ಬೆಂಗಳೂರು: ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುವೆಂಪು ವೃತ್ತದ ಬಳಿಯ ಗಲಾಟೆ ಪ್ರಕರಣವೊಂದರಲ್ಲಿ ಆಟೋರಿಕ್ಷಾ ಚಾಲಕನೊಬ್ಬ ಮಲ್ಲೇಶ್ವರಂನ 38 ವರ್ಷದ ಉದ್ಯಮಿಯೊಬ್ಬರ ಕಾರಿನ ಹಿಂಬದಿಯ ಗಾಜನ್ನು ಕಲ್ಲಿನಿಂದ ಒಡೆದು ಹಾನಿಗೊಳಿಸಿದ್ದಾನೆ.
ಮಹಿಳೆ ದೀಪಾ ಪಾಟೀಲ್ ಎಂಬುವವರು ಕುಟುಂಬ ಸದಸ್ಯರು ಮತ್ತು ಕಾರು ಚಾಲಕನೊಂದಿಗೆ ಕಚೇರಿ ಕೆಲಸಕ್ಕಾಗಿ ದೇವನಹಳ್ಳಿಗೆ ಪ್ರಯಾಣ ಬೆಳೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸಿಗ್ನಲ್ ಜಂಪ್ ಮಾಡಲು ಯತ್ನಿಸಿದ ಆಟೋ ಚಾಲಕ ಸಂತ್ರಸ್ತೆಯ ಕಾರನ್ನು ಉಜ್ಜಿಕೊಂಡು ಹೋಗಿದ್ದಾನೆ.
ಘಟನೆಗೆ ಸಂತ್ರಸ್ತೆಯೇ ಕಾರಣ ಎಂದು ಆರೋಪಿಸಿ ಆಕೆಯಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದು ಆತನದೇ ತಪ್ಪು ಎಂದು ಆಕೆ ಸಮಜಾಯಿಷಿ ನೀಡಲು ಮುಂದಾದಾಗ ಆರೋಪಿ ರಸ್ತೆಯಲ್ಲಿದ್ದ ಕಲ್ಲನ್ನು ತೆಗೆದುಕೊಂಡು ಕಾರಿನ ಗಾಜು ಒಡೆದಿದ್ದಾನೆ. ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಕುಟುಂಬದ ಸದಸ್ಯರೊಬ್ಬರು ಗಾಯಗೊಂಡಿದ್ದಾರೆ. ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆಟೋ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.
ದೀಪಾ ನೀಡಿರುವ ದೂರಿನ ಪ್ರಕಾರ, ಶನಿವಾರ ಬೆಳಗ್ಗೆ 7.40 ರಿಂದ 8.10ರ ನಡುವೆ ಎಂಇಎಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಎಸ್ಯುವಿ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತುಕೊಂಡಿದೆ. ಈ ವೇಳೆ ಎಡ ಭಾಗದಿಂದ ಬಂದ ಆರೋಪಿ ಕಾರಿನ ಎಡಭಾಗವನ್ನು ಉಜ್ಜಿಕೊಂಡು ಸಾಗಿದ್ದಾನೆ.
'ಇದು ನನ್ನ ಕಾರು ಚಾಲಕನ ತಪ್ಪು ಎಂದು ಆರೋಪಿಸಿ ಆಟೋ ಚಾಲಕ 5,000 ರೂ. ನೀಡುವಂತೆ ಕೇಳಿದ್ದಾನೆ. ಇದೇ ವಿಚಾರವಾಗಿ ನಡೆದ ವಾಗ್ವಾದದ ವೇಳೆ ಕಲ್ಲು ತೆಗೆದುಕೊಂಡು ಕಾರಿನ ಹಿಂಬದಿಯ ಗಾಜನ್ನು ಒಡೆದಿದ್ದಾನೆ. ಇದರಿಂದ ನನ್ನ ಸಹೋದರನಿಗೆ ಗಾಯಗಳಾಗಿವೆ. ಕೂಡಲೇ ಜಾಲಹಳ್ಳಿ ಠಾಣೆಗೆ ತೆರಳಿದೆವು. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಜಂಕ್ಷನ್ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ನಿಷ್ಕ್ರಿಯಗೊಂಡಿದ್ದು, ಯಾವುದೇ ದೃಶ್ಯಾವಳಿಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಕಾರಿನ ದುರಸ್ತಿ ವೆಚ್ಚ ಸುಮಾರು 20,000 ರೂ. ಆಗುತ್ತದೆ' ಎಂದು ತಿಳಿಸಿದ್ದಾರೆ.
ಘಟನೆಯನ್ನು ಖಚಿತಪಡಿಸಿರುವ ಜಾಲಹಳ್ಳಿ ಪೊಲೀಸರು, ಆಟೋ ಚಾಲಕನನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ತಿಳಿಸಿದ್ದಾರೆ. 'ದೂರುದಾರರ ಪ್ರಕಾರ, ಚಾಲಕನಿಗೆ ಸುಮಾರು 30 ವರ್ಷ ವಯಸ್ಸಾಗಿರಬೇಕು ಮತ್ತು ಸಂತ್ರಸ್ತೆಯನ್ನು ಕನ್ನಡದಲ್ಲಿ ನಿಂದಿಸುತ್ತಿದ್ದನು. ಸುಳಿವುಗಳನ್ನು ಪಡೆಯಲು ಇತರ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement