 2.0 ಜನಸ್ನೇಹಿ ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, 'ಆಡಳಿತದಲ್ಲಿ ಪಾರದರ್ಶಕತೆ ಮತ್ತು ವೇಗ ತರುವ ಉದ್ದೇಶದಿಂದ ತಂತ್ರಜ್ಞಾನ ಬಳಕೆ ಮಾಡಿಕೊಂಡು ನಾಗರಿಕರಿಗೆ ಸೇವೆ ನೀಡುತ್ತಾ ಬಂದಿದೆ. ಇದೇ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾವೇರಿ 2.0 ತಂತ್ರಾಂಶವನ್ನು ಜಾರಿಗೆ ತರಲಾಗಿದೆ ಎಂದರು.

‘ಈ ತಂತ್ರಾಂಶದ ಬಳಕೆಯಿಂದ ನಾಗರಿಕರು ತಮ್ಮ ಸ್ವತ್ತುಗಳ ನೋಂದಣಿ ಸಂದರ್ಭದಲ್ಲಿ ಉಪನೋಂದಣಿ ಕಚೆರಿಯಲ್ಲಿ ನೋಂದಣಿಗೆ ಕಾಯಬೇಕಾದ ಪ್ರಸಂಗ ಬರುವುದಿಲ್ಲ. ತಂತ್ರಾಂಶ ವೆಬ್ ಆಧಾರಿತವಾಗಿದ್ದು, ಗಣಕಯಂತ್ರದ ಮೂಲಕ ಅಂತರ್ ಜಾಲ ಸಂಪರ್ಕದಿಂದ ಉಪ ನೋಂದಣಿ ಕಚೇರಿಗೆ ನೋಂದಣಿ ಪೂರ್ವದಲ್ಲಿ ಸಲ್ಲಿಸಬೇಕಾದ ದಾಖಲೆಗಳನ್ನು ಆನ್ಲೈನ್ ಮೂಲಕ ಸಂಬಂಧಪಟ್ಟ ಉಪನೋಂದಣಾಧಿಕಾರಿಗಳಿಗೆ ಸಲ್ಲಿಸಬಹುದು. ನಂತರ ಉಪನೋಂದಣಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸಬೇಕಾದ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳ ವಿವರದೊಂದಿಗೆ ಆನ್ಲೈನ್ ಮೂಲಕವೇ ದಾಖಲೆಗಳನ್ನು ಪರಿಶೀಲಿಸಿ ನಾಗರಿಕರ ಲಾಗ್‍ಇನ್‍ಗೆ ಕಳುಹಿಸುತ್ತಾರೆ. ನಾಗರೀಕರು ಶುಲ್ಕಗಳನ್ನು ಆನ್‍ಲೈನ್ ಮೂಲಕ ನೇರವಾಗಿ ಖಜಾನೆಗೆ ಜಮಾ ಮಾಡುವ ಮೂಲಕ ನೋಂದಣಿ ದಿನಾಂಕವನ್ನು ನಿಗದಿ ಮಾಡಿಕೊಳ್ಳಬಹುದಾಗಿದೆ. ಆಮೂಲಕ ಉಪನೋಂದಣಾಧಿಕಾರಿಗಳ ಕಚೇರಿಯಲ್ಲೇ ದಿನಗಟ್ಟಲೆ ಕಾಯುತ್ತಿದ್ದ ನಾಗರಿಕರಿಗೆ ಕೆಲವೇ ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಕಾವೇರಿ ತಂತ್ರಾಂಶ ಸರ್ಕಾರದ ಬೇರೆ ಇಲಾಖೆಗಳ ತಂತ್ರಾಂಶಗಳಾದ ಭೂಮಿ, ಇ-ಸ್ವತ್ತು, ಇ-ಆಸ್ತಿಗಳೊಂದಿಗೆ ಸಂಯೋಜನೆಯಾಗಿರುವ ಕಾರಣ ಮೋಸ-ವಂಚನೆಗಳಿಗೆ ಕಡಿವಾಣ ಹಾಕಲಾಗಿದೆ. ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಾಗರಿಕರಿಗೆ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಸರ್ಕಾರವು ಜನಸ್ನೇಹಿಯಾಗಿ ಕೆಲಸ ಮಾಡಲು ಅಧಿಕಾರಿ ವರ್ಗದ ಸಹಕಾರ ಅತ್ಯಂತ ಅವಶ್ಯಕ. ಹೀಗಾಗಿ ಸರಕಾರದ ಜನಸ್ನೇಹಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಎಲ್ಲ ಅಧಿಕಾರಿಗಳು ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಕಾವೇರಿ 2.0 ತಂತ್ರಾಂಶದ ಮೂಲಕ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಮತ್ತಷ್ಟು ಜನಸ್ನೇಹಿಯಾಗಲಿ ಹಾಗೂ ಈ ಮಹತ್ಕಾರ್ಯದಲ್ಲಿ ಕೆಲಸ ನಿರ್ವಹಿಸಿದ ಎಲ್ಲ ಅಧಿಕಾರಿಗಳಿಗೂ ಸಚಿವ ಕೃಷ್ಣಬೈರೇಗೌಡ ಅಭಿನಂದನೆ ಸಲ್ಲಿಸಿದರು.

ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತೆ ಡಾ.ಮಮತ ಬಿ.ಆರ್. ಮಾತನಾಡಿ, ರಾಜ್ಯದ 256 ಉಪನೋಂದಣಿ ಕಚೇರಿಗಳ ಪೈಕಿ 196 ಉಪನೋಂದಣಿ ಕಚೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಜಾರಿಯಾಗಿದ್ದು, ಗಾಂಧಿನಗರ ಜಿಲ್ಲಾ ನೋಂದಣಿ ವ್ಯಾಪ್ತಿಯ 9 ಉಪನೋಂದಣಿ ಕಚೇರಿಯಲ್ಲಿ ಕಾವೇರಿ 2.0 ತಂತ್ರಾಂಶಕ್ಕೆ ಚಾಲನೆ ನೀಡಿದ್ದಾರೆ.

ಕಂದಾಯ ಇಲಾಖೆಯ ಕಾರ್ಯದರ್ಶಿ ರಶ್ಮಿ ಮಹೇಶ್, ಇ-ಆಡಳಿತ ಕಾರ್ಯದರ್ಶಿ ವಿ.ಪೊನ್ನುರಾಜ್  ಹಾಗೂ ಉಪ ನೋಂದಣಿ, ಮಹಾ ಪರಿವೀಕ್ಷಕರು, ಸಹಾಯಕ ನೋಂದಣಿ ಮಹಾಪರಿವೀಕ್ಷಕರು, ಗಾಂಧಿನಗರ ಜಿಲ್ಲಾ ನೋಂದಣಾಧಿಕಾರಿಗಳು, ಗಾಂಧಿನಗರ ಜಿಲ್ಲಾ ನೋಂದಣಿ ವ್ಯಾಪ್ತಿಯ ಎಲ್ಲ ಉಪ ನೋಂದಣಾಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com