ಅನ್ನ ಭಾಗ್ಯ ಯೋಜನೆ: ಅಕ್ಕಿ ಪೂರೈಸಲು ಮುಂದೆ ಬಂದ ಪಂಜಾಬ್ ರಾಜ್ಯಕ್ಕೆ ತಂಡ ರವಾನಿಸಲು ಸರ್ಕಾರ ಮುಂದು!

ಅನ್ನ ಭಾಗ್ಯ ಯೋಜನೆಯಡಿ ಉಚಿತ ವಿತರಣೆಗಾಗಿ ಅಕ್ಕಿಯನ್ನು ಸಂಗ್ರಹಿಸುವ ಪ್ರಯತ್ನದಲ್ಲಿರುವ ರಾಜ್ಯ  ಸರ್ಕಾರವು, ಅಕ್ಕಿ ಬೆಳೆಯುವ ಹಲವು ರಾಜ್ಯಗಳೊಂದಿಗೆ ಮಾತುಕತೆ ನಡೆಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಅನ್ನ ಭಾಗ್ಯ ಯೋಜನೆಯಡಿ ಉಚಿತ ವಿತರಣೆಗಾಗಿ ಅಕ್ಕಿಯನ್ನು ಸಂಗ್ರಹಿಸುವ ಪ್ರಯತ್ನದಲ್ಲಿರುವ ರಾಜ್ಯ  ಸರ್ಕಾರವು, ಅಕ್ಕಿ ಬೆಳೆಯುವ ಹಲವು ರಾಜ್ಯಗಳೊಂದಿಗೆ ಮಾತುಕತೆ ನಡೆಸುತ್ತಿದೆ.

ಇದರಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮಾತುಕತೆ ನಡೆಸಿದ್ದು, ಅಕ್ಕಿ ನೀಡಲು ಪಂಜಾಬ್ ಸರ್ಕಾರ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಅಧಿಕಾರಿಗಳ ತಂಡ ಶೀಘ್ರದಲ್ಲೇ ಪಂಜಾಬ್‌ಗೆ ರಾಜ್ಯಕ್ಕೆ ಭೇಟಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಅನ್ನ ಭಾಗ್ಯ ಯೋಜನೆ’ಯಡಿ ಜನರಿಗೆ ವಿತರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು 2.28 ಲಕ್ಷ ಟನ್ ಅಕ್ಕಿ ಪೂರೈಸುವಂತೆ ನಿಗಮವನ್ನು ಕೋರಿತ್ತು. ಯೋಜನೆಯನ್ವಯ, ರಾಜ್ಯ ಸರಕಾರವು ಬಡತನ ರೇಖೆಯ ಕೆಳಗಿನ ಕುಟುಂಬಗಳ ಪ್ರತಿ ಸದಸ್ಯರಿಗೆ ನೀಡುವ ಉಚಿತ ಅಕ್ಕಿಯನ್ನು ಈಗಿನ 5 ಕೆಜಿಯಿಂದ 10 ಕೆಜಿಗೆ ಏರಿಸಿತ್ತು.

ಇದು ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿಗಳ ಪೈಕಿ ಒಂದಾಗಿದೆ, ಜುಲೈ 1ರಿಂದ ಹೆಚ್ಚುವರಿ ಅಕ್ಕಿ ನೀಡಲು ರಾಜ್ಯ ಸರಕಾರ ಉದ್ದೇಶಿಸಿದೆ.

ಅಕ್ಕಿಯನ್ನು ಪೂರೈಸಲು ನಿಗಮವು ಜೂನ್ 12ರಂದು ಒಪ್ಪಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಬಳಿಕ ಕೇಂದ್ರ ಸರಕಾರವು ಸೂಚನೆಯೊಂದನ್ನು ಹೊರಡಿಸಿ, ನಿಗಮದಿಂದ ರಾಜ್ಯ ಸರಕಾರಗಳಿಗೆ ಗೋಧಿ ಮತ್ತು ಅಕ್ಕಿಯನ್ನು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಆದೇಶಿಸಿತು. ಎಫ್‌ಸಿಐ ಹಠಾತ್ ನಿರ್ಧಾರದಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಹಿನ್ನಡೆಯುಂಟಾದಂತಾಗಿದೆ.

ಇದು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡುವೆ ರಾಜಕೀಯ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಸಮಯ ಮೀರುತ್ತಿದ್ದು, ರಾಜ್ಯ ಸರ್ಕಾರವು ವಿವಿಧ ಮೂಲಗಳಿಂದ ಅಕ್ಕಿಯನ್ನು ಸಂಗ್ರಹಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಛತ್ತೀಸ್‌ಗಢ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಅನ್ನಭಾಗ್ಯ ಯೋಜನೆಗೆ ರಾಜ್ಯ ಸರ್ಕಾರಕ್ಕೆ 2,28,000 ಮೆಟ್ರಿಕ್ ಟನ್ ಅಕ್ಕಿಯ ಅಗತ್ಯವಿದೆ, ಈಗಾಗಲೇ ತೆಲಂಗಾಣ ಸರ್ಕಾರ ಅಗತ್ಯವಿರುವ ಅಕ್ಕಿ ಲಭ್ಯವಿಲ್ಲ ಎಂದು ಹೇಳಿದ್ದು, ಛತ್ತೀಸ್ಗಢ ಸರ್ಕಾರ ಅಕ್ಕಿ ಇರುವುದಾಗಿ ತಿಳಿಸಿದೆ. ಆದರೆ, ಅಲ್ಲಿಂದ ಅಕ್ಕಿ ಸಾಗಿಸಲು ಸಾರಿಗೆ ವೆಚ್ಚ ಹೆಚ್ಚಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು.

ಏತನ್ಮಧ್ಯೆ, ಕಾಂಗ್ರೆಸ್ ಸರ್ಕಾರಕ್ಕೆ ಪಂಜಾಬ್‌ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಬೆಂಬಲ ಸೂಚಿಸಿದ್ದು, ರಾಜ್ಯ ಸರ್ಕಾರಕ್ಕೆ ನೆರವು ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com